ಮದುವೆಗೆಂದು ತಂದಿದ್ದ 25 ಲಕ್ಷದಷ್ಟು ಚಿನ್ನಾಭರಣ, 2.5 ಲಕ್ಷ ಹಣ ಕಳವು
ಮೈಸೂರು, ನವೆಂಬರ್ 19 : ಮಗಳ ಮದುವೆಗಾಗಿ ಮನೆ ಮಂದಿಯೆಲ್ಲಾ ಹೋಟೆಲ್ ಗೆ ತೆರಳಿದ್ದ ಸಮಯ ನೋಡಿಕೊಂಡ ಖದೀಮನೊಬ್ಬ, ನಕಲಿ ಕೀಲಿ ಬಳಸಿ, ಉದ್ಯಮಿಯೊಬ್ಬರ ಮನೆಯಿಂದ 25 ಲಕ್ಷ ರುಪಾಯಿ ಮೌಲ್ಯದ ಚಿನ್ನಾಭರಣ ಹಾಗೂ 2.5 ಲಕ್ಷ ರುಪಾಯಿ ನಗದು ದೋಚಿದ್ದಾನೆ.
ರಾಜೀವ್ ನಗರ ನಿವಾಸಿ ಹಾಗೂ ಎನ್ ಐ ಗ್ರೂಪ್ಸ್ ಮಾಲೀಕ ಇಲ್ಯಾಸ್ ಬೇಗ್ ಎಂಬುವರ ಮನೆಯಲ್ಲಿ ಕಳ್ಳತನ ಆಗಿದ್ದು, ಮದುವೆ ಸಂಭ್ರಮದಲ್ಲಿದ್ದ ಕುಟುಂಬದಲ್ಲಿ ಈ ಘಟನೆಯಿಂದ ನೋವಿನ ವಾತಾವರಣ ಸೃಷ್ಟಿ ಆಗಿದೆ.
ಮೈಸೂರು: ಲಕ್ಷಾಂತರ ರೂ.ಹಣ ಕದ್ದೊಯ್ದಿದ್ದ ನಾಲ್ವರು ದರೋಡೆಕೋರರ ಬಂಧನ
ಘಟನೆ ವಿವರ:
ಇಲ್ಯಾಸ್ ಅವರ ಮಗಳ ಮದುವೆ ಭಾನುವಾರ ನಗರದ ಖಾಸಗಿ ಹೋಟೆಲೊಂದರಲ್ಲಿ ಏರ್ಪಡಿಸಲಾಗಿತ್ತು. ಶನಿವಾರ ಕೂಡ ಹೋಟೆಲ್ ನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಹೀಗಾಗಿ ಕುಟುಂಬದವರೆಲ್ಲ ಹೋಟೆಲ್ ಗೆ ತೆರಳಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಯಾರೂ ಇಲ್ಲದಿದ್ದನ್ನು ಗಮನಿಸಿದ ದುಷ್ಕರ್ಮಿಯೊಬ್ಬ ಶನಿವಾರ ತಡರಾತ್ರಿ ಮುಖಕ್ಕೆ ಟವೆಲ್ ಮುಚ್ಚಿಕೊಂಡು, ಇಲ್ಯಾಸ್ ಅವರ ಮನೆ ಬಳಿ ಬಂದಿದ್ದಾನೆ. ನಕಲಿ ಕೀ ಬಳಸಿ ಮನೆಯ ಬಾಗಿಲು ತೆರೆದು, ಒಳ ಪ್ರವೇಶಿಸಿದ್ದಾನೆ. ಇಷ್ಟೂ ದೃಶ್ಯಾವಳಿಗಳು ಮನೆಯ ಮುಂದೆ ಅಳವಡಿಸಿರುವ ಸಿಸಿ ಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ.
ಮೂವರು ಅಂತರರಾಜ್ಯ ವಾಹನ ಕಳ್ಳರು ಪೊಲೀಸ್ ಬಲೆಗೆ: 15 ದ್ವಿಚಕ್ರವಾಹನ ವಶ
ಮದುವೆ ಕಾರ್ಯಕ್ರಮ ಮುಗಿಸಿಕೊಂಡು ಬಂದ ಕುಟುಂಬದವರು ಬೆಳಗ್ಗೆ 4 ಗಂಟೆ ವೇಳೆಗೆ ಮನೆಗೆ ಬಂದು ನಿದ್ರಿಸಿದ್ದಾರೆ. ಮರುದಿನ ಬೆಳಗ್ಗೆ ಎದ್ದು ನೋಡಿದಾಗ ಕೊಠಡಿಯ ವಾರ್ ಡ್ರೋಬ್ ತೆರೆದ ಸ್ಥಿತಿಯಲ್ಲಿದ್ದುದನ್ನು ಗಮನಿಸಿದ್ದಾರೆ. ಪರೀಕ್ಷಿಸಿದಾಗ ಮಗಳ ಮದುವೆಗೆ ಮಾಡಿಸಿಟ್ಟಿದ್ದ ಚಿನ್ನಾಭರಣ ಹಾಗೂ ನಗದು ಕಳವಾಗಿರುವುದು ಗೊತ್ತಾಗಿದೆ.
ಅರ್ಧಂಬರ್ಧ ಕದ್ದಿದ್ದಾನೆ:
ಇಲ್ಯಾಸ್ ಹೇಳುವಂತೆ, ವಿವಾಹಕ್ಕಾಗಿ 30 ರಿಂದ 35 ಲಕ್ಷ ರುಪಾಯಿ ಮೌಲ್ಯದ ಚಿನ್ನಾಭರಣ ಮಾಡಿಸಲಾಗಿತ್ತು. ಮನೆಗೆ ನುಗ್ಗಿರುವ ಕಳ್ಳ, ಸುಮಾರು 10 ಲಕ್ಷ ರುಪಾಯಿ ಮೌಲ್ಯದ ಒಡವೆಗಳನ್ನು ಅಲ್ಲಿಯೇ ಬಿಟ್ಟು ಉಳಿದ ಆಭರಣಗಳನ್ನು ಕದ್ದೊಯ್ದಿದ್ದಾನೆ.
ಇಲ್ಯಾಸ್ ಕೂಡಲೆ ಉದಯಗಿರಿ ಪೊಲೀಸ್ ಠಾಣೆಗೆ ತೆರಳಿ, ದೂರು ನೀಡಿದ್ದಾರೆ. ಉದಯಗಿರಿ ಹಾಗೂ ಸಿಸಿಬಿ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಮನೆ ಮುಂದೆ ಅಳವಡಿಸಿದ್ದ ಸಿಸಿ ಟಿವಿ ಕ್ಯಾಮೆರಾದ ಫೂಟೇಜ್ ಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಶ್ವಾನ ದಳ, ಬೆರಳಚ್ಚು ತಂಡ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ರಿಜಿಸ್ಟರ್ ಮ್ಯಾರೇಜ್ ಆಗಿದ್ದರೂ ಮತ್ತೊಂದು ಮದುವೆ ಮಹೂರ್ತ, ಆಮೇಲಿನ ಕತೆ ಗೊತ್ತಾ?
ಸಿಸಿಟಿವಿ ವೈರ್ ಗಳನ್ನು ಕಿತ್ತಿದ್ದ:
ಕಳ್ಳತನಕ್ಕೆ ಬಂದಿದ್ದ ಖದೀಮ ಸಿಸಿಟಿವಿ ಬಗ್ಗೆ ಕೂಡ ತಿಳಿದವನಾಗಿದ್ದಾನೆ. ಏಕೆಂದರೆ, ಆತ ಸಿಸಿಟಿವಿಗೆ ಸಂಪರ್ಕ ಕಲ್ಪಿಸುವ ವೈರ್ ಗಳನ್ನು ಕಿತ್ತುಹಾಕಿದ್ದಾನೆ. ಆದರೆ ಕ್ಯಾಮೆರಾಗೆ ಯಾವುದೇ ಹಾನಿ ಮಾಡಿಲ್ಲದ ಕಾರಣ ಆತ ಬಂದು, ಹೋದ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.