ಮೈಸೂರಿನಲ್ಲಿ ಹಣದ ಆಸೆ ತೋರಿಸಿ ಸಾರ್ವಜನಿಕರಿಗೆ ವಂಚನೆ: ನಾಲ್ವರ ಬಂಧನ
ಮೈಸೂರು, ಸೆಪ್ಟೆಂಬರ್ 30: ಹಣದ ಆಸೆ ತೋರಿಸಿ ಸಾರ್ವಜನಿಕರಿಗೆ ವಂಚನೆ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಮೈಸೂರಿನ ದೇವರಾಜ ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನ ಚಂದ್ರಮೋಹನ್(57), ಕೇರಳದ ಟಿ.ವಿ ಇಬ್ರಾಹಿಂ (50), ಬೆಂಗಳೂರಿನವರಾದ ಗಿರಿನಾಥನ್ (49), ಗೋಪಿ(40) ಬಂಧಿತರಾಗಿದ್ದಾರೆ.
ಸೆಪ್ಟೆಂಬರ್ 26 ರಂದು ದೇವರಾಜ ಠಾಣಾ ಪೊಲೀಸರು ಠಾಣಾ ಸರಹದ್ದಿನ ಧನ್ವಂತ್ರಿ ರಸ್ತೆಯ ಗಾಯಿತ್ರಿ ಭವನ್ ಹೋಟೆಲ್ ನ ರೂಮ್ ನಂ.101 ಮತ್ತು 102 ಮೇಲೆ ದಾಳಿ ಮಾಡಿದ್ದಾರೆ.
ರೈಸ್ ಪುಲ್ಲಿಂಗ್ ಗೆ ಸಂಬಂಧಿಸಿದ ನಕಲಿ ಸಾಮಗ್ರಿಗಳನ್ನು ಹಾಗೂ ತಮ್ಮ ಮೊಬೈಲ್ಗಳಲ್ಲಿದ್ದ ರೈಸ್ ಪುಲ್ಲಿಂಗ್ ಗೆ ಸಂಬಂಧಿಸಿದ ವಿಡಿಯೋಗಳನ್ನು ತೋರಿಸಿ ಈ ಸಾಮಾಗ್ರಿಗಳಿಂದ ಕೋಟಿಗಟ್ಟಲೆ ಹಣ ಸಂಪಾದಿಸಬಹುದೆಂದು ಸಾರ್ವಜನಿಕರಿಗೆ ಆಮಿಷವೊಡ್ಡಿ ಮೋಸ ಮಾಡುತ್ತಿದ್ದರು ಎನ್ನುವ ಆರೋಪದ ಮೇಲೆ ಇವರನ್ನು ಬಂಧಿಸಲಾಗಿದೆ.
ಬಂಧಿತರಿಂದ ನಕಲಿ ವಸ್ತುಗಳನ್ನು ವಶಪಡಿಸಿಕೊಂಡಿರುವ ಪೊಲೀಸರು, ಮೇಲ್ಕಂಡ ಆರೋಪಿಗಳಿಂದ ಮೋಸ ಹೋಗಿರುವ ಸಾರ್ವಜನಿಕರು ಯಾರಾದರೂ ಇದ್ದಲ್ಲಿ ದೇವರಾಜ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರ ಮೊಬೈಲ್ ನಂ.9480802231, ದೂರವಾಣಿ ಸಂಖ್ಯೆ 0821-2418306ಕ್ಕೆ ಸಂಪರ್ಕಿಸಲು ಕೋರಿದ್ದಾರೆ.