ಪತ್ರಕರ್ತರ ಸೋಗಿನಲ್ಲಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಯುವತಿಯರು ಪೊಲೀಸ್ ಬಲೆಗೆ
ಮೈಸೂರು, ಜನವರಿ 22: ಇಂದಿನ ಕಾಲದಲ್ಲಿ ವಂಚಕರು ಹಾಕದ ವೇಷವಿಲ್ಲ. ಸುಲಭದಲ್ಲಿ ಹಣ ಸಂಪಾದನೆ ಮಾಡುವುದೇ ವಂಚಕರ ನಿತ್ಯದ ಕಾಯಕವಾಗಿದ್ದು, ಅವರಿಗೆ ಮಾಧ್ಯಮದ ಅಥವಾ ಮಾನವ ಹಕ್ಕುಗಳ ಕಾರ್ಯಕರ್ತರ ವೇಷ ಹಾಕುವುದು ಬಹಳ ಸುಲಭದ ಕೆಲಸ.
ಏಕೆಂದರೆ ಈ ಹುದ್ದೆಗಳಿಗೆ ನಿಗದಿತ ವಿದ್ಯಾಭ್ಯಾಸ ಮತ್ತು ಅರ್ಹತೆಯ ಅವಶ್ಯಕತೆ ಇರುವುದಿಲ್ಲ. ಅಲ್ಲದೆ ಇಂದು ನಿತ್ಯ ಹುಟ್ಟಿಕೊಳ್ಳುತ್ತಿರುವ ನೂರಾರು ಯೂಟ್ಯೂಬ್ ಮತ್ತು ಫೇಸ್ ಬುಕ್ ಚಾನೆಲ್ ಗಳು ಈ ವಂಚಕರಿಗೆ ಆಶ್ರಯ ತಾಣಗಳೇ ಆಗಿವೆ. ಇದನ್ನು ನಡೆಸುವ ಮಾಲೀಕರು ಒಪ್ಪಿದರೆ ಮುಗಿತು ಅಷ್ಟೆ. ಮೊದಲೆಲ್ಲ ಈ ರೀತಿಯ ವಂಚಕರು ಪರುಷರೇ ಆಗಿರುತ್ತಿದ್ದರು. ಆದರೆ ಈ ಬಾರಿ ಪುರುಷರಿಗಿಂತ ತಾವೇನೂ ಕಡಿಮೆ ಇಲ್ಲ ಎಂದು ಮೈಸೂರಿನ ಮೂವರು ಯುವತಿಯರು ಸಾಬೀತುಪಡಿಸಿ ಪೋಲೀಸರ ಬಲೆಗೆ ಬಿದ್ದಿದ್ದಾರೆ.
ಲಂಚ ಪಡೆಯುವ ಸರ್ಕಾರಿ ಅಧಿಕಾರಿಗಳೇ ಟಾರ್ಗೆಟ್
ಮೈಸೂರಿನ ಯುವತಿಯರಾದ ಅಮ್ರೀನ್, ಆಯಿಷಾ ಬಾಯಿ, ಶಹೀನಾ ನವೀದ್ ಎಂಬ ಯುವತಿಯರು ಹೇಗೋ ತಮ್ಮ ಸಂಬಂಧಿಕರ ಮೂಲಕ ಸುವರ್ಣ ಕಾವೇರಿ ಎಕ್ಸ್ಪ್ರೆಸ್ ಎಂಬ ಜಾಲತಾಣ ಸುದ್ದಿ ವಾಹಿನಿಯಲ್ಲಿ ಪತ್ರಕರ್ತರೆಂಬ ಕಾರ್ಡ್ ಗಿಟ್ಟಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ಇದೇ ರೀತಿ ಸಿಟಿಜನ್ ಲೇಬರ್ ವೆಲ್ಫೇರ್ ಮತ್ತು ಆ್ಯಂಟಿ ಕರಪ್ಷನ್ ಕಮಿಟಿ ಎಂಬ ನಕಲಿ ಸಂಸ್ಥೆಗಳ ಕಾರ್ಯಕರ್ತ ಕಾರ್ಡ್ ಗಳನ್ನೂ ಪಡೆದುಕೊಂಡಿದ್ದಾರೆ. ಪಡೆದುಕೊಂಡ ಮೇಲೆ ಇನ್ನು ತಡವೇಕೆ? ಬ್ಲಾಕ್ ಮೇಲ್ ಮಾಡಲು ಲೈಸೆನ್ಸ್ ಸಿಕ್ಕಿದೆ ಎಂದು ಭಾವಿಸಿಕೊಂಡು ಫೀಲ್ಡ್ಗೆ ಇಳಿದಿದ್ದಾರೆ. ಲಂಚ ಪಡೆಯುವ ಸರ್ಕಾರಿ ಅಧಿಕಾರಿಗಳನ್ನೇ ಟಾರ್ಗೆಟ್ ಮಾಡಿಕೊಳ್ಳುತ್ತಿದ್ದ ಈ ವಂಚಕಿಯರು ಟಿವಿಯಲ್ಲಿ ಹಾಕುತ್ತೇವೆ ಎಂದು ಕೆಲವರನ್ನು ಹೆದರಿಸಿ ಒಂದಷ್ಟು ಹಣವನ್ನೂ ಗಳಿಸಿಕೊಂಡಿದ್ದಾರೆ. ಅದೇ 5 ದಿನಗಳ ಹಿಂದೆ ತಾವು ಪತ್ರಕರ್ತರು, ಅಷ್ಟೆ ಅಲ್ಲದೆ ಮಾನವ ಹಕ್ಕುಗಳ ಹೋರಾಟಗಾರರು ಎಂದು ಕೆ.ಆರ್.ಆಸ್ಪತ್ರೆ ವೈದ್ಯ ಡಾ.ರಾಜೇಶ್ ಅವರನ್ನು ಹೆದರಿಸಿದ್ದರು.
ರೈತರ ಆತ್ಮಹತ್ಯೆ ಬಗ್ಗೆ ಹೇಳಿಕೆ; ಮತ್ತೆ ಸುದ್ದಿಯಾದ ಬಿ. ಸಿ. ಪಾಟೀಲ್!
5 ಲಕ್ಷ ರುಪಾಯಿ ಕೊಡಿ ಎಂದು ಬೇಡಿಕೆ
ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲು ನೀವು ರೋಗಿಗಳಿಂದ ಹಣ ಪಡೆದುಕೊಂಡಿದ್ದೀರಿ. ಅದಕ್ಕೆ ಸಂಬಂಧಪಟ್ಟ ವಿಡಿಯೋ ಸಾಕ್ಷಿಗಳು ನಮ್ಮ ಬಳಿ ಇವೆ ಎಂದು ಯುವತಿಯರು ಹೇಳಿಕೊಂಡಿದ್ದರು. ಈ ಸಂಬಂಧ ಟಿವಿಯಲ್ಲಿ ದೊಡ್ಡದಾಗಿ ಸುದ್ದಿ ಹಾಕುತ್ತೇವೆ. ಹಾಕಬಾರದೆಂದರೆ ಪ್ರಕರಣ ಮುಚ್ಚಿಹಾಕಲು ನಮಗೆ 5 ಲಕ್ಷ ರುಪಾಯಿ ಕೊಡಿ ಎಂದು ಬೇಡಿಕೆ ಇಟ್ಟಿದ್ದರು. ನಂತರ ವೈದ್ಯರು 1.75 ಲಕ್ಷ ರೂಪಾಯಿ ಕೊಡಲು ಒಪ್ಪಿದ್ದರು ಎನ್ನಲಾಗಿದೆ. ಈ ವೇಳೆ 50 ಸಾವಿರ ರುಪಾಯಿ ಅಡ್ವಾನ್ಸ್ ಪಡೆದಿದ್ದರು.
