ಕರ್ನಾಟಕ ಪೊಲೀಸ್ ಸೇವೆಗೆ 242 ಮಂದಿ ಹೊಸತಾಗಿ ಸೇರ್ಪಡೆ
ಮೈಸೂರು, ಜನವರಿ 12: ಕರ್ನಾಟಕ ಪೊಲೀಸ್ ಸೇವೆಗೆ 242 ಮಂದಿ ಹೊಸತಾಗಿ ಸೇರ್ಪಡೆ ಆಗಿದ್ದಾರೆ. ಈ ಸಂಬಂಧ ಮೈಸೂರಿನ ಪೊಲೀಸ್ ತರಬೇತಿ ಶಾಲೆಯ 5ನೇ ತಂಡದ ಮಹಿಳಾ ನಾಗರಿಕ ಪೊಲೀಸ್ ಕಾನ್ ಸ್ಟೇಬಲ್ ರೈಲ್ವೇಸ್ ಮತ್ತು ಕೆಎಸ್ಐಎಸ್ಎಫ್ ಪ್ರಶಿಕ್ಷಣಾರ್ಥಿಗಳ ಹಾಗೂ ಮೈಸೂರು ನಗರದ ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆಯ 2ನೇ ತಂಡದ ಮಹಿಳಾ ನಾಗರಿಕ ಪೊಲೀಸ್ ಕಾನ್ಸ್ಟೇಬಲ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ ನಡೆಯಿತು.
ಈ ಸಂದರ್ಭ ಮಾತನಾಡಿದ ಕರ್ನಾಟಕ ಪೊಲೀಸ್ ಅಕಾಡೆಮಿ ನಿರ್ದೇಶಕರಾದ ವಿಫುಲ್ಕುಮಾರ್ ಅವರು ರಾಜ್ಯ ಪೊಲೀಸ್ ಸೇವೆಯಲ್ಲಿ ಶೇ.20ರಷ್ಟು ಮಹಿಳಾ ಪೊಲೀಸರು ಕಾರ್ಯನಿರ್ವಹಿಸುತ್ತಿದ್ದು, ಅವರೆಲ್ಲರ ಸೇವಾ ದಕ್ಷತೆ ಉತ್ತಮವಾಗಿದೆ. ಹಾಗಾಗಿ ಮಹಿಳೆಯರಿಗೆ ಪೊಲೀಸ್ ಸೇವೆಗೆ ಸೇರಲು ಇನ್ನೂ ಹೆಚ್ಚಿನ ಉತ್ತೇಜನ ಕೊಡಬೇಕಾಗಿದೆ ಎಂದರು.
ಈಗಷ್ಟೇ ನೀವೆಲ್ಲರೂ ತರಬೇತಿ ಮುಗಿಸಿ ಕಾರ್ಯಕ್ಷೇತ್ರಕ್ಕೆ ತೆರಳಿ ಅಲ್ಲಿ ಕರ್ತವ್ಯ ನಿರ್ವಹಿಸಬೇಕಾಗಿದೆ. ತರಬೇತಿ ಅವಧಿಯಲ್ಲಿನ ಶಿಕ್ಷಣಕ್ಕೂ ಕರ್ತವ್ಯದ ವೇಳೆಯಲ್ಲಿನ ವಾಸ್ತವ ಸ್ಥಿತಿಗೂ ಸ್ವಲ್ಪ ವ್ಯತ್ಯಾಸ ಇರಬಹುದು. ಅವೆಲ್ಲವನ್ನೂ ಅಧ್ಯಯನದ ವಿಷಯವೆಂದು ಪರಿಗಣಿಸಬೇಕು ಪೊಲೀಸ್ ಸೇವೆಗೆ ತನ್ನದೇ ಆದ ಹಿರಿಮೆಯಿದೆ. ಎಲ್ಲರಿಗೂ ಜನರ ಸೇವೆ ಮಾಡಲು ಅವಕಾಶ ಸಿಗುವುದಿಲ್ಲ. ಆದರೆ ನಮಗೆ ಅಂತಹ ಅವಕಾಶ ದೊರೆತಿರುವುದನ್ನು ಉತ್ತಮ ಅವಕಾಶ ಎಂದು ಭಾವಿಸಬೇಕು ಎಂದು ಹೇಳಿದರು.
