'ಶಿವಾಜಿ ಶೌರ್ಯ,ಸಾಹಸ,ಹೋರಾಟ,ಆದರ್ಶ ಆಡಳಿತದ ಪ್ರತೀಕ'
ಮೈಸೂರಿನಲ್ಲಿ 390ನೇ ಛತ್ರಪತಿ ಶ್ರೀ ಶಿವಾಜಿ ಮಹಾರಾಜರ ಜಯಂತಿಯನ್ನು ಆಚರಿಸಲಾಯಿತು.
ಮೈಸೂರು, ಫೆಬ್ರವರಿ. 20 : ಶೌರ್ಯ,ಸಾಹಸ,ಹೋರಾಟ,ಆದರ್ಶ ಹಾಗೂ ಆಡಳಿತದ ಪ್ರತೀಕ ಛತ್ರಪತಿ ಶಿವಾಜಿ ಮಹಾರಾಜರು ಎಂದು ಮೇಯರ್ ಎಂ.ಜೆ.ರವಿಕುಮಾರ್ ಎಂದು ಹೇಳಿದರು.
ಭಾನುವಾರ ಮೈಸೂರಿನ ಕಲಾಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯೋತ್ಸವ ಸಮಿತಿ ವತಿಯಿಂದ ಆಯೋಜಿಸಿದ್ದ 390ನೇ ಛತ್ರಪತಿ ಶ್ರೀ ಶಿವಾಜಿ ಮಹಾರಾಜರ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಿವಾಜಿ ದೇಶಕಂಡ ಮಹಾನ್ ನಾಯಕರಲ್ಲಿ, ಹೋರಾಟಗಾರರಲ್ಲಿ ಅಗ್ರಗಣ್ಯರ ಎಂದರು.
ತನ್ನ ಆಡಳಿತ ಅವಧಿಯಲ್ಲಿ ಅನೇಕ ಜನಪರ ಹೋರಾಟ ಹಾಗೂ ಕಾರ್ಯಕ್ರಮಗಳನ್ನು ಆಯೋಜಿಸಿ ಇಂದಿಗೂ ಜನಮಾನಸದಲ್ಲಿ ಅಜರಾಮರವಾಗಿ ಉಳಿದುಕೊಂಡಿದ್ದಾರೆ. ಅಂತಹ ಹುಟ್ಟು ಹೋರಾಟಗಾರರ ಜಯಂತಿ ಆಚರಿಸುವುದು ನಮ್ಮ ಆದ್ಯ ಕರ್ತವ್ಯ.
ಶಿವಾಜಿ ನೆಪೋಲಿಯನ್ ಗಿಂತಲೂ ಅತ್ಯಂತ ಯಶಸ್ವಿ ಆಡಳಿತ ನಡೆಸಿದ ಸೇನಾ ನಾಯಕ. ಸುಸೂತ್ರವಾಗಿ ಆಡಳಿತ ನಡೆಸುವ ಸಲುವಾಗಿ ಅಷ್ಟ ಮಂತ್ರಿಗಳನ್ನು ನೇಮಿಸಿದ ದೇಶದ ಮೊದಲ ರಾಜ ಎಂದು ಅಭಿಪ್ರಾಯಪಟ್ಟರು.
ಸಮಾಜದಲ್ಲಿನ ಪ್ರತಿಯೊಬ್ಬರ ಏಳಿಗೆಗಾಗಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು, ಹಿಂದೂಧರ್ಮದ ರಕ್ಷಣೆಗಾಗಿ ನಿರಂತರ ಹೋರಾಟಗಳನ್ನು ಮಾಡಿದ ದಂಡನಾಯಕ. ಕನ್ನಡಕ್ಕೂ ಶಿವಾಜಿಗೂ ಅವಿನಾಭಾವ ಸಂಬಂಧವಿದ್ದು, ಅನೇಕ ಕೊಡುಗೆಗಳನ್ನು ಕನ್ನಡಕ್ಕೆ ನೀಡಿದ್ದಾರೆ.
ನಗರದಲ್ಲಿ ಶಿವಾಜಿ ಪ್ರತಿಮೆ ಸ್ಥಾಪಿಸುವ ಸಂಬಂಧ ಮನವಿ ಬಂದಿದ್ದು, ಕೌನ್ಸಿಲ್ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು. ಅಲ್ಲದೆ ಮರಾಠ ಜನಾಂಗದ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯುತ್ತಿದ್ದರೆ ಅಂತಹವರಿಗೆ ಪ್ರೋತ್ಸಾಹಧನ ಹಾಗೂ ಲ್ಯಾಪ್ ಟಾಪ್ ಸಹ ನೀಡಲಾಗುವುದು ಎಂದರು.