ಉಳಿದ ಹಣ ನೀಡುವಂತೆ ಒತ್ತಾಯಿಸಿ ವೈದ್ಯರು ವಿಸಿಟ್ ಮಾಡುವ ಮಂಡಿ ಮೊಹಲ್ಲಾದ ಸಂಜೀವಿನಿ ಆಸ್ಪತ್ರೆ ಎದುರು ಗಲಾಟೆ ಮಾಡಿದ್ದರು. ಅಷ್ಟೇ ಅಲ್ಲ ತಮ್ಮ ಪರಿಚಿತ 15-20 ಯುವಕರ ಮೂಲಕ ವೈದ್ಯರಿಗೆ ಧಮಕಿಯನ್ನೂ ಹಾಕಿಸಿದ್ದರು. ಇದಾದ ನಂತರ ಇವರ ಉಪಟಳ ತಡೆಯಲಾರದೆ ಡಾ.ರಾಜೇಶ್ ಮೈಸೂರಿನ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಗುರುತಿನ ಚೀಟಿ ಬಳಸಿಕೊಂಡು ಬ್ಲ್ಯಾಕ್ ಮೇಲ್
ಈ ಸಂದರ್ಭದಲ್ಲಿ ಪೊಲೀಸರು ತನಿಖೆ ಮಾಡಿದಾಗ ಗುರುತಿನ ಚೀಟಿಗಳನ್ನು ಬಳಸಿಕೊಂಡು ಬ್ಲ್ಯಾಕ್ ಮೇಲ್ ಮಾಡಿರುವುದು ಸಾಬೀತಾಗಿದೆ. ಸುವರ್ಣ ಕಾವೇರಿ ಎಕ್ಸ್ಪ್ರೆಸ್ ಸುದ್ದಿವಾಹಿನಿಯಲ್ಲಿ ರಾಜಕೀಯ ವರದಿಗಾರ್ತಿ ಆಯಿಷಾ ಬಾಯಿ, ಕ್ರೈಂ ವರದಿಗಾರ್ತಿ ಅಮ್ರೀನ್ ಎಂದು ಹೇಳಿಕೊಂಡಿದ್ದರು. ಸಿಟಿಜನ್ ಲೇಬರ್ ವೆಲ್ಫೇರ್, ಆ್ಯಂಟಿ ಕರಪ್ಷನ್ ಕಮಿಟಿ ಎನ್ನುವ ಸಾಂವಿಧಾನಿಕ ಸಂಸ್ಥೆಯೂ ಇಲ್ಲ. ಮೋಸ ಮಾಡುವ ಉದ್ದೇಶದಿಂದಲೇ ಐಡಿ ಕಾರ್ಡ್ಗಳ ಬಳಕೆ ಮಾಡಿರುವುದು ಸಾಬೀತಾಗಿದೆ ಎಂದು ಡಿಸಿಪಿ ಡಾ.ಎ.ಎನ್.ಪ್ರಕಾಶ್ಗೌಡ ತಿಳಿಸಿದ್ದಾರೆ.
ಸಂಸ್ಥೆಯ ಹೆಸರು ದುರುಪಯೋಗ
ಸುವರ್ಣ ಕಾವೇರಿ ಎಕ್ಸ್ ಪ್ರೆಸ್ ಎಂಬ ವಾಹಿನಿ ಕಾರ್ಯ ನಿರ್ವಹಿಸುತ್ತಿದೆ. ಜೊತೆಗೆ ಸಿಟಿಜನ್ ಲೇಬರ್ ವೆಲ್ ಫೇರ್ ಎಂಬ ಸಂಸ್ಥೆ ಕೂಡ ಅಸ್ತಿತ್ವದಲ್ಲಿದೆ. ವಾಹಿನಿಗೆ ವರದಿಗಾರರಾಗಿ ಕೆಲಸ ಮಾಡುವಂತೆ ಮೂವರು ಯುವತಿಯರನ್ನು ನೇಮಕ ಮಾಡಿಕೊಂಡಿದ್ದೆವು ಆದರೆ ಯುವತಿಯರು ನಮ್ಮ ಸಂಸ್ಥೆಯ ಹೆಸರನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ಇವರ ಈ ವಂಚನೆಗೂ, ಸಂಸ್ಥೆಗೂ ಯಾವುದೇ ಸಂಬಂಧವಿಲ್ಲ ಎಂದು ವಾಹಿನಿಯ ಮುಖ್ಯಸ್ಥ ಎಂ.ಎಂ ಹನೀಫ್ ಎಂಬುವವರು ಹೇಳಿಕೊಂಡಿದ್ದಾರೆ.