ಪ್ರತಿಯೊಬ್ಬರಲ್ಲೂ ನಾಯಕತ್ವ ಗುಣ ಇರುತ್ತದೆ. ಆ ನಾಯಕತ್ವ ಗುಣ ಹೊರ ಹೊಮ್ಮಬೇಕಾದರೆ ಪೊಲೀಸರಿಗೆ ಸಾರ್ವಜನಿಕರೊಂದಿಗೆ ಉತ್ತಮ ಸಂಪರ್ಕ ಹಾಗೂ ಉತ್ತಮ ಬಾಂಧವ್ಯದ ಅವಶ್ಯಕತೆ ಇರುತ್ತದೆ. ಪೊಲೀಸ್ ಠಾಣೆಗಳಲ್ಲಿ ಹುದ್ದೆಗಳು ಬೇರೆ ಬೇರೆ ಆಗಿರಬಹುದು. ಒಬ್ಬ ಸಾಮಾನ್ಯ ಪೊಲೀಸರಲ್ಲಿ ಇರಬಹುದಾದ ನಾಯಕತ್ವಗುಣವನ್ನು ಕಡೆಗಣಿಸಲಾಗದು.
ಪೊಲೀಸ್ ಸೇವೆಗೆ ಸೇರಿದ ಮೇಲೆ ನಾವು ಯಾವ ಹುದ್ದೆಯಲ್ಲಿ ಇದ್ದೇವೆ ಎಂಬುದನ್ನು ಮರೆತು ಸಮಸ್ಯೆ ಹೊತ್ತು ಬರುವಜನರಿಗೆ ಸ್ಪಂದಿಸಬೇಕು. ಜನರ ಸಮಸ್ಯೆಗಳನ್ನು ಪರಿಹರಿಸುವುದೇ ನಮ್ಮ ಗುರಿಯಾಗಿರಬೇಕು. ಜನರ ಸಮಸ್ಯೆಗಳ ವಿಚಾರದಲ್ಲಿ ಕೇವಲ ಪ್ರತಿಕ್ರಿಯಾತ್ಮಕವಾಗಿ ಕೆಲಸ ಮಾಡಿದರೆ ಸಾಲದು. ಪ್ರಗತಿಪರವಾಗಿ ಯೋಚನೆ ಮಾಡಬೇಕು. ಸಮಸ್ಯೆ ಎದುರು ನೋಡುವ ಬದಲು ಸಮಸ್ಯೆ ಬಾರದಂತೆ ತಡೆಯುವ ಜಾಣತನ ಪ್ರದರ್ಶಿಸಬೇಕು ಎಂದು ಸಲಹೆ ನೀಡಿದರು.
ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆಯ ಪ್ರಾಂಶುಪಾಲರಾದ ಶಿವರಾಜು ಅವರು ಪ್ರಶಿಕ್ಷಣಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ನಿರ್ಗಮನ ಪಥ ಸಂಚಲನದಲ್ಲಿ ಶಿಸ್ತಿನ ಹೆಜ್ಜೆ ಹಾಕುವ ಮೂಲಕ ಪ್ರಶಿಕ್ಷಣಾರ್ಥಿಗಳು ನಡೆಸಿದ ಆಕರ್ಷಕ ಪಥ ಸಂಚಲನವು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ತರಬೇತಿ ಅವಧಿಯಲ್ಲಿ ವಿವಿಧ ವಿಭಾಗಗಳಲ್ಲಿ 2ನೇ ತಂಡದ ಮಹಿಳಾ ಪೊಲೀಸ್ ಪ್ರಕ್ಷಣಾರ್ಥಿಗಳಲ್ಲಿ ಸಾಧನೆ ಮಾಡಿದ ಅಭ್ಯರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಬೆಂಗಳೂರಿನ ಎಂ. ಅನಿತಲಕ್ಷ್ಮಿ ಅವರಿಗೆ ಸರ್ವೋತ್ತಮ ಪ್ರಶಸ್ತಿಯನ್ನು ನೀಡಲಾಯಿತು.