ಮೈಸೂರು: ಕ್ಯಾನ್ಸರ್ಗೆ ತುತ್ತಾಗಿದ್ದ ಬಾಲಕಿ ಕೊನೆ ಆಸೆಯಂತೆ ಅರಣ್ಯಾಧಿಕಾರಿಯಾದ ಕಥೆ ಇದು!
ಮೈಸೂರು, ಏಪ್ರಿಲ್ 30: ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದ ಬಾಲಕಿ ತನ್ನ ಕೊನೆ ಆಸೆಯಂತೆ ಆರ್ಎಫ್ಒ ಆಗಿ ಅಧಿಕಾರ ನಡೆಸಿರುವ ಅಪರೂಪದ ಘಟನೆ ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ನಡೆದಿದೆ.
ಮಂಡ್ಯ ಜಿಲ್ಲೆಯ ಬೇವಕಲ್ಲು ಗ್ರಾಮದ ಈರಯ್ಯ-ನೇತ್ರ ದಂಪತಿ ಪುತ್ರಿ 14 ವರ್ಷದ ಐಶ್ವರ್ಯ ಮೂಳೆ ಕ್ಯಾನ್ಸರ್ಗೆ ತುತ್ತಾಗಿ ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ಆಕೆ ಅರಣ್ಯಾಧಿಕಾರಿಯಾಗಬೇಕೆಂಬ ಕನಸು ಕಂಡಿದ್ದಳು. ಈ ಹಿನ್ನೆಲೆಯಲ್ಲಿ ನಾಗರಹೊಳೆ ವನ್ಯಜೀವಿ ವಲಯದಲ್ಲಿ ಏ.29ರ ಶುಕ್ರವಾರ ಒಂದು ದಿನ ವಲಯ ಅರಣ್ಯಾಧಿಕಾರಿಯಾಗಿ ಕೆಲಸ ನಿರ್ವಹಿಸಿ ಆಡಳಿತದಲ್ಲಿ ಆಶ್ಚರ್ಯ ಮೂಡಿಸಿದ್ದಲ್ಲದೆ, ಅಧಿಕಾರವನ್ನು ಸಂಭ್ರಮಿಸಿದರು.
ಮೈಸೂರು ಅರಣ್ಯ ಭವನದಲ್ಲಿ ಡಿ ದರ್ಜೆ ನೌಕರರಾಗಿರುವ ಅವಳ ಅಜ್ಜಿ ಹೇಳುತ್ತಿದ್ದ ಅರಣ್ಯ, ವನ್ಯಜೀವಿ ಹಾಗೂ ಪರಿಸರ ಸಂರಕ್ಷಣೆ ಕುರಿತು ಆಸಕ್ತಿ ವ್ಯಕ್ತಪಡಿಸುತ್ತಿದ್ದಳು. ಬಾಲ್ಯದಿಂದಲೂ ಐಶ್ವರ್ಯಳಿಗೆ ಅರಣ್ಯಾಧಿಕಾರಿಯಾಗಬೇಕು ಎಂಬ ಹಂಬಲವಿತ್ತು. ಪೋಷಕರಿಗೂ ಮಗಳನ್ನು ಅರಣ್ಯಾಧಿಕಾರಿಯಾಗಿಸಬೇಕೆಂಬ ಕನಸು ಹೊತ್ತಿದ್ದರು. ಆದರೆ ಮಗಳಿಗೆ ಕ್ಯಾನ್ಸರ್ ಆಕೆ ಗುರಿಗೆ ಅಡ್ಡ ಉಂಟು ಮಾಡಿತು.
ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಹುಣಸೂರು ನಿರ್ದೇಶಕರ ಕಚೇರಿಯಲ್ಲಿ ಐಶ್ವರ್ಯ ವಲಯ ಅರಣ್ಯಾಧಿಕಾರಿಯಾಗಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎ.ವಿ. ಸತೀಶ್ರಲ್ಲಿ ವರದಿ ಮಾಡಿಕೊಂಡು, ಏ.29ರ ಶುಕ್ರವಾರ ನಾಗರಹೊಳೆ ವನ್ಯಜೀವಿ ವಲಯದಲ್ಲಿ ಸಿಬ್ಬಂದಿಯಿಂದ ಗೌರವರಕ್ಷೆ ಸ್ವೀಕರಿಸಿದರು. ಸಿಬ್ಬಂದಿಯೊಂದಿಗೆ ದೈನಂದಿನ ಚಟುವಟಿಕೆಗಳ ಬಗ್ಗೆ ಚರ್ಚಿಸಿ, ಕಳ್ಳಬೇಟೆ ತಡೆ ಶಿಬಿರ ಹಾಗೂ ಅರಣ್ಯ ಗಡಿಗಳನ್ನು ಪರಿಶೀಲಿಸಿದರು. ವನ್ಯಜೀವಿಗಳ ಕಂಡು ಪುಳಕಿತರಾದರು.
ಒಂದು ದಿನದ ಕರ್ತವ್ಯ ಮುಗಿಸಿದ ಆರ್ಎಫ್ಒ ಐಶ್ವರ್ಯ ತಾಯಿಯೊಂದಿಗೆ ಸಮವಸ್ತ್ರದಲ್ಲೇ ಊರಿಗೆ ಪಯಣ ಬೆಳೆಸಿದಳು. ಹುಣಸೂರು ಕಚೇರಿಯಿಂದ ಎಸಿಎಫ್ ಸತೀಶ್ ಬೀಳ್ಕೊಟ್ಟರು.
''ನನ್ನ ಮಗಳು ಬೇವಕಲ್ಲು ಗ್ರಾಮದ ಶಾಂತೇಶ್ವರಿ ವಿದ್ಯಾಸಂಸ್ಥೆಯಲ್ಲಿ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಬಹಳ ಚಟುವಟಿಕೆಯಿಂದಿದ್ದಳು. ನಾವು ಬಡಕುಟುಂಬದ ಮಂದಿ, ಮಗಳಿಗೆ ಕ್ಯಾನ್ಸರ್ಯಿದೆ ಎಂಬುದನ್ನು ಕೇಳಿ ತುಂಬಾ ನೋವಾಗಿದೆ. ಈ ಸಂದರ್ಭದಲ್ಲಿ ಅರಣ್ಯಾಧಿಕಾರಿಯಾಗಬೇಕೆಂಬ ಆಸೆಯನ್ನು ಈಡೇರಿಸಿರುವ ಎಲ್ಲರಿಗೂ ಧನ್ಯವಾದಗಳು,'' ಎಂದು ಐಶ್ವರ್ಯ ತಾಯಿ ನೇತ್ರಾವತಿ ತಿಳಿಸಿದ್ದಾರೆ.