ಕಾನ್ ಸ್ಟೆಬಲ್ ಗೆ ಕೊರೊನಾ ವೈರಸ್; ಮೈಸೂರಿನಲ್ಲಿ 22 ಪೊಲೀಸರಿಗೆ ಕ್ವಾರಂಟೈನ್
ಮೈಸೂರು, ಜೂನ್ 22: ನಂಜನಗೂಡು ಗ್ರಾಮಾಂತರ ಠಾಣೆಯ ಕಾನ್ ಸ್ಟೆಬಲ್ ಒಬ್ಬರಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿದ್ದು, ಮೈಸೂರು ಜಿಲ್ಲಾ ಪೊಲೀಸರಿಗೆ ತಲೆ ನೋವಾಗಿದೆ. ಈತನ ಪ್ರಾಥಮಿಕ ಸಂಪರ್ಕದಲ್ಲಿದ್ದ ಅಡಿಷನಲ್ ಎಸ್ ಪಿ ಸ್ನೇಹ ಸೇರಿದಂತೆ 22 ಜನರನ್ನು ಕ್ವಾರಂಟೈನ್ ನಲ್ಲಿ ಇರಿಸಲಾಗಿದೆ.
ಎಲ್ಲರ ಗಂಟಲು ದ್ರವ ಸಂಗ್ರಹಣೆ ಮಾಡಿ ಪರೀಕ್ಷೆಗೆ ರವಾನೆ ಮಾಡಲಾಗಿದೆ. ಸದ್ಯಕ್ಕೆ ಎಲ್ಲರನ್ನೂ ಕ್ವಾರಂಟೈನ್ ನಲ್ಲಿ ಇಡಲಾಗಿದೆ. ಎಸ್ ಪಿ ರಿಷ್ಯಂತ್ ಸೇರಿ 36 ಜನರು ಸೆಕೆಂಡರಿ ಸಂಪರ್ಕದಲ್ಲಿ ಇದ್ದು, ಈ ಸಂಗತಿ ಮೈಸೂರು ಜಿಲ್ಲಾ ಪೊಲೀಸರನ್ನು ಆತಂಕಕ್ಕೆ ದೂಡಿದೆ.
ಕೋವಿಡ್ - 19 ಪರೀಕ್ಷೆ; ಮೈಸೂರು ಜಿಲ್ಲೆಯ ಜನರಿಗೊಂದು ಮನವಿ
ಈಚೆಗೆ ಟಿ.ನರಸೀಪುರ ಪೊಲೀಸ್ ಠಾಣೆಯಲ್ಲಿನ ಬುಲೆಟ್ ನಾಪತ್ತೆ ಪ್ರಕರಣದ ತನಿಖೆಯಲ್ಲಿದ್ದ ಈ ಕಾನ್ ಸ್ಟೆಬಲ್ ಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಹೀಗಾಗಿ ಬುಲೆಟ್ ಪ್ರಕರಣದ ತನಿಖೆ ನಡೆಸುತ್ತಿದ್ದ ಪೊಲೀಸ್ ಹಿರಿಯ ಅಧಿಕಾರಿಗಳು, ಕಿರಿಯ ಅಧಿಕಾರಿಗಳಿಗೂ ಆತಂಕ ಉಂಟಾಗಿದೆ.
ಸದ್ಯಕ್ಕೆ ಈ ಪ್ರಕರಣದಿಂದಾಗಿ ಐಜಿಪಿ (ದಕ್ಷಿಣ ವಲಯ) ವಿಪುಲ್ ಕುಮಾರ್, ಎಸ್ಪಿ ರಿಷ್ಯಂತ್ ಹಾಗೂ ಎಎಸ್ ಪಿ ಸ್ನೇಹ ಅವರನ್ನು ಹೋಂ ಕ್ವಾರಂಟೈನ್ ನಲ್ಲಿರಲು ಸೂಚಿಸಲಾಗಿದೆ. ಎಸ್ಪಿ ಕಚೇರಿಯ 18 ಸಿಬ್ಬಂದಿಗೆ ರಜೆ ಕೊಡಲಾಗಿದೆ. ಸದ್ಯ ಮನೆಯಿಂದಲೇ ಜಿಲ್ಲೆಯ ಕಾನೂನು ಸುವ್ಯವಸ್ಥೆಯನ್ನು ಅಧಿಕಾರಿಗಳು ಪಾಲಿಸುತ್ತಿದ್ದಾರೆ. ಎಸ್ ಪಿ ಹಾಗೂ ಐಜಿಪಿ ಕಚೇರಿ ಒಂದೇ ಕಟ್ಟಡದಲ್ಲಿರುವ ಕಾರಣ ಎಲ್ಲರಿಗೂ ಹೋಂ ಕ್ವಾರಂಟೈನ್ ವಿಧಿಸಲಾಗಿದೆ. ಇಡೀ ಕಟ್ಟಡವನ್ನು ಮಹಾನಗರ ಪಾಲಿಕೆ ಸ್ಯಾನಿಟೈಸ್ ಮಾಡುತ್ತಿದೆ.