'ಹರೀಶ್ ಸಾವು ಮೃಗಾಲಯಕ್ಕೆ ತುಂಬಲಾರದ ನಷ್ಟ'
ಬೆಂಗಳೂರು, ಆ. 08: ಆನೆ ದಾಳಿಯಿಂದ ಮೃತಪಟ್ಟಿರುವ ಮಾವುತನ ಸಾವು ಮೃಗಾಲಯಕ್ಕೆ ತುಂಬಲಾರದ ನಷ್ಟ ಎಂದು ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಕುಲಕರ್ಣಿ ಹೇಳಿಕೆ ಕೊಟ್ಟಿದ್ದಾರೆ.
ನಿನ್ನೆ ರಾತ್ರಿ (ಆ.07) ಮದವೇರಿದ ಆನೆ ಮಾವುತನಿಗೆ ಗುದ್ದಿ ಸಾಯಿಸಿತ್ತು. ಮೃತ ಮಾವುತ ಹರೀಶ್ ಕುಟುಂಬಕ್ಕೆ ಇದೀಗ ಪರಿಹಾರವನ್ನು ಘೋಷಣೆ ಮಾಡಲಾಗಿದೆ. ಆನೆ ನೋಡಿಕೊಳ್ಳುತ್ತಿದ್ದ ಮಾವುತ ಐದು ದಿನಗಳ ರಜೆ ಮೇಲೆ ತೆರಳಿದ್ದರು. ರಜೆ ಮುಗಿಸಿ ಬಂದ ದಿನವೇ ದುರಂತ ಸಾವು ಕಂಡಿದ್ದರು. ಆನೆ ಮರಿಯಾಗಿದ್ದಿನಿಂದ ನೋಡಿಕೊಂಡಿದ್ದರೂ, ಮದವೇರಿದ ವೇಳೆಯಲ್ಲಿ ತನ್ನನ್ನು ಪಾಲನೆ ಮಾಡುತ್ತಿದ್ದ ಮಾವುತನನ್ನೇ ತುಳಿದು ಸಾಯಿಸಿದೆ.
ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಭೇಟಿ ಕೊಡುವ ಪ್ರಖ್ಯಾತ ಮೃಗಾಲಯದಲ್ಲಿ ಈ ರೀತಿಯ ಘಟನೆ ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ. ಆದರೆ ಪ್ರವಾಸಿಗರು ಆತಂಕ ಪಡುವ ಅಗತ್ಯವಿಲ್ಲ ಎಂದು ಮೃಗಾಲಯದ ಸಿಬ್ಬಂದಿ ಮಾಹಿತಿ ಕೊಟ್ಟಿದ್ದಾರೆ. ಜೊತೆಗೆ ಮದವೇರಿದ್ದ ಆನೆಯ ಮೇಲೆ ನಿಗಾ ಇಡಲಾಗಿದೆ.
ಕುಟುಂಬಕ್ಕೆ ಪರಿಹಾರ
ಮದವೇರಿದ ಆನೆ ಹಿಂದಿನಿಂದ ಮಾವುತನ ಮೇಲೆ ದಾಳಿ ಮಾಡಿ ಗುದ್ದಿ ಸಾಯಿಸಿತ್ತು. ಮೃತ ಮಾವುತನನ್ನು ಹರೀಶ್ (38) ಎಂದು ಗುರುತಿಸಲಾಗಿದ್ದು, ದಾಳಿಗೊಳಗಾದ ತಕ್ಷಣ ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಅವರು ಮೃತಪಟ್ಟಿದ್ದರು.
ಮೃತ ಮಾವುತ ಹರೀಶ್ ಕುಟುಂಬಕ್ಕೆ ತಕ್ಷಣವೇ 10 ಲಕ್ಷ ರೂ. ಪರಿಹಾರ ಕೊಡಲಾಗುವುದು. ನಂತರ ಆನೆ ಪರಿಹಾರ ಹಾಗೂ ವಿಮೆ ಷೇರು 5 ಲಕ್ಷ ರೂ.ಗಳನ್ನು ಶೀಘ್ರ ತಲುಪಿಸುವಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ಕೊಟ್ಟಿದ್ದಾರೆ.
ತಾನೇ ಸಾಕಿದ್ದ ಆನೆಯಿಂದ ಸಾವು
ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ನಿನ್ನೆ ಘಟನೆ ನಡೆದಿತ್ತು. ಮೃತ ಮಾವುತ ಹರೀಶ್ ಮೂಲತಃ ಮೈಸೂರಿನ ಲಲಿತಾದ್ರಿಪುರ ನಿವಾಸಿಯಾಗಿದ್ದರು. ಕಳೆದ 18 ವರ್ಷಗಳಿಂದ ಮೃಗಾಲಯದಲ್ಲಿ ಕೆಲಸ ಮಾಡುತ್ತಿದ್ದರು. ಹರೀಶ್ ಅವರನ್ನು ಸಾಯಿಸಿದ ಆನೆಯ ಹೆಸರು ಅಭಿ, ಅದಕ್ಕೀಗ 17 ವರ್ಷ ವಯಸ್ಸು.
ಮೃಗಾಲಯದಲ್ಲಿಯೇ ಜನಿಸಿದ್ದ ಆನೆಯನ್ನು ತಾವೇ ಸಾಕಿ ಬೆಳೆಸಿದ್ದರು. ಒಡನಾಟ ಇಟ್ಟುಕೊಂಡಿದ್ದ ಅವರನ್ನು ಆನೆ ಹೇಗೆ ಸಾಯಿಸಿತು ಎಂಬುದು ಗೊತ್ತಾಗುತ್ತಿಲ್ಲ. ಹರೀಶ್ ಸಾವು ಮೃಗಾಲಯಕ್ಕೆ ತುಂಬಲಾರದ ನಷ್ಟ ಎಂದು ಶ್ರೀ ಚಾಮರಾಜೇಂದ್ರ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಕುಲಕರ್ಣಿ ಹೇಳಿದ್ದಾರೆ.
ಆನೆ ಕಟ್ಟುವಾಗ ದಾಳಿ
ಮೃತ ಹರೀಶ್ ಮೃಗಾಲಯದ ಇತರೆ ಆನೆಗಳನ್ನೂ ನೋಡಿಕೊಳ್ಳುತ್ತಿದ್ದರು. ಕಳೆದ ಐದು ದಿನಗಳಿಂದ ವೈಯಕ್ತಿಕ ಕಾರಣಗಳಿಂದ ರಜೆ ಮೇಲೆ ತೆರಳಿ ನಿನ್ನೆ ಮತ್ತೆ ಕೆಲಸಕ್ಕೆ ಹಾಜರಾಗಿದ್ದರು. ಬೆಳಗ್ಗೆಯಿಂದ ಸಂಜೆಯವರೆಗೂ ಆನೆಗಳನ್ನು ನೋಡಿಕೊಂಡಿದ್ದರು. ರಾತ್ರಿ ಬೇರೆ ಆನೆಗಳನ್ನು ಕಟ್ಟುವಾಗ ಹಿಂದಿನಿಂದ ಬಂದು ಆನೆ ಅಭಿ ದಾಳಿ ಮಾಡಿದೆ.
ತಕ್ಷಣ ಇತರೆ ಸಿಬ್ಬಂದಿ ಕೂಡಲೇ ಹರೀಶನನ್ನು ಆನೆಯಿಂದ ಬಿಡಿಸಿ ಸಮೀಪದ ಗೋಪಾಲಗೌಡ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲು ಪ್ರಯತ್ನಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಹರೀಶ್ ಸಾವನ್ನಪ್ಪಿದ್ದಾರೆ. ನಜರ್ ಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆನೆ ಮಾವುತ
ಆನೆ ಮಾವುತ ಅಥವಾ ಮಾವಟಿಗ ಆನೆ ಸವಾರ, ತರಬೇತುದಾರ ಅಥವಾ ಪಾಲಕನಾಗಿರುತ್ತಾನೆ. ಸಾಮಾನ್ಯವಾಗಿ, ಒಬ್ಬ ಮಾವುತನು ಹುಡುಗನಾಗಿದ್ದಾಗ ಕುಟುಂಬ ವೃತ್ತಿಯಲ್ಲಿ ಕೆಲಸ ಮೊದಲು ಮಾಡುತ್ತಾನೆ. ಆಗ ಅವನ ಜೀವನದಲ್ಲಿ ಮುಂಚಿತವಾಗಿ ಅವನಿಗೆ ಒಂದು ಆನೆಯನ್ನು ನಿಗದಿ ಮಾಡಲಾಗುತ್ತದೆ. ಆನೆ ಮತ್ತು ಅದರ ಮಾವುತ ಇಬ್ಬರೂ ತಮ್ಮ ಜೀವನದಾದ್ಯಂತ ಪರಸ್ಪರ ಬಂಧನಕ್ಕೆ ಒಳಪಟ್ಟಿರುತ್ತಾರೆ.
ಆನೆಗಳು ಕೂಡ ತನ್ನನ್ನು ಪಾಲನೆ ಮಾಡುವ ಮಾವುತ ಅಥವಾ ತರಬೇತುದಾರನನ್ನು ಪ್ರೀತಿಯಿಂದಲೇ ನೋಡಿಕೊಳ್ಳುತ್ತವೆ. ಆದರೂ ಮದವೇರಿದ ಸಂದರ್ಭದಲ್ಲಿ ತನ್ನ ಮಾವುತನನ್ನೇ ಆನೆ ಕೊಲ್ಲುತ್ತವೆ.