ಜಿಂಕೆಯ ಪ್ರಾಣ ಉಳಿಸಿ ಪ್ರಾಣಿಪ್ರೀತಿ ಮೆರೆದ ಹುಣಸೂರು ಯುವಕರು
ಮೈಸೂರು,ಮಾರ್ಚ್,07: ಬೀದಿನಾಯಿಗಳ ದಾಳಿಯಿಂದ ಗಾಯಗೊಂಡ ಜಿಂಕೆಯನ್ನು ರಕ್ಷಿಸಿದ ಯುವಕರು ಅದಕ್ಕೆ ಚಿಕಿತ್ಸೆ ನೀಡಿ ಅರಣ್ಯ ಇಲಾಖೆಗೆ ಒಪ್ಪಿಸಿ ವನ್ಯಜೀವಿ ಸಂರಕ್ಷಣೆ ಮಾಡಿದ ಕೀರ್ತಿ ಹುಣಸೂರು ಬಳಿಯ ಹನಗೋಡಿಯ ಯುವಕರಿಗೆ ಸಂದಿದೆ.
ಕಾಡಿನಿಂದ ನಾಡಿಗೆ ಆಹಾರ ಅರಸಿ ಬಂದ ನಾಲ್ಕು ಜಿಂಕೆಗಳ ಮೇಲೆ ಬೀದಿನಾಯಿಗಳು ಏಕಾಏಕಿ ದಾಳಿ ಮಾಡಿದ ಪರಿಣಾಮ ಮೂರು ಜಿಂಕೆಗಳು ತಪ್ಪಿಸಿಕೊಂಡಿದ್ದರೆ, ಒಂದು ಜಿಂಕೆ ತೀವ್ರ ಗಾಯಕ್ಕೆ ಒಳಗಾಗಿತ್ತು. ಇದಕ್ಕೆ ಯುವಕರು ಶುಶ್ರೂಷೆ ನೀಡಿದ್ದಾರೆ.[ಚಾಮರಾಜನಗರದಲ್ಲಿ ಕಾಡು ಪ್ರಾಣಿಗಳು ಸಾವನ್ನಪ್ಪಲು ಕಾರಣವೇನು?]
ಮೈಸೂರಿನ ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನದಿಂದ ತಪ್ಪಿಸಿಕೊಂಡ ಜಿಂಕೆಗಳು ದಿಕ್ಕು ತಪ್ಪಿ ಆಹಾರ ಹುಡುಕುತ್ತಾ ಬಂದಿದ್ದ ನಾಲ್ಕು ಜಿಂಕೆಗಳು ಹನಗೋಡು ಪಟ್ಟಣ ಬಳಿಯ ಅಬ್ಬೂರು ರಸ್ತೆಯ ಕೊಲ್ಲಿಯಲ್ಲಿ ಕಾಣಿಸಿಕೊಂಡಿವೆ.
ಜಿಂಕೆಗಳನ್ನು ನೋಡಿದ ಬೀದಿ ನಾಯಿಗಳು ಅವುಗಳನ್ನು ಅಟ್ಟಿಸಿಕೊಂಡು ಹನಗೋಡಿನ ಪದವಿ ಕಾಲೇಜಿನವರೆಗೆ ಬಂದಿವೆ. ಈ ಸಂದರ್ಭ ಮೂರು ಜಿಂಕೆಗಳು ಓಡಿ ತಪ್ಪಿಸಿಕೊಂಡಿವೆ. ಒಂದು ಜಿಂಕೆಯನ್ನು ಅಡ್ಡ ಹಾಕಿದ ನಾಯಿಗಳು ಅದರ ಮೇಲೆ ದಾಳಿ ಮಾಡಿವೆ.[ಕಾಡು ಬಿಟ್ಟು ನಾಡಿಗೆ ಚಿರತೆ ನುಗ್ಗಲು ಕಾರಣವೇನು?]
ಈ ಸಂದರ್ಭ ಅಲ್ಲೇ ಕ್ರಿಕೆಟ್ ಆಡುತ್ತಿದ್ದ ಯುವಕರು ಸ್ಥಳಕ್ಕೆ ಬಂದು ನಾಯಿಗಳನ್ನು ಓಡಿಸಿ ಜಿಂಕೆಯನ್ನು ರಕ್ಷಿಸಿದ್ದಾರೆ. ಬಳಿಕ ಪಶು ವೈದ್ಯರನ್ನು ಕರೆಯಿಸಿ ಚಿಕಿತ್ಸೆ ನೀಡಿ ಬಳಿಕ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳು ಜಿಂಕೆಯನ್ನು ವಶಕ್ಕೆ ಪಡೆದಿದ್ದಾರೆ.