ಮೈಸೂರು ವಿಮಾನ ನಿಲ್ದಾಣ ವಿಸ್ತರಣೆ, ಸರ್ಕಾರದಿಂದ 300 ಎಕರೆ ಭೂಮಿ
ಮೈಸೂರು, ಅಕ್ಟೋಬರ್ 24 : ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಮೈಸೂರು ವಿಮಾನ ನಿಲ್ದಾಣವನ್ನು ವಿಸ್ತರಣೆ ಮಾಡಲಾಗುತ್ತದೆ. ಕರ್ನಾಟಕ ಸರ್ಕಾರ ವಿಮಾನ ನಿಲ್ದಾಣ ವಿಸ್ತರಣೆಗೆ 300 ಎಕರೆ ಭೂಮಿಯನ್ನು ನೀಡಲಿದೆ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ವಿಮಾನ ನಿಲ್ದಾಣ ವಿಸ್ತರಣೆಗೆ ಭೂಮಿ ನೀಡಲು ಒಪ್ಪಿಗೆ ನೀಡಿದ್ದಾರೆ. ಪ್ರಸ್ತುತ ಇರುವ ಮಂಡಕಹಳ್ಳಿ ವಿಮಾನ ನಿಲ್ದಾಣದ ರನ್ ವೇಯನ್ನು ವಿಸ್ತರಣೆ ಮಾಡಲಾಗುತ್ತದೆ.
ಭಾರತಕ್ಕೆ ಚೀನಾ ಸೆಡ್ಡು: ವಿಮಾನ ನಿಲ್ದಾಣ ವಾಯುನೆಲೆಯಾಗಿ ಪರಿವರ್ತನೆ
ಪ್ರಸ್ತುತ ಇರುವ 1750 ಮೀಟರ್ ರನ್ ವೇ ಯನ್ನು 2750 ಮೀಟರ್ ವಿಸ್ತರಿಸುವ ಪ್ರಸ್ತಾವನೆ ಇದೆ. ಉಳಿದ ಜಾಗವನ್ನು ಏರ್ ಟ್ರಾಫಿಕ್ ಕಂಟ್ರೋಲ್ ಟವರ್, ಕಟ್ಟಡ ನಿರ್ಮಾಣ ಸೇರಿದಂತೆ ವಿವಿಧ ಉದ್ದೇಶಗಳಿಗೆ ಬಳಕೆ ಮಾಡಿಕೊಳ್ಳಲಾಗುತ್ತದೆ.
ಮಂಡಕಹಳ್ಳಿ ವಿಮಾನ ನಿಲ್ದಾಣದಲ್ಲಿ ಈಗ ಲಘು ವಿಮಾನಗಳು ಮಾತ್ರ ಹಾರಾಟ ನಡೆಸಬಹುದಾಗಿದೆ. ಅದನ್ನು ಅಂತರಾಷ್ಟ್ರೀಯ ಗುಣಮಟ್ಟಕ್ಕೆ ತಕ್ಕಂತೆ ನಿರ್ಮಾಣ ಮಾಡಲಾಗುತ್ತದೆ. ಇದಕ್ಕೆ ರಾಜ್ಯ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ.
ಚಿತ್ರಗಳು : ಕಲಬುರಗಿ ಜನರ ದಶಕಗಳ ಕನಸು ನನಸಾದ ಕ್ಷಣ
ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ವಿಶೇಷ ಅಧಿಕಾರಿಯನ್ನು ನೇಮಕ ಮಾಡಲಾಗುತ್ತದೆ. ಇದರಿಂದಾಗಿ ಭೂ ಸ್ವಾಧೀನ ಸೇರಿದಂತೆ ವಿವಿಧ ಕಾರ್ಯಗಳು ವೇಗವಾಗಿ ನಡೆಯಲಿವೆ. ಶೀಘ್ರವೇ ಇದಕ್ಕಾಗಿ ಸಮೀಕ್ಷೆ ಆರಂಭವಾಗುವ ಸಾಧ್ಯತೆ ಇದೆ.
ದೇಶದಲ್ಲಿ ಹೊಸದಾಗಿ 100 ವಿಮಾನ ನಿಲ್ದಾಣ ಸ್ಥಾಪನೆ!
ಮಂಡಕಹಳ್ಳಿ ವಿಮಾನ ನಿಲ್ದಾಣದಲ್ಲಿ ಸಮೀಪದ ಮರಸೆ ಗ್ರಾಮದ ಬಳಿ ಈಗಾಗಲೇ 30 ಎಕರೆ ಜಾಗ ಲಭ್ಯವಿದೆ. ಇದನ್ನು ಸೇರಿಸಿ ಅಗತ್ಯವಾದ ಜಮೀನನ್ನು ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಹಸ್ತಾಂತರ ಮಾಡಲಾಗುತ್ತದೆ.
ಮಂಡಕಹಳ್ಳಿ ವಿಮಾನ ನಿಲ್ದಾಣದ ಸಮೀಪ ರೈಲ್ವೆ ಹಳಿ ಮತ್ತು ಮೈಸೂರು-ನಂಜನಗೂಡು ಹೆದ್ದಾರಿ ಇದೆ. ವಿಸ್ತರಣೆ ವೇಳೆ ದೇಶದಲ್ಲೇ ಮೊದಲ ಬಾರಿಗೆ ಏರ್ ಪೋರ್ಟ್ ರನ್ವೇ ಅಡಿ ಸುರಂಗ ಮಾರ್ಗ ನಿರ್ಮಿಸುವ ಪ್ರಸ್ತಾವನೆ ಇದೆ.
ಪ್ರಸ್ತುತ ಮಂಡಕಹಳ್ಳಿ ವಿಮಾನ ನಿಲ್ದಾಣ 438 ಎಕರೆ ಪ್ರದೇಶವನ್ನು ಹೊಂದಿದೆ. 280 ಎಕರೆ ಭೂಮಿಯನ್ನು ಸೇರಿಸಿ ವಿಮಾನ ನಿಲ್ದಾಣ ವಿಸ್ತರಣೆ ಮಾಡುವ ಯೋಜನೆ ಸಿದ್ಧವಾಗಿದೆ. ಮೂರು ತಿಂಗಳಿನಲ್ಲಿ ಈ ಕುರಿತ ಪ್ರಕ್ರಿಯೆಗಳು ಅಂತ್ಯಗೊಳ್ಳುವ ಸಾಧ್ಯತೆ ಇದೆ.