ಕಳ್ಳನನ್ನು ಸಿನಿಮೀಯ ರೀತಿಯಲ್ಲಿ ಚೇಸ್ ಮಾಡಿದ ಮೈಸೂರಿನ ಯುವಕ
ಬೆಂಗಳೂರು, ಜುಲೈ 28 : ಮನೆ ಮುಂದೆ ನಿಂತಿದ್ದ ಮಹಿಳೆಯೊಬ್ಬರ ಸರ ಕದ್ದು ಪರಾರಿಯಾಗುತ್ತಿದ್ದ ಖದೀಮನನ್ನು ಮೈಸೂರು ಮೂಲದ ಯುವಕನೋರ್ವ ಬೆನ್ನಟ್ಟಿ ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಕುಮಾರಸ್ವಾಮಿ ಬಡಾವಣೆಯಲ್ಲಿ ಈ ಘಟನೆ ನಡೆದಿದೆ. ಮೈಸೂರಿನಲ್ಲಿ ಜಿಲ್ಲಾ ಸಶಸ್ತ್ರ ಪಡೆಯ ಎಎಸ್ಐ ಆಗಿರುವ ಸತ್ಯನಾರಾಯಣ ಜೆಟ್ಟಿ ಅವರ ಪುತ್ರ ಶರತ್ ಎಂಬ ಯುವಕನೇ ಕಳ್ಳನನ್ನು ಬೆನ್ನತ್ತಿ ಹಿಡಿದು ಪೊಲೀಸರಿಗೊಪ್ಪಿಸಿದ ಸಾಹಸಿ.
ಮೈಸೂರಿನಲ್ಲೊಬ್ಬ ಖತರ್ನಾಕ್ ಕಳ್ಳ : ಪವರ್ ಸ್ಟಾರ್ ಹೆಸರಿನಲ್ಲಿ ವಂಚನೆ
ಕಳೆದ ಗುರುವಾರ ಮನೆ ಮುಂದೆ ನಿಂತಿದ್ದ ಶರತ್ ಅವರ ಸಂಬಂಧಿ ಶ್ವೇತಾ ಅವರ ಸರವನ್ನು ಕಳ್ಳ ಎಗರಿಸಿ ಪರಾರಿಯಾಗಿದ್ದ. ಸರಗಳ್ಳನ ಚಹರೆ ಆಧರಿಸಿ ಯುವಕ ಶರತ್ ಬೈಕಿನಲ್ಲಿ ಬೆನ್ನತ್ತಿದ್ದು, 3 ಕಿ.ಮೀ. ದೂರದಲ್ಲಿ ಸರಗಳ್ಳನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾನೆ. ಬಳಿಕ ಸರಗಳ್ಳನನ್ನು ಕುಮಾರಸ್ವಾಮಿ ಬಡಾವಣೆ ಪೊಲೀಸರಿಗೆ ಶರತ್ ಒಪ್ಪಿಸಿದ್ದಾರೆ.
ಕುಮಾರಸ್ವಾಮಿ ಬಡಾವಣೆ ಪೊಲೀಸರು ಸರಗಳ್ಳನನ್ನು ವಿಚಾರಣೆಗೆ ಒಳಪಡಿಸಿದರು. ಆತ ನೀಡಿದ ಸುಳಿವಿನ ಮೇರೆಗೆ ಮತ್ತೊಬ್ಬ ಸರಗಳ್ಳನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಸರಣಿ ಸರಗಳವು ಹಿನ್ನೆಲೆಯಲ್ಲಿ ಸರ ಗಳ್ಳರ ಜಾಲದ ಬಗ್ಗೆ ವಿಚಾರಣೆ ತೀವ್ರಗೊಳಿಸಲಾಗಿದೆ ಎಂದು ತಿಳಿದುಬಂದಿದೆ.