ಮೈಸೂರಲ್ಲಿ 10ನೇ ಮಹಾಕುಂಭಮೇಳಕ್ಕೆ ಭರ್ಜರಿ ಸಿದ್ಧತೆ
ಮೈಸೂರು,ಫೆ.19: ಮೂರು ವರ್ಷಕ್ಕೊಮ್ಮೆ ತ್ರಿವೇಣಿ ಸಂಗಮದಲ್ಲಿ ನಡೆಯುವ ಮಹಾಕುಂಭಮೇಳವು ಫೆಬ್ರವರಿ 20 ರಿಂದ 22 ರವರೆಗೆ 10 ನೇ ಮಹಾಕುಂಭಮೇಳ ಟಿ. ನರಸಿಪುರ ತಾಲೂಕಿನ ಶ್ರೀ ಕ್ಷೇತ್ರ ತಿರುಮಕೂಡಲಿನಲ್ಲಿ ಜರುಗಲಿದ್ದು, ಸಿದ್ಧತೆ ಭರ್ಜರಿಯಾಗಿ ನಡೆಯುತ್ತಿದೆ.
ಈ 10ನೇ ಮಹಾಕುಂಭಮೇಳಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಭಕ್ತಾಧಿಗಳು ಆಗಮಿಸುವ ಸಾಧ್ಯತೆ ಇರುವುದರಿಂದ ಯಾವುದೇ ಕುಂದುಕೊರತೆ ಸಂಭವಿಸದಂತೆ ತ್ರಿವೇಣಿ ಸಂಗಮದಲ್ಲಿ ತಾತ್ಕಾಲಿಕ ಕುಟೀರ ನಿರ್ಮಾಣ, ವೇದಿಕೆ ಹಾಗೂ ಬ್ಯಾರಿಕೇಡಿಂಗ್ ನಿರ್ಮಾಣ ಸೇರಿದಂತೆ ಹಲವಾರು ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದು ಅಪರ ಜಿಲ್ಲಾಧಿಕಾರಿ ವೆಂಕಟೇಶ್ ತಿಳಿಸಿದರು.[ಭಾರತದ ಅತ್ಯಂತ ಸ್ವಚ್ಛ ನಗರ ಪಟ್ಟಿಯಲ್ಲಿ ಮೈಸೂರು ನಂ.1]
10ನೇ ಮಹಾಕುಂಭಮೇಳವನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಲೋಕಸಭಾ ಸದಸ್ಯ ಪ್ರತಾಪಸಿಂಹ ಅವರು ಅಧ್ಯಕ್ಷತೆ ವಹಿಸುವರು. ಫೆ.22 ರಂದು ಬೆಳಿಗ್ಗೆ 10 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮಾರೋಪ ಭಾಷಣ ಮಾಡುವರು. ಲೋಕಪಯೋಗಿ ಸಚಿವ ಎಚ್.ಸಿ. ಮಹದೇವಪ್ಪ ಅವರು ಅಧ್ಯಕ್ಷತೆ ವಹಿಸುವರು.[ಜನಸಾಗರದಿಂದ ತುಂಬಿ ತುಳುಕುತ್ತಿದೆ ಮೈಸೂರಿನ ಸುತ್ತೂರು ಕ್ಷೇತ್ರ]
10ನೇ ಮಹಾ ಕುಂಭಮೇಳದ ಕಾರ್ಯಕ್ರಮಗಳು:
ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾ ಮಠದ ಸ್ವಾಮೀಜಿ ಶ್ರೀ ಸೋಮನಾಥ ಸ್ವಾಮೀಜಿ ಅವರು ಈ ಮಹಾಕುಂಭಮೇಳದಲ್ಲಿ ಪಾಲ್ಗೊಳ್ಳಲಿದ್ದು, ಕುಂಭಮೇಳದ ಹಲವಾರು ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು.
* ಫೆಬ್ರವರಿ ೨೧ರ ಸಂಜೆ 7-30 ಗಂಟೆಗೆ ಕುಂಭಮೇಳದಲ್ಲಿ ಗಂಗಾಪೂಜೆಯೊಂದಿಗೆ ದೀಪಾರತಿ.
* ಫೆಬ್ರವರಿ 20, 21 ಹಾಗೂ 22 ರಂದು ಪ್ರತಿದಿನ ಬೆಳಿಗ್ಗೆ ಸಂಕಲ್ಪ, ಹೋಮ ಅಗಸ್ತ್ಯೇಶ್ವರಸ್ವಾಮಿ ದೇವಸ್ಥಾನದಲ್ಲಿ ರುದ್ರಾಭಿಷೇಕ ಪೂಜೆ
* ಫೆ. 20 ರಂದು ಬೆಳಿಗ್ಗೆ 9 ಗಂಟೆಗೆ ಶ್ರೀ ಅಗಸ್ತ್ಯೇಶ್ವರಸ್ವಾಮಿ ಸನ್ನಿಧಿಯಲ್ಲಿ ಅನುಜ್ಞೆ, ಪುಣ್ಯಾಹ, ಗಣಹೋಮ, ಪೂರ್ಣಾಹುತಿ, ಅಭಿಷೇಕ, ಮಹಾಮಂಗಳಾರತಿ ಮತ್ತು ಧ್ವಜಾರೋಹಣ
* ಸಂಜೆ 5 ಗಂಟೆಗೆ ಧರ್ಮಸಭೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ
* ಫೆ 21 ರಂದು ಬೆಳಿಗ್ಗೆ ಪುಣ್ಯಾಹ, ನವಗ್ರಹ ಹೋಮ, ಸುದರ್ಶನ ಹೋಮ, ಬೆಳಿಗ್ಗೆ 11 ಗಂಟೆಗೆ ಧರ್ಮ ಸಭೆ, ಸಂಜೆ 4 ಗಂಟೆಗೆ ಮಹಾತ್ಮರ, ಸಂತರ ಹಾಗೂ ಮಹಾಮಂಡಲೇಶ್ವರರ ಸಂಗಮಕ್ಷೇತ್ರ ಪ್ರವೇಶ, ಗುಂಜಾನರಸಿಂಹಸ್ವಾಮಿ ದೇವಸ್ಥಾನದಿಂದ ತಿ.ನರಸಿಪುರ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ. ಸಂಜೆ 6 ಗಂಟೆಗೆ ಶ್ರೀ ರುದ್ರಹೋಮ, ಪೂರ್ಣಾಹುತಿ, ರಾತ್ರಿ 7 ಗಂಟೆಗೆ ಗಂಗಾಪೂಜೆ, ದೀಪಾರತಿ
* ಫೆಬ್ರವರಿ 22 ರಂದು ಬೆಳಿಗ್ಗೆ ಚಂಡಿ ಹೋಮ, ಪೂರ್ಣಾಹುತಿ, ಕುಂಭೋದ್ವಾಸನ ಹಾಗೂ ಏಳು ಪವಿತ್ರ ನದಿಗಳಿಂದ ತಂದ ತೀರ್ಥಗಳನ್ನು ತ್ರಿವೇಣಿಸಂಗಮದಲ್ಲಿ ಸಂಯೋಜಿಸುವುದು, ಪುಣ್ಯಸ್ನಾನ ಹಾಗೂ ಧರ್ಮ ಸಭೆ.
* ಈ ಬಾರಿಯ ಕುಂಭಮೇಳದಲ್ಲಿ ಶ್ರೀ ಸುತ್ತೂರು ವೀರಸಿಂಹಾಸನ ಮಹಾಸಂಸ್ಥಾನ ಮಠದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು, ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಜಗದ್ಗುರು ಶ್ರೀ ನಿರ್ಮಲಾನಂದನಾಥ ಮಹಾಸ್ವಾಮಿಗಳು ಸೇರಿದಂತೆ ಹಲವಾರು ಗಣ್ಯರು ಆಗಮಿಸುವರು.