ಮೈಸೂರು: 24 ಗಂಟೆ ನೀರು ಪೂರೈಸುವ 233.25 ಕೋಟಿ ರೂ. ವೆಚ್ಚದ ಯೋಜನೆ ಸ್ಥಗಿತ
ಮೈಸೂರು, ಆಗಸ್ಟ್ 4: ನಗರದ ವಿವಿಧ ಬಡಾವಣೆಗಳಿಗೆ ದಿನದ 24 ಗಂಟೆಯೂ ಕುಡಿಯುವ ನೀರು ಪೂರೈಸುವ ಯೋಜನೆಗೆ ಗ್ರಹಣ ಹಿಡಿದಿದ್ದು, ಇದರಿಂದ ಸಾರ್ವಜನಿಕರು ಪರದಾಡುವಂತಾಗಿದೆ.
ಮೈಸೂರಿನ ಪೈಲೆಟ್ ಯೋಜನೆಯಾಗಿ 2016ರಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಕಾಮಗಾರಿ ಆರಂಭಿಸಲಾಗಿತ್ತು. ನಿಗದಿತ ಅವಧಿಯೊಳಗೆ ಕೆಲಸ ಪೂರ್ಣಗೊಂಡಿದ್ದರೆ 2019ಕ್ಕೆ ನಗರದ ಎಲ್ಲಾ 64 ವಾರ್ಡ್ನ ಪ್ರತಿಯೊಂದು ಮನೆಗೂ ದಿನದ 24 ಗಂಟೆ ನೀರು ಪೂರೈಸುವ ಈ ಯೋಜನೆ ಅನುಷ್ಠಾನಕ್ಕೆ ಬರಬೇಕಿತ್ತು. ಇದರಲ್ಲಿ ಯೋಜನೆಯನ್ನು 3 ವರ್ಷ ನಿರ್ವಹಣೆ ಮಾಡಲು 29 ಕೋಟಿ ರೂ. ನೀರಿನ ವ್ಯವಸ್ಥೆ ಮಾಹಿತಿ ಜಾಲದ ಮೂಲಕ ನಿಯಂತ್ರಿಸುವ ಸ್ಕಾಡಾ ವ್ಯವಸ್ಥೆ ಅನುಷ್ಠಾನಕ್ಕೆ 48 ಕೋಟಿ ರೂ. ಮೀಸಲಿರಿಸಲಾಗಿತ್ತು.
ಜಲ ಜೀವನ್ ಮಿಷನ್ ಅನುಷ್ಠಾನ ರಾಜ್ಯಕ್ಕೆ ಗದಗ ನಂಬರ್ 1
ಸದ್ಯ ನಗರಕ್ಕೆ ದಿನದ 24 ಗಂಟೆ ಕುಡಿಯುವ ನೀರು ಪೂರೈಸಬೇಕಿದ್ದ 233.25 ಕೋಟಿ ರೂ. ವೆಚ್ಚದ ಮಹತ್ವಾಕಾಂಕ್ಷಿ ಯೋಜನೆ ಸ್ಥಳೀಯ ಜನಪ್ರತಿನಿಧಿಗಳ ಇಚ್ಚಾಶಕ್ತಿ ಕೊರತೆ, ಗುತ್ತಿಗೆದಾರನ ವಿಳಂಬ ಧೋರಣೆಯಿಂದ ನೆನೆಗುದಿಗೆ ಬಿದ್ದಿದೆ. ಮುಂದಿನ 15 ದಿನಗಳಲ್ಲಿ ನಡೆಯುವ ಅಧಿಕಾರಿಗಳ ಸಭೆಯಲ್ಲಿ ಯೋಜನೆಯ ಭವಿಷ್ಯ ನಿರ್ಧಾರವಾಗಲಿದೆ.
ಯೋಜನೆಯ ವಿಶೇಷತೆಯೇನು?
ಒತ್ತಡದ ಆಧಾರದಲ್ಲಿ ನೀರು ಸರಬರಾಜು ಮಾಡುವ ವ್ಯವಸ್ಥೆ ಇದಾಗಿದೆ. ದಿನದ 24 ಗಂಟೆ ಕುಡಿಯುವ ನೀರು ಪೂರೈಕೆಯಾಗಲಿದೆ. ಇಡೀ ಮೈಸೂರು ನಗರವನ್ನು 69 ಡಿಎಂಎ (ಡಿಸ್ಟ್ರಿಕ್ಟ್ ಮೀಟರ್ಡ್ ಏರಿಯಾ)ಗಳಾಗಿ ವಿಂಗಡಿಸಲಾಗಿದೆ. ಒಂದು ಡಿಎಂಎ(ವೃತ್ತ) ವ್ಯಾಪ್ತಿಯಲ್ಲಿ 2500 ರಿಂದ 3000 ನೀರಿನ ಸಂಪರ್ಕವಿರುತ್ತದೆ. ಈ ಡಿಎಂಎಗೆ ನೀರು ಒಳಗೆ ಹಾಗೂ ಹೊರ ಹೋಗುವ ಒಂದೇ ಔಟ್ಲೆಟ್ ಇದ್ದು ಇದಕ್ಕೆ ಫ್ಲೊಮೀಟರ್ ಅಳವಡಿಸಲಾಗಿರುತ್ತದೆ. ಇದರಿಂದ ಎಷ್ಟು ಮನೆಗಳಿಗೆ ಯಾವ ಪ್ರಮಾಣದಲ್ಲಿ ನೀರು ಹೋಗಿದೆ ಎಂಬುದು ತಿಳಿಯುತ್ತದೆ.
ಆನ್ಲೈನ್ ಮೂಲಕ ನಿಯಂತ್ರಿಸುವ ಯೋಜನೆ
ಇದಲ್ಲದೇ ಒಂದು ಡಿಎಂಎ ವ್ಯಾಪ್ತಿಯಲ್ಲಿ ಎತ್ತರದಲ್ಲಿರುವ ಮನೆಯ ಸಂಪರ್ಕಕ್ಕೆ ಸಿಎಂಪಿ ಪಾಯಿಂಟ್ ಮಾಡಲಾಗಿರುತ್ತದೆ. ಆ ಜಾಗದಲ್ಲಿ ಪ್ರಷರ್ ಗೇಜ್ ಅಳವಡಿಸಲಾಗಿರುತ್ತದೆ. ಅಲ್ಲಿ 9 ಕೆಜಿ ಪ್ರೆಷರ್ ಬರಬೇಕು. ಆಗ ಆ ಡಿಎಂಎ ವ್ಯಾಪ್ತಿಯ ಎಲ್ಲಾ ಮನೆಗಳಿಗೂ ನೀರು ಸರಬರಾಜಾಗಿದೆ ಎಂದರ್ಥ. ಈ ರೀತಿ ನಗರಾದ್ಯಂತ ಒಟ್ಟು 69 ಕಡೆಗಳಲ್ಲಿ ಡಿಎಂಎ ಕೇಂದ್ರ ಮಾಡಬೇಕಿತ್ತು. ಇದಾದ ನಂತರ ಈ ಎಲ್ಲಾ ಕೇಂದ್ರಗಳ ನಿರ್ವಹಣೆಯನ್ನು 'ಸ್ಕಾಡಾ'ಎಂಬ ವ್ಯವಸ್ಥೆಗೆ ಒಳಪಡಿಸಲಾಗುತ್ತದೆ. ಈ ಮೂಲಕ ಮಾಹಿತಿ ಜಾಲಕ್ಕೆ ಒಳಪಡಿಸಿ ಸಂಪೂರ್ಣ ನೀರು ಸರಬರಾಜು ವ್ಯವಸ್ಥೆಯನ್ನು ಆನ್ಲೈನ್ ಮೂಲಕ ನಿಯಂತ್ರಿಸುವ ಯೋಜನೆ ಇದಾಗಿದೆ.
120 ಕೋಟಿ ರೂ. ವೆಚ್ಚ ಮಾಡಿ ಕಾಮಗಾರಿ ಸ್ಥಗಿತ
ಗುತ್ತಿಗೆದಾರ 120 ಕೋಟಿ ರೂ. ವೆಚ್ಚದ ಕಾಮಗಾರಿಗಳನ್ನು ಪೂರ್ಣಗೊಳಿಸಿ ಕೆಲಸ ಸ್ಥಗಿತಗೊಳಿಸಿದ್ದಾರೆ. ಉಳಿದ ಕಾಮಗಾರಿ ಕೈಗೊಳ್ಳಲು ತಾಂತ್ರಿಕ ಹಿನ್ನಡೆಯಾಗಿದೆ. ಗುತ್ತಿಗೆದಾರ ಅಕೌಂಟ್ ತಡೆ ಹಿಡಿಯಲಾಗಿದ್ದು, ನಾನಾ ಆಡಳಿತಾತ್ಮಕ ಸಮಸ್ಯೆ ತಲೆದೂರಿವೆ.
" ನಾನಾ ಕಾರಣಗಳಿಗೆ ನಗರಕ್ಕೆ ದಿನದ 24 ಗಂಟೆ ನೀರು ಸರಬರಾಜು ಮಾಡುವ ಯೋಜನೆ ಸ್ಥಗಿತಗೊಂಡಿತ್ತು. ಈಗಾಗಲೇ ಒಂದಷ್ಟು ಕಾಮಗಾರಿ ಪೂರ್ಣಗೊಂಡಿವೆ. ಇದೀಗ ಯೋಜನೆಗೆ ಮರು ಚಾಲನೆ ದೊರೆಯುವ ಕಾಲ ಬಂದಿದೆ. ಅದಕ್ಕೆ ಸಂಬಂಧಿಸಿದಂತೆ ಎಲ್ಲಾ ರೀತಿಯ ಪ್ರಯತ್ನ ನಡೆಯುತ್ತಿವೆ" ಎಂದು ವಾಣಿವಿಲಾಸ ಕುಡಿಯುವ ನೀರು ಸರಬರಾಜು ವಿಭಾಗದ ಎಇಇ ಮುಸ್ತಾಫ ತಿಳಿಸಿದ್ದಾರೆ.
ನೀರಿನ ಕಳ್ಳತನ ದೂರ
ನಗರದ ಪ್ರತಿಯೊಂದು ಮನೆಗೂ ದಿನದ 24 ಗಂಟೆ ಕುಡಿಯುವ ನೀರು ಸಿಗಲಿದೆ. ಏತ್ತರ ಹಾಗೂ ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ನೀರಿನ ಸಮಾನ ಹಂಚಿಕೆ ಮಾಡಬಹುದು. ಜೊತೆಗೆ ನೀರಿನ ಸೋರಿಕೆ ಮಾಹಿತಿ ಸಿಕ್ಕಿ ಸಮರ್ಪಕ ಬಳಕೆ ಮಾಡಿಕೊಳ್ಳಬಹುದು. ಅಲ್ಲದೆ, ನೀರಿನ ಕಳ್ಳತನದಂತಹ ಸಮಸ್ಯೆ ದೂರವಾಗುತ್ತದೆ.