ಮಾ.6ಕ್ಕೆ ಮೈಸೂರಲ್ಲಿ 1008 ಕೋಟಿ ಹನುಮಾನ್ ಚಾಲೀಸಾ
ಮೈಸೂರು, ಫೆಬ್ರವರಿ 25 : ಲೋಕ ಕಲ್ಯಾಣಾರ್ಥ ಮೈಸೂರಿನಲ್ಲಿ ಮೊದಲ ಬಾರಿಗೆ ನಡೆಯುತ್ತಿರುವ 1008 ಕೋಟಿ ಹನುಮಾನ್ ಚಾಲೀಸಾ ಪಾರಾಯಣ ಹಾಗೂ ಮಹಾ ಯಜ್ಞವನ್ನು ಮಾ.6ರ ಬೆಳಗ್ಗೆ 9ಕ್ಕೆ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ.
ಮೈಸೂರಿನ ನಂಜನಗೂಡು ರಸ್ತೆಯಲ್ಲಿರುವ ಅವಧೂತ ದತ್ತಪೀಠ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ವತಿಯಿಂದ ಹನುಮಾನ್ ಚಾಲೀಸಾ ಪಾರಾಯಣ ನಡೆಯುತ್ತಿದ್ದು, ಹತ್ತಾರು ಸಂಘ-ಸಂಸ್ಥೆಗಳು, ದೇವಾಲಯಗಳು, ಭಜನಾ ಮಂಡಳಿಗಳು ಹಾಗೂ ಸುಮಾರು 30 ರಿಂದ 40ಸಾವಿರ ಜನರು ಇದರಲ್ಲಿ ಭಾಗವಹಿಸಲಿದ್ದಾರೆ.
ಈಗಾಗಲೇ 11 ಕಡೆಗಳಲ್ಲಿ ಹನುಮಾನ್ ಚಾಲೀಸಾ ಮಾಡಿಸಲು ಮುಂದಾಗಿದ್ದು, ಮೊದಲು ಮೈಸೂರು ನಂತರ ಕಾಶಿ, ರಾಮೇಶ್ವರ ಹೀಗೆ ನಾನಾ ಕಡೆಗಳಲ್ಲಿ ನಡೆಯಲಿದ್ದು, ಮೈಸೂರಿನಲ್ಲಿ ಸಮಾಪ್ತಿಗೊಳ್ಳಲಿದೆ. ದತ್ತ ಕ್ರಿಯಾ ಯೋಗ ಅಂತಾರಾಷ್ಟ್ರೀಯ ಕೇಂದ್ರದಿಂದ ವಿಶೇಷ ಕ್ರಿಯಾ ಯೋಗ ಶಿಬಿರ ಮಾ.3ರಿಂದ 5ರವರೆಗೂ ಹಮ್ಮಿಕೊಳ್ಳಲಾಗಿದೆ.[ತುಳಸೀದಾಸರು ರಚಿಸಿದ ಶ್ರೀ ಹನುಮಾನ್ ಚಾಲೀಸಾ]
ವಿಶೇಷ ಕ್ರಿಯಾ ಯೋಗ ಶಿಬಿರದ ಉದ್ಘಾಟನೆಯನ್ನು ದತ್ತ ಪೀಠಾಧಿಪತಿ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಹಾಗೂ ಕಿರಿಯ ಶ್ರೀಗಳಾದ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ರಾಮಕೃಷ್ಣ ಆಶ್ರಮದ ಮುಕ್ತಿದಾನಂದಜೀ ಮಹಾರಾಜ್ ಅವರು ಉದ್ಘಾಟಿಸಲಿದ್ದಾರೆ. ಇನ್ನಷ್ಟು ಮಾಹಿತಿ ಇಲ್ಲಿದೆ. [ಸೂರ್ಯ ನಮಸ್ಕಾರ ಕ್ರಮಬದ್ಧವಾಗಿ ಮಾಡುವ ವಿಧಾನ]
ನೆದರ್ ಲ್ಯಾಂಡಿನ ವೀರ ಹನುಮ
ಲೋಕ ಕಲ್ಯಾಣಾರ್ಥ ಹನುಮಾನ್ ಚಾಲೀಸಾ ಪಾರಾಯಣ ಯಜ್ಞದ ಪ್ರಚಾರ ರಥ ಎಲ್ಲೆಡೆ ಸಾಗಲಿದ್ದು, ನೆದರ್ ಲ್ಯಾಂಡಿನ ಚಿನಿಕುರುಳಿ ಅಲಿಯಾಸ್ ಚಾನ್ಫಿಲಪ್ ಇದರಲ್ಲಿ ಹನುಮಾನ್ ವೇಷಧಾರಿಯಾಗಿ ಭಾಗವಹಿಸಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಶ್ರೀಗಳು ಹನುಮಾನ್ ಚಾಲೀಸಾ ಪ್ರಚಾರ ರಥಕ್ಕೆ ಚಾಲನೆ ನೀಡಿದ ಸಂದರ್ಭ ಚಿನಿಕುರುಳಿ ಅಲಿಯಾಸ್ ಚಾನ್ಫಿಲಪ್ ವೇಷಧಾರಿಯಾಗಿ ಕಾಣಿಸಿಕೊಂಡರು.
ಚಿನಿಕುರುಳಿ ಅಲಿಯಾಸ್ ಚಾನ್ಫಿಲಪ್ ಯಾರು?
ಮೂಲತಃ ನೆದರ್ ಲ್ಯಾಂಡ್ ದೇಶದವರಾಗಿರುವ ಇವರು ಸುಮಾರು 15 ವರ್ಷಗಳಿಂದ ಗಣಪತಿ ಸಚ್ಚಿದಾನಂದ ಆಶ್ರಮಕ್ಕೆ ಬರುತ್ತಿದ್ದು, ಹಿಂದೂ ಧರ್ಮದ ಬಗ್ಗೆ ಒಲವು ಹೊಂದಿರುವ ಅವರು ಆಶ್ರಮದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳು, ವೇದ ಪಠಣ, ದತ್ತಪೂಜೆಯಲ್ಲಿ ಪಾಲ್ಗೊಳ್ಳುತ್ತಾರೆ. ಇದೀಗ ಹನುಮಾನ್ ಚಾಲೀಸಾ ಯಜ್ಞದ ಪ್ರಚಾರ ರಥದಲ್ಲಿ ವೀರ ಹನುಮನಾಗಿ ಕಾಣಿಸಿಕೊಳ್ಳಲಿದ್ದಾರೆ.
ಹನುಮಾನ್ ಚಾಲೀಸ ಗಿನ್ನೆಸ್ ದಾಖಲೆಯಲ್ಲಿ
2015ರ ಜನವರಿ 31ರಂದು ತೆನಾಲಿ ಪಟ್ಟಣದಲ್ಲಿ ನಡೆದ ಬೃಹತ್ ಹನುಮಾನ್ ಚಾಲೀಸಾ ಕಾರ್ಯಕ್ರಮ ಗಿನ್ನೆಸ್ ದಾಖಲೆಗೂ ಸೇರ್ಪಡೆಯಾಗಿತ್ತು. ಆಗ 900ಕೋಟಿ ಹನುಮಾನ್ ಚಾಲೀಸಾ ಪಾರಾಯಣ ಮಾಡಿಸುವ ಬೃಹತ್ ಸಂಕಲ್ಪ ಮಾಡಲಾಗಿತ್ತು.
ನೂರಾರು ಹನುಮಾನ್ ಶಿಲ್ಪಕಲಾಕೃತಿಗಳು
ಈ ಸಮಯದಲ್ಲಿ ಸನಾತನ ಧರ್ಮ ಪ್ರಾರಂಭದಿಂದ ದೊರೆತ ಸುಂದರವಾದ ಹನುಮಾನ್ ಶಿಲ್ಪಾಕೃತಿಗಳು ಆಗಮಿಸಲಿದ್ದು, ಆತನ ಹಲವು ರೂಪಗಳನ್ನು ನೋಡಿ ಕಣ್ತುಂಬಿಕೊಳ್ಳಬಹುದಾಗಿದೆ. ಈ ಬಾರಿ ವಿಶ್ವದ 68 ದೇಶಗಳಲ್ಲಿ ಈಗಾಗಲೇ ಹನುಮಾನ್ ಭಕ್ತರು ನಿತ್ಯ ಪಾರಾಯಣ ಮಾಡಿ ಆಶ್ರಮಕ್ಕೆ ಪ್ರತಿನಿತ್ಯ ಜಪಸಂಖ್ಯೆಯನ್ನು ಕಳುಹಿಸುತ್ತಿದ್ದಾರೆ. ಈಗಾಗಲೇ 900 ಕೋಟಿಗಿಂತ ಅಧಿಕ ಜಪಸಂಖ್ಯೆಗಳು ಬಂದಿವೆ. ಪಾರಾಯಣದಲ್ಲಿ ಭಾಗವಹಿಸುವವರಿಗೆ ಹನುಮದ್ರಕ್ಷೆ ಮತ್ತು ಅನ್ನಪ್ರಸಾದ ವಿನಿಯೋಗಿಸಲಾಗುತ್ತದೆ.