ವಜ್ರದ ವಾಚ್ ಬಗ್ಗೆ ಸಿಬಿಐ ತನಿಖೆಯಾಗಬೇಕು : ಬಿಎಸ್ವೈ
ಮೈಸೂರು, ಮಾರ್ಚ್ 05 : 'ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಊಬ್ಲೋ ವಾಚ್ ವಿವಾದದ ಕುರಿತು ಸಿಬಿಐ ತನಿಖೆಯಾಗಬೇಕು' ಎಂದು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಯಡಿಯೂರಪ್ಪ ಒತ್ತಾಯಿಸಿದರು. 'ಕಾಂಗ್ರೆಸ್ ಪಕ್ಷದ ನಾಯಕರೇ ಸಿದ್ದರಾಮಯ್ಯ ಅವರ ವಿರುದ್ಧ ತಿರುಗಿ ಬಿದ್ದಿದ್ದಾರೆ' ಎಂದು ಯಡಿಯೂರಪ್ಪ ಲೇವಡಿ ಮಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರಿನಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿದ ಯಡಿಯೂರಪ್ಪ ಅವರು, 'ಸಿದ್ದರಾಮಯ್ಯ ಅವರ ತಮ್ಮ ಉಬ್ಲೋ ವಾಚ್ ಅನ್ನು ಸರ್ಕಾರಕ್ಕೆ ನೀಡಿದ್ದಾರೆ. ಆದರೆ, ಅವರ ಬಳಿ ವಾಚ್ ಬಗ್ಗೆ ಸರಿಯಾದ ದಾಖಲೆಗಳಿಲ್ಲ' ಎಂದು ಆರೋಪಿಸಿದರು. [ವಾಚ್ ವಿವಾದ : ಎಚ್ಡಿಕೆ ವಿರುದ್ಧ ತನಿಖೆಗೆ ಆದೇಶ!]
'ಸ್ಪೀಕರ್ ಅವರ ಮೂಲಕ ಸಿದ್ದರಾಮಯ್ಯ ಅವರು ವಾಚ್ ಅನ್ನು ಸರ್ಕಾರಕ್ಕೆ ನೀಡಿದರೆ ಅವರು ಶುದ್ಧಹಸ್ತರಾಗುವುದಿಲ್ಲ. ವಾಚ್ನ ಮೂಲದ ಬಗ್ಗೆ ವಿಷಯ ಬಹಿರಂಗವಾಗಬೇಕು. ಆದ್ದರಿಂದ ಸಿಬಿಐ ತನಿಖೆಗೆ ಒತ್ತಾಯ ಮಾಡುತ್ತಿದ್ದೇವೆ' ಎಂದರು. [ವಜ್ರದ ವಾಚ್ ಕೊಟ್ಟ ಸಿದ್ದರಾಮಯ್ಯ ಹೇಳಿದ್ದೇನು?]
ಬುಧವಾರ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಸಹ, 'ವಾಚ್ ಎಲ್ಲಿಂದ ಬಂತು ಎಂಬ ಬಗ್ಗೆ ಕೇಂದ್ರ ಸರ್ಕಾರಿ ಸ್ವಾಮ್ಯದ ಸಂಸ್ಥೆಯಿಂದ ತನಿಖೆಯಾಗಬೇಕು. ಮೊದಲು ಲಾಯರ್ ಕೊಟ್ಟರು, ನಂತರ ವೈದ್ಯರು ಕೊಟ್ಟರು ಎಂದು ಗೊಂದಲದ ಹೇಳಿಕೆಗಳನ್ನು ಮುಖ್ಯಮಂತ್ರಿಗಳು ನೀಡಿದ್ದಾರೆ' ಎಂದು ಹೇಳಿದ್ದರು. ಯಡಿಯೂರಪ್ಪ ಅವರು ಹೇಳಿದ್ದೇನು? ಚಿತ್ರಗಳಲ್ಲಿ ನೋಡಿ... [ಸಖತ್ ಮಿಂಚುತ್ತಿರುವ ದುಬಾರಿ ಉಬ್ಲೋ ವಾಚುಗಳ ಕಥೆ]
ವಾಚ್ ಬಗ್ಗೆ ದಾಖಲೆಗಳು ಎಲ್ಲಿವೆ?
'ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಾಚ್ ಅನ್ನು ಸ್ಪೀಕರ್ ಮೂಲಕ ಸರ್ಕಾರಕ್ಕೆ ಸಲ್ಲಿಕೆ ಮಾಡಿದ್ದಾರೆ. ಆದರೆ, ವಾಚ್ ಕುರಿತ ದಾಖಲೆ ಪತ್ರಗಳು ಎಲ್ಲಿವೆ?. ಕೇವಲ ನನ್ನ ಸ್ನೇಹಿತ ಉಡುಗೊರೆ ಕೊಟ್ಟ ವಾಚ್ ಎಂದು ಸಿದ್ದರಾಮಯ್ಯ ಅವರು ಸರ್ಕಾರಕ್ಕೆ ಅದನ್ನು ನೀಡಿದ್ದಾರೆ' ಎಂದು ಯಡಿಯೂರಪ್ಪ ಹೇಳಿದರು.
ಸಂಸತ್ ಮುಂದೆ ಧರಣಿ ಮಾಡಿದ್ದೇವೆ
'ಸಿದ್ದರಾಮಯ್ಯ ಅವರ ವಾಚ್ ಕುರಿತು ಸಿಬಿಐ ತನಿಖೆಯಾಗಬೇಕು ಎಂದು ಒತ್ತಾಯಿಸಿ ಶುಕ್ರವಾರ ಸಂಸತ್ನ ಗಾಂಧಿ ಪ್ರತಿಮೆ ಮುಂದೆ ಬಿಜೆಪಿ ಸಂಸದರು ಪ್ರತಿಭಟನೆ ನಡೆಸಿದ್ದೇವೆ' ಎಂದು ಯಡಿಯೂರಪ್ಪ ತಿಳಿಸಿದರು.
'ನಿಮ್ಮ ಬುಡ ಒಮ್ಮೆ ನೋಡಿಕೊಳ್ಳಿ'
'ಬಿಜೆಪಿಯ ಮೇಲೆ ಆರೋಪಗಳನ್ನು ಮಾಡುವ ಮುನ್ನ ನಿಮ್ಮ ಬುಡವನ್ನು ಒಮ್ಮೆ ನೋಡಿಕೊಳ್ಳಿ' ಎಂದು ಯಡಿಯೂರಪ್ಪ ಸಿದ್ದರಾಮಯ್ಯ ಅವರಿಗೆ ಸಲಹೆ ಮಾಡಿದರು. 'ನಿಮ್ಮ ಪಕ್ಷದ 50ಕ್ಕೂ ಹೆಚ್ಚು ಶಾಸಕರು, ಹಲವು ಸಚಿವರು ಹೈಕಮಾಂಡ್ನ ಕೆಲವು ನಾಯಕರು' ನಿಮ್ಮ ವಿರುದ್ಧ ಇದ್ದಾರೆ' ಎಂದು ಯಡಿಯೂರಪ್ಪ ಲೇವಡಿ ಮಾಡಿದರು.
'ವಾಚ್ ಎಲ್ಲಿಂದ ಬಂತು?'
'ವಾಚ್ ಕುರಿತು ಹಲವಾರು ಸಂದೇಹಗಳಿವೆ. ಈ ವಾಚ್ ಕಳ್ಳತನವಾದದ್ದು ಎಂಬ ಆರೋಪಗಳು ಇವೆ. ಆದ್ದರಿಂದ ವಾಚ್ನ ಮೂಲದ ಬಗ್ಗೆ ಸಿಬಿಐ ತನಿಖೆಯಾಗಬೇಕು' ಎಂದು ಒತ್ತಾಯಿಸುತ್ತಿದ್ದೇವೆ' ಎಂದು ಯಡಿಯೂರಪ್ಪ ಅವರು ಹೇಳಿದರು.
ಕುಮಾರಸ್ವಾಮಿ ಅವರು ತನಿಖೆಗೆ ಒತ್ತಾಯಿಸಿದ್ದರು
'ಸಿದ್ದರಾಮಯ್ಯ ಅವರ ಕೈಯಲ್ಲಿರುವ ವಾಚ್ ಡಾ.ಸುಧಾಕರ ಶೆಟ್ಟಿ ಅವರದ್ದು. ವಾಚ್ ಕಳೆದು ಹೋಗಿದೆ ಎಂದು ಅವರು 7/5/2015ರಂದು ಪೊಲೀಸ್ ಠಾಣೆಗೆ ಈ ಕುರಿತು ದೂರು ನೀಡಿದ್ದಾರೆ. ಈ ಕುರಿತು ತನಿಖೆಯಾಗಬೇಕು. ಕೇಂದ್ರಿಯ ತನಿಖಾ ಸಂಸ್ಥೆಗಳಿಂದ ತನಿಖೆ ನಡೆಸಬೇಕು' ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಒತ್ತಾಯಿಸಿದ್ದರು.