ನಾಗರಹೊಳೆಯಲ್ಲಿ ಹುಲಿಗಣತಿ: ಮೊದಲ ದಿನವೇ ಕಂಡವು 3 ಹುಲಿ!
ಮೈಸೂರು, ಜನವರಿ 9 : ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಜ.8 ರಿಂದ ಆರಂಭವಾದ ಹುಲಿ ಇತರ ಪ್ರಾಣಿ, ಪಕ್ಷಿ ಹಾಗೂ ವನವೃಕ್ಷಗಳ ಗಣತಿ ಕಾರ್ಯಕ್ಕೆ ಶುಭಾರಂಭದೊರೆತಿದೆ.
ಗುಂಡ್ಲುಪೇಟೆ ವಲಯದಲ್ಲಿ ಗಣತಿ ವೇಳೆ 3 ಹುಲಿ ಕಾಣಿಸಿಕೊಂಡು, ಗಣತಿ ಕಾರಯಕ್ಕೆ ನಾಂದಿ ಹಾಡಿವೆ. ಹುಲಿಗಣತಿ ಕಾರ್ಯಕ್ಕೆ ಆಡಚಣೆ ಆಗಬಹುದೆಂಬ ಹಿನ್ನೆಲೆಯಲ್ಲಿ ಸಫಾರಿ ಮೇಲೆ ಒಂದು ವಾರದವರೆಗೆ ವಿಧಿಸಲಾಗಿದ್ದ ನಿರ್ಬಂಧ ಆದೇಶವನ್ನು ಅರಣ್ಯ ಇಲಾಖೆ ಹಿಂಪಡೆದುಕೊಂಡಿದೆ. ಆದರೆ, ಸಫಾರಿ ಅವಧಿಯನ್ನು 3 ಗಂಟೆಗಳಿಂದ ಒಂದೂವರೆ ಗಂಟೆಗೆ ತಗ್ಗಿಸಿದೆ.
ನಾಗರಹೊಳೆ ಉದ್ಯಾನದಲ್ಲಿ ಚುರುಕಿನಿಂದ ನಡೆದ ಹುಲಿಗಣತಿ ಕಾರ್ಯ
ಜಂಗಲ್ ರೆಸಾರ್ಟ್, ಪ್ರವಾಸೋದ್ಯಮ ಇಲಾಖೆ ಮತ್ತು ಖಾಸಗಿ ಹೋಟೆಲ್ ಗಳ ಮೂಲಕ ಈ ಮೊದಲೇ ಮುಂಗಡವಾಗಿ ಸಫಾರಿಗೆ ಕಾಯ್ದಿರಿಸಿರುವ ಪ್ರವಾಸಿಗರಿಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಅರಣ್ಯ ಇಲಾಖೆ ಈ ಕ್ರಮ ಕೈಗೊಂಡಿದೆ. ಖಾಸಗಿಯವರಲ್ಲಿ ಮುಂಗಡ ಕಾದಿರಿಸಿದವರು ಸಫಾರಿ ಕೈಗೊಳ್ಳಬಹುದಾಗಿದೆ.
ಬೆಂಕಿ ರೇಖೆ ನಿರ್ಮಾಣ
ಇದೇ ವೇಳೆ, ಹುಲಿ ಸಂರಕ್ಷಿತ ಪ್ರದೇಶವಾದ ನಾಗರಹೊಳೆ ಅರಣ್ಯದಲ್ಲಿ ಕಳೆದ ಬಾರಿ ಸಾಕಷ್ಟು ಮಳೆ ಯಾಗಿದ್ದರೂ ವನ್ಯಜೀವಿಗಳಿಗೆ ಆಹಾರ ದೊರೆಯದೆ ಸಂಕಷ್ಟ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಅವುಗಳಿಗೆ ಅರಣ್ಯದೊಳಗೆ ಸಾಧ್ಯವಾದಷ್ಟು ಆಹಾರ ಒದಗಿಸಿ, ನಾಡಿನತ್ತ ಬರದಂತೆ ಬೆಂಕಿಯ ಅವಘಡ ಎದುರಾಗದಂತೆ ಅರಣ್ಯ ಸಿಬ್ಬಂದಿ ಬೆಂಕಿ ರೇಖೆ ನಿರ್ಮಾಣ (ಫೈರ್ಲೈನ್) ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ.
ಆಸಕ್ತರಿಗೆ ತರಬೇತಿ
ಈ ಮಧ್ಯೆ, ಹಲವು ಆಸಕ್ತ ಸ್ವಯಂ ಸೇವಕರಿಗೆ ವನ್ಯಮೃಗ ಬೇಟೆ ತಡೆ ಕಾರ್ಯಕ್ಕೆ ಸಂಬಂಧಿಸಿ ತರಬೇತಿ ನೀಡಲಾಗಿದೆ. ತರಬೇತಿ ನಂತರ ಎಲ್ಲ ಸ್ವಯಂ ಸೇವಕರನ್ನು ಉದ್ಯಾನ ವ್ಯಾಪ್ತಿಯ 8 ವಲಯಗಳ anti ಪೌಚಿಂಗ್ (ಕಳ್ಳಬೇಟೆ ತಡೆ ಶಿಬಿರ)ಗಳಿಗೆ ಕಳುಹಿಸಿಕೊಡಲಾಗಿದೆ.
ಪ್ರಚಾರ ರಾಯಭಾರಿ
ವನ್ಯಜೀವಿಗಳ ಆಹಾರ ಚಕ್ರದಲ್ಲಿ ಹುಲಿ ಪಾತ್ರ ಬಹುಮುಖ್ಯವಾದುದು. ಹಾಗಾಗಿ ನಾಗರ ಹೊಳೆಯಲ್ಲಿ ಹುಲಿಯೇ ಬ್ರಾಂಡ್ ಅಂಬಾಸಿಡರ್ ಎನಿಸಿಕೊಂಡಿದೆ. ಅರಣ್ಯದಲ್ಲಿನ ಜಲ ಸಂಪನ್ಮೂಲ ಅಭಿವೃದ್ಧಿಗೆ ವನ್ಯಜೀವಿಗಳ ಆಹಾರ ಚಕ್ರ ಮುಖ್ಯ. ಸ್ವಯಂಸೇವಕರು ಯಾವುದೇ ಪ್ರಾಣಿಗಳ ಜತೆ ಲಘುವಾಗಿ ನಡೆದುಕೊಳ್ಳದೇ ಅರಣ್ಯದಲ್ಲಿ ಸಹಜತೆ ಕಾಪಾಡಲು ಬದ್ಧತೆ ತೋರಬೇಕು. ಅಂತರ ಸಂತೆ ವಲಯದ 4200 ಕಿ.ಮೀ. ವ್ಯಾಪ್ತಿಯಲ್ಲಿ 1800 ಕಿ.ಮೀ. ವ್ಯಾಪ್ತಿಯಲ್ಲಿ ಮಾತ್ರ ದಟ್ಟ ಕಾನನವಿದೆ. ಉಳಿದಿದ್ದು ಕಾಫಿ, ಏಲಕ್ಕಿ ಎಸ್ಟೇಟ್ಗಳಾಗಿ ಮಾರ್ಪಟ್ಟಿದೆ. ವಸ್ತುಸ್ಥಿತಿ ಹೀಗಿರುವಾಗ ವನ್ಯಜೀವಿಗಳು ಸಹಜ ಜೀವನ ಕ್ರಿಯೆಗೆ ಕಾಡಿನಿಂದ ಹೊರಬರುವಂತಾಗಿದೆ. ಇಂಥ ಸಂದರ್ಭಗಳಲ್ಲಿ ಸ್ವಯಂಸೇವಕರು ಹೆಚ್ಚು ಜವಾಬ್ದಾರಿಯಿಂದ ನಡೆದುಕೊಳ್ಳುವುದು ಅಗತ್ಯವಿದೆ ಎಂದು ತರಬೇತಿ ಅವಧಿಯಲ್ಲಿ ತಿಳಿಸಿಕೊಡಲಾಗಿದೆ.
ಹುಲಿಗಣತಿಗಾಗಿ ಹೊಸ app
ಹುಲಿ ಗಣತಿಗಾಗಿ ಇಕೋಲಾಜಿಕಲ್ ಎಂಬ ಹೊಸ app ಅನ್ನು ಅರಣ್ಯ ಇಲಾಖೆ ಸಿದ್ಧಪಡಿಸಿದೆ. ಇದರಲ್ಲಿ ಎಂಸ್ಟ್ರೈಪ್ ಎಂಬ ಸಾಫ್ಟ್ವೇರ್ ಮೂಲಕ ಹುಲಿ ಗಣತಿ ನಡೆಸಲು ಸುಲಭ ಸಾಧನ ಅಳವಡಿಸಲಾಗಿದೆ ಎಂದು ಹುಲಿಯೋಜನೆ ನಿರ್ದೇಶಕ ಮಣಿಕಂಠನ್ ಹೇಳಿದ್ದಾರೆ