ಹಿಮಾಲಯ ಏರಿ ಬಾವುಟ ಹಾರಿಸಿದರು ಎಚ್.ಡಿ.ಕೋಟೆ ಆದಿವಾಸಿ ಮಕ್ಕಳು
ಮೈಸೂರು, ಜೂನ್ 19: ಬಹುತೇಕರಿಗೆ ಒಂದಲ್ಲಾ ಒಂದು ಬಾರಿ ಹಿಮಾಲಯ ಶಿಖರವನ್ನೇರಬೇಕೆಂಬ ಕನಸಿರುತ್ತದೆ. ಗ್ರಾಮೀಣ ಭಾಗದ ಹಾಡಿ ಮಕ್ಕಳಂತೂ ಹಿಮಾಲಯ ಗಗನ ಕುಸುಮ ಎಂದೇ ಭಾವಿಸುತ್ತಾರೆ. ಆದರೆ ಮೈಸೂರಿನ ಬುಡಕಟ್ಟು ಮಕ್ಕಳಿಗೆ ಈ ಗಗನ ಕುಸುಮ ಸುಲಭವಾಗಿ ಒಲಿದಿದೆ.
ನಾಗರಹೊಳೆ ಹಾಗೂ ಬಂಡೀಪುರದ ಆದಿವಾಸಿ ಮಕ್ಕಳೇ ತಮ್ಮ ಹಿಮಾಲಯ ಏರುವ ಕನಸನ್ನು ನನಸು ಮಾಡಿಕೊಂಡಿರುವವರು. ಮೈಸೂರು ಜಿಲ್ಲೆಯ ಎಚ್.ಡಿ ಕೋಟೆ ತಾಲ್ಲೂಕಿನ ವಿವೇಕ ಬುಡಕಟ್ಟು ಕಲಿಕಾ ಕೇಂದ್ರದ ಈ ವಿದ್ಯಾರ್ಥಿಗಳು ಹಿಮಾಚಲ ಪ್ರದೇಶದ ಧೌಲಾರ್ಧ ರೇಂಜ್ ನಲ್ಲಿರುವ 14 ಸಾವಿರ ಅಡಿ ಎತ್ತರದ ಸೌರ್ಕುಂಡಿ ಪಾಸ್ ಶಿಖರವನ್ನೇರಿ ಅಲ್ಲಿ ನಮ್ಮ ದೇಶದ ಧ್ವಜ ಹಾರಿಸಿದ್ದಾರೆ.
ಹಿಮಾಲಯ ಪರ್ವತ ಏರಲಿದ್ದಾರೆ ಬಂಡೀಪುರ, ನಾಗರಹೊಳೆ ಬುಡಕಟ್ಟು ಬಾಲಕಿಯರು
ಟೈಗರ್ ಅಡ್ವೆಂಚರ್ ಫೌಂಡೇಷನ್, ಲೇಡಿಸ್ ಸರ್ಕಲ್ ಇಂಡಿಯಾ ವತಿಯಿಂದ ಹಾಡಿ ವಿದ್ಯಾರ್ಥಿಗಳಿಗಾಗಿ ವಿಶೇಷ ಚಾರಣವನ್ನು ಆಯೋಜಿಸಲಾಗಿತ್ತು. ಚಾರಣದಲ್ಲಿ 12 ಜನ ಬುಡಕಟ್ಟು ಕಲಿಕಾ ಕೇಂದ್ರದ ವಿದ್ಯಾರ್ಥಿನಿಯರು, ಇಬ್ಬರು ಗ್ರಾಮೀಣ ವಿದ್ಯಾರ್ಥಿನಿಯರು ಸೇರಿದಂತೆ ವಿವಿಧ ಜಿಲ್ಲೆಯ ಒಟ್ಟು 14 ಮಂದಿ ಮೈಸೂರಿನಿಂದ ತೆರಳಿ ಹಿಮಾಲಯವನ್ನು ಏರಿದ್ದಾರೆ.
ಮೇ 1ಕ್ಕೆ ಮೈಸೂರಿನಿಂದ ಹೊರಟ ತಂಡ, ನಂತರ ದೆಹಲಿ ತಲುಪಿ ಅಲ್ಲಿಂದ ಹಿಮಾಲಯವನ್ನೇರಲು ಶುರು ಮಾಡಿದೆ. ಮೈನಸ್ 5 ಡಿಗ್ರಿ ಸೆಲ್ಸಿಯಸ್ ನಲ್ಲಿದ್ದ ಸ್ಥಳದಲ್ಲಿ ಮೊದಲಿಗೆ ಮಕ್ಕಳಿಗೆ ಭಯ ಶುರುವಾಗಿದೆ. ಆದರೆ ಸಹಪಾಠಿಗಳ ಉತ್ಸಾಹ ಎಲ್ಲರನ್ನೂ ಗುರಿ ತಲುಪುವಂತೆ ಮಾಡಿದೆ. ಇದೇ ಖುಷಿಯಲ್ಲಿ ಭಾರತದ ಧ್ವಜ ಹಾರಿಸಿ ತಮ್ಮ ಗುರಿ, ಆಸೆಯನ್ನು ಈಡೇರಿಸಿಕೊಂಡಿದ್ದಾರೆ.
ರುದ್ರರಮಣೀಯ ಹಿಮಾಲಯದಲ್ಲಿ ಮೋದಿ ಧ್ಯಾನದ ಮತ್ತೊಂದು ಚಿತ್ರ
ಹಿಮಾಲಯ ಏರಲು ಈ ಎಲ್ಲಾ ವಿದ್ಯಾರ್ಥಿನಿಯರಿಗೆ ಕಳೆದ ನಾಲ್ಕು ತಿಂಗಳಿನಿಂದ ವಿಶೇಷ ತರಬೇತಿ ನೀಡಲಾಗಿತ್ತು. ರನ್ನಿಂಗ್, ಜಂಪಿಂಗ್, ಕಂಬಿಯ ಕೆಳಗೆ ನುಸುಳುವುದು ಸೇರಿದಂತೆ ಸಾಕಷ್ಟು ದೈಹಿಕ ಕಸರತ್ತುಗಳ ತರಬೇತಿ ಮೂಲಕ ಎಲ್ಲಾ ವಿದ್ಯಾರ್ಥಿಗಳನ್ನು ಹಿಮಾಲಯದ ಕಠಿಣ ಪರಿಸ್ಥಿತಿಗೆ ಹೊಂದುಕೊಳ್ಳುವಂತೆ ಸಜ್ಜುಗೊಳಿಸಲಾಗಿತ್ತು. ಅಲ್ಲದೆ ಈ ಚಾರಣಕ್ಕೆ ಬರೋಬ್ಬರಿ 8.5 ಲಕ್ಷ ವೆಚ್ಷವನ್ನು ದಾನಿಗಳು ನೀಡಿದ್ದಾರೆ. ನಮ್ಮ ದೇಶದವರು ಮಾತ್ರವಲ್ಲದೆ ವಿದೇಶದವರೂ ಈ ವಿದ್ಯಾರ್ಥಿನಿಯರಿಗೆ ಸಹಾಯ ಮಾಡಿದ್ದಾರೆ.
ಅವರೆಲ್ಲರ ಸಹಾಯ, ವಿದ್ಯಾರ್ಥಿನಿಯರ ಆಸೆ, ಶ್ರಮ ಎಲ್ಲವೂ ಈಗ ಫಲಕೊಟ್ಟಿದೆ.