ಸಾಲಿಗ್ರಾಮದಲ್ಲಿ ಶಾಲಾ ವಾಹನ ಹರಿದು ಸ್ಥಳದಲ್ಲೇ ಬಾಲಕ ಸಾವು
ಸಾಲಿಗ್ರಾಮ, ಜುಲೈ 20: ಖಾಸಗಿ ಶಾಲಾ ವಾಹನ ಹರಿದು ನಾಲ್ಕು ವರ್ಷದ ಬಾಲಕ ಮೃತಪಟ್ಟ ಘಟನೆ ಕೃಷ್ಣರಾಜನಗರ ತಾಲ್ಲೂಕು ಬಳ್ಳೂರು ಗ್ರಾಮದಲ್ಲಿ ನಡೆದಿದೆ.
ಬಂಟ್ವಾಳ ಟೋಲ್ ಬಳಿ ಕಾರು-ಟ್ಯಾಂಕರ್ ನಡುವೆ ಅಪಘಾತ; ನಾಲ್ವರ ಸಾವು
ಬಳ್ಳೂರು ಗ್ರಾಮದ ನಿವಾಸಿ ಗಣೇಶ್ ಎಂಬುವರ ಮಗ ಭರತ್ ಮೃತಪಟ್ಟ ಬಾಲಕ. ಲಕ್ಷ್ಮೀಪುರ ಗ್ರಾಮದ ಹೊರವಲಯದಲ್ಲಿನ ಖಾಸಗಿ ಶಾಲೆಯಲ್ಲಿ ಭರತ್ ಎಲ್ಕೆಜಿ ಅಭ್ಯಾಸ ಮಾಡುತ್ತಿದ್ದ. ಶುಕ್ರವಾರ ಸಂಜೆ ಶಾಲೆ ಮುಗಿಸಿಕೊಂಡು ಅದೇ ಶಾಲೆಯ ವಾಹನದಲ್ಲಿ ಮನೆ ಬಳಿ ಇಳಿಯುತ್ತಿದ್ದಾಗ ವಾಹನ ವೇಗದಲ್ಲಿ ಮುಂದೆ ಸಾಗಿದೆ. ಮುಗ್ಗರಿಸಿ ಬಿದ್ದ ಆ ಬಾಲಕನ ಮೇಲೆ ಶಾಲಾ ವಾಹನದ ಹಿಂದಿನ ಚಕ್ರ ಹರಿದಿದೆ. ಬಾಲಕನಿಗೆ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.
ಶಾಲಾ ಆಡಳಿತ ಮಂಡಳಿ ನಿಯಮಾನುಸಾರ ವಾಹನಕ್ಕೆ ಸಿಬ್ಬಂದಿ ನೇಮಿಸಿಲ್ಲ. ಚಾಲಕನ ಅಜಾಗರೂಕತೆಯಿಂದ ಈ ಘಟನೆ ನಡೆದಿದೆ ಎಂದು ಶಾಲೆಯ ವಿರುದ್ಧ ಸೂಕ್ತ ಕ್ರಮಕ್ಕೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಚಾಲಕ ಹಾಗೂ ವಾಹನವನ್ನು ವಶಕ್ಕೆ ಪಡೆದಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.