ಸಿದ್ದರಾಮಯ್ಯ ಓರ್ವ ಲೂಟಿಕೋರ : ಮೈಸೂರಿನಲ್ಲಿ ಯಡಿಯೂರಪ್ಪ ವಾಗ್ದಾಳಿ
ಮೈಸೂರು, ಅಕ್ಟೋಬರ್ 26 : ಸಿಎಂ ಸಿದ್ದರಾಮಯ್ಯ ರಾಜ್ಯದ ಖಜಾನೆಯನ್ನು ಲೂಟಿ ಮಾಡುವ ಲೂಟಿಕೋರ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗಂಭೀರವಾಗಿ ಆರೋಪಿಸಿದ್ದಾರೆ.
ಮೈಸೂರು ಮಹಾರಾಜ ಮೈದಾನದಲ್ಲಿ ನಡೆಯುತ್ತಿರುವ ರೈತ ಸಮಾವೇಶವನ್ನು ಅ. 26 ರಂದು ಉದ್ಘಾಟಿಸಿ ಮಾತನಾಡಿದ ