ಮೈಸೂರು; ಎಟಿಎಂ ಯಂತ್ರ ಕೊರೆದು 12 ಲಕ್ಷ ದರೋಡೆ
ಮೈಸೂರು, ಸೆಪ್ಟೆಂಬರ್ 19; ಎಟಿಎಂ ಯಂತ್ರವನ್ನು ಕೊರೆದು 12.86 ಲಕ್ಷ ಹಣವನ್ನು ದರೋಡೆ ಮಾಡಿರುವ ಪ್ರಕರಣ ಇಲ್ಲಿಗೆ ಸಮೀಪದ ಹೂಟಗಳ್ಳಿ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ.
ಸಿನಿಮೀಯ ಶೈಲಿಯಲ್ಲಿ ಈ ದರೋಡೆ ಪ್ರಕರಣ ನಡೆದಿದ್ದು, ದುಷ್ಕರ್ಮಿಗಳು ಸಾಕಷ್ಟು ಪೂರ್ವ ಸಿದ್ಧತೆ ಮಾಡಿಕೊಂಡೇ ಲೂಟಿ ಮಾಡಿದ್ದಾರೆ. ಹೂಟಗಳ್ಳಿಯ ರಾಣೆ ಮದ್ರಾಸ್ ಕಾರ್ಖಾನೆ ಕಾಂಪೌಂಡ್ ಗೆ ಹೊಂದಿಕೊಂಡಿರುವ ಎಚ್ಡಿಎಫ್ ಸಿ ಬ್ಯಾಂಕ್ ಎಟಿಎಂ ಕೇಂದ್ರಕ್ಕೆ ಗುರುವಾರ ಬೆಳಗಿನ ಜಾವ ನುಗ್ಗಿರುವ ಕಳ್ಳರು, 12.86 ಲಕ್ಷ ರೂ. ಹಣ ದೋಚಿ ಪರಾರಿಯಾಗಿದ್ದಾರೆ.
ಕಳ್ಳರು ಮೊದಲು ಸಿಸಿಟಿವಿ ಕ್ಯಾಮೆರಾಗೆ ಕಪ್ಪು ಬಣ್ಣದ ಪೈಂಟ್ ಸ್ಪ್ರೈ ಮಾಡಿದ್ದಾರೆ. ಆ ನಂತರ ಗ್ಯಾಸ್ ಕಟರ್ ಮೂಲಕ ಎಟಿಎಂ ಯಂತ್ರವನ್ನು ಕೊರೆದಿದ್ದಾರೆ. ಹಣ ದೋಚಿ ಅಲ್ಲಿಂದ ಪರಾರಿಯಾಗಿದ್ದಾರೆ. ಗ್ಯಾಸ್ ಸಿಲಿಂಡರ್ ಮತ್ತು ಗ್ಯಾಸ್ ಕಟರ್ ಗಳನ್ನು ಸ್ಥಳದಲ್ಲೇ ಬಿಟ್ಟು ಪರಾರಿ ಆಗಿದ್ದಾರೆ. ಈ ಎಟಿಎಂ ಕೇಂದ್ರಕ್ಕೆ ಕಾವಲುಗಾರ ಇರಲಿಲ್ಲ ಎಂದು ತಿಳಿದುಬಂದಿದೆ.
ಈ ಸಂಬಂಧ ವಿಜಯನಗರ ಠಾಣೆಯ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಮುಂದುವರೆಸಿದ್ದಾರೆ.