ರಥಸಪ್ತಮಿ ಪ್ರಯುಕ್ತ ಮೈಸೂರಿನಲ್ಲಿ ಸೂರ್ಯ ನಮಸ್ಕಾರ
ರಥಸಪ್ತಮಿ ಪ್ರಯುಕ್ತ ಮೈಸೂರಿನ ಯೋಗ ಒಕ್ಕೂಟದ ವತಿಯಿಂದ ನಗರದ ಕೋಟೆ ಆಂಜನೇಯ ದೇವಾಸ್ಥಾನದ ಮುಂಭಾಗ ಭಾನುವಾರ ಬೆಳಿಗ್ಗೆ ಸೂರ್ಯ ನಮಸ್ಕಾರ ಮತ್ತು ಸರ್ವೋದಯ ಟ್ರಸ್ಟ್ ವತಿಯಿಂದ ನಮ್ಮ ಮೈಸೂರು ಹಾಗೂ ಆರೋಗ್ಯಕ್ಕಾಗಿ ಓಟ.
ಮೈಸೂರು, ಫೆಬ್ರವರಿ 5 : ರಥಸಪ್ತಮಿ ಪ್ರಯುಕ್ತ ಮೈಸೂರಿನ ಯೋಗ ಒಕ್ಕೂಟದ ವತಿಯಿಂದ ನಗರದ ಕೋಟೆ ಆಂಜನೇಯ ದೇವಾಸ್ಥಾನದ ಮುಂಭಾಗ ಭಾನುವಾರ ಬೆಳಿಗ್ಗೆ ಸೂರ್ಯ ನಮಸ್ಕಾರ ಆಯೋಜಿಸಲಾಗಿತ್ತು.
ಇದರಲ್ಲಿ ಐನೂರಕ್ಕೂ ಅಧಿಕ ಜನರು ಪಾಲ್ಗೊಂಡು ಸೂರ್ಯದೇವರಿಗೆ ದೀರ್ಘದಂಡ ಪ್ರಣಾಮ ಮಾಡಿದರು. ಈ ಸೂರ್ಯ ನಮಸ್ಕಾರದಲ್ಲಿ ಪಾಲ್ಗೊಂಡ ಮಹಾನಗರಪಾಲಿಕೆ ಆಯುಕ್ತ ಜೆ.ಜಗದೀಶ್ ಮಾತನಾಡಿ, ಯೋಗ ಕೆಲವರಿಗೆ ಮಾತ್ರ ಸೀಮಿತ ಎಂದು ತಿಳಿದುಕೊಂಡಿರುತ್ತಾರೆ.
ಆದರೆ, ಯೋಗವನ್ನು ಮಾಡುವುದರಿಂದ ದೇಹದ ಆರೋಗ್ಯ ಸ್ಥಿತಿ ಸುಧಾರಣೆಯಲ್ಲಿರುತ್ತದೆ.ಇತ್ತೀಚಿನ ದಿನಗಳಲ್ಲಿ ಎಲ್ಲರೂ ಯೋಗದ ಕುರಿತು ಆಸಕ್ತಿ ಬೆಳೆಸಿಕೊಂಡಿದ್ದಾರೆ. ಇದು ನಿಜಕ್ಕೂ ಶ್ಲಾಘನೀಯ. ಸೂರ್ಯ ನಮಸ್ಕಾರ ದೇಹಕ್ಕೆ ಒಳ್ಳೆಯದು ಎಂದರು.
ಸುಮಾರು ಒಂದೂವರೆ ಗಂಟೆಗಳ ಕಾಲ ಸೂರ್ಯ ನಮಸ್ಕಾರ ನಡೆಯಿತು. ಈ ಸೂರ್ಯ ನಮಸ್ಕಾರದಲ್ಲಿ ಪಾಲ್ಗೊಂಡವರು ಎಲ್ಲವನ್ನೂ ಮರೆತು ಒತ್ತಡದ ಬದುಕಿನಿಂದ ಹೊರಬಂದು ಮನಸ್ಸನ್ನು ಪ್ರಶಾಂತಗೊಳಿಸಿಕೊಂಡರು.
ಆರೋಗ್ಯಕ್ಕಾಗಿ ಓಟ: ಇನ್ನು ಇದೇ ವೇಳೆ ಸರ್ವೋದಯ ಟ್ರಸ್ಟ್ ಮತ್ತು ಕೊಲಂಬಿಯಾ ಏಷ್ಯಾ ಆಸ್ಪತ್ರೆ ವತಿಯಿಂದ ನಮ್ಮ ಮೈಸೂರು ಹಾಗೂ ಆರೋಗ್ಯಕ್ಕಾಗಿ ಓಟವನ್ನು ಆಯೋಜಿಸಲಾಗಿತ್ತು.
ಮೈಸೂರಿನ ಓವೆಲ್ ಮೈದಾನದಿಂದ ಓಟಕ್ಕೆ ಚಾಲನೆ ನೀಡಲಾಗಿದ್ದು, ಸಾವಿರಕ್ಕೂ ಹೆಚ್ಚುಮಂದಿ ಓಟದಲ್ಲಿ ಪಾಲ್ಗೊಂಡಿದ್ದರು. ಈ ಓಟದಲ್ಲಿ ಎಲ್ಲ ವಯೋಮಾನದವರೂ ಪಾಲ್ಗೊಂಡಿದ್ದರು.
ಓಟದಲ್ಲಿ ಬೇಗ ಕ್ರಮಿಸಿದವರಿಗೆ ಬಹುಮಾನವನ್ನು ವಿತರಿಸಲಾಯಿತು.