ಮೈಸೂರು: ಇನ್ನೂ ಕೊನೆಗೊಳ್ಳದ ಪಂಚಾಯಿತಿ ಚುನಾವಣೆ ದ್ವೇಷ
ಮೈಸೂರು,ಮಾರ್ಚ್,01: ಜಿಲ್ಲಾ ಮತ್ತು ತಾಲೂಕು ಪಂಚಾಯತಿ ಚುನಾವಣೆ ಫೆಬ್ರವರಿ 20ರಂದು ಮುಗಿದು ಫಲಿತಾಂಶ ಪ್ರಕಟವಾಗಿ ಅಭ್ಯರ್ಥಿಗಳು ಜಯಶಾಲಿಯಾಗಿದ್ದರೂ ಗ್ರಾಮಗಳಲ್ಲಿ ರಾಜಕೀಯ ದಳ್ಳುರಿ ಇನ್ನೂ ಆರಿಲ್ಲ. ಇದಕ್ಕೆ ಸಾಕ್ಷಿ ಮೈಸೂರು ಕೆ.ಆರ್ ತಾಲೂಕಿನ ಘಟನೆ.
ಕೆ.ಆರ್.ನಗರ ತಾಲೂಕಿನ ಭೇರ್ಯ ಗ್ರಾಮದಲ್ಲಿ ಗ್ರಾಪಂ ಮಾಜಿ ಅಧ್ಯಕ್ಷೆ ಜಯಮಾಲ ನಟರಾಜ್ ಅವರ ಮೇಲೆ ದ್ವೇಷ ಸಾಧಿಸಿದ ಕೆಲವರು ಅವರು ಎರಡು ಎಕರೆ ಪ್ರದೇಶದಲ್ಲಿದ್ದ ಹುರಳಿ ಮತ್ತು ಮೂರು ಎಕರೆ ಪ್ರದೇಶದಲ್ಲಿದ್ದ ಹುಲ್ಲಿನ ಮೆದೆಗೆ ದುಷ್ಕರ್ಮಿಗಳು ಸೋಮವಾರ ಮಧ್ಯರಾತ್ರಿ ಬೆಂಕಿ ಹಚ್ಚಿದ್ದಾರೆ.[ತಾ.ಪಂ ಫಲಿತಾಂಶ : ಯಾವ ಜಿಲ್ಲೆಯಲ್ಲಿ ಯಾರಿಗೆ ಗೆಲುವು?]
ನಡುರಾತ್ರಿ ಮೆದೆಗೆ ಬೆಂಕಿ ಹತ್ತಿ ಉರಿಯುತ್ತಿದ್ದುದನ್ನು ಕಂಡ ಜಯಮಾಲ ನಟರಾಜ್ ಮತ್ತು ಪತಿ ನಟರಾಜ್ ಅವರು ಅಕ್ಕಪಕ್ಕದವರನ್ನು ಸಹಾಯಕ್ಕೆ ಕರೆದಿದ್ದಾರೆ. ಅಲ್ಲದೆ ಕೆ.ಆರ್ ನಗರದ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ.[ಚುನಾವಣಾ ಫಲಿತಾಂಶ ಉಳಿದವರು ಕಂಡಂತೆ!]
ಅಕ್ಕಪಕ್ಕದವರು ಬಂದು ಬೆಂಕಿಯನ್ನು ನಂದಿಸುವ ಯತ್ನ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಜತೆಗೆ ಅಗ್ನಿಶಾಮಕ ದಳದ ವಾಹನ ಸ್ಥಳಕ್ಕೆ ತಲುಪುವ ವೇಳೆಗೆ ಸಂಪೂರ್ಣ ಉರಿದು ಭಸ್ಮವಾಗಿತ್ತು. ಘಟನೆಯಿಂದ ಸುಮಾರು ಮೂರು ಲಕ್ಷ ರೂ.ನಷ್ಟು ನಷ್ಟ ಉಂಟಾಗಿದೆ.[30 ಜಿಲ್ಲೆಗಳ ಪಂಚಾಯ್ತಿ ಫಲಿತಾಂಶ ಸಂಪೂರ್ಣ ವಿವರ]
ಚುನಾವಣೆ ಮುಗಿದ ಬಳಿಕ ಪಕ್ಷ ಪಕ್ಷದ ನಡುವೆ ವಿಷ ಬೀಜಗಳು ಮೊಳೆತು ದ್ವೇಷ ತೀರಿಸಿಕೊಳ್ಳಲು ಅನೈತಿಕ ಮಾರ್ಗ ಕಂಡುಕೊಳ್ಳುತ್ತಿರುವುದು ಕೆಟ್ಟ ಬೆಳವಣಿಗೆಯಾಗಿದೆ. ಗ್ರಾಮದಲ್ಲಿ ಇಂತಹ ಕೃತ್ಯಗಳನ್ನು ಎಸಗುತ್ತಿರುವ ಕಿಡಿಗೇಡಿಗಳನ್ನು ಪೊಲೀಸರು ಪತ್ತೆ ಹಚ್ಚಿ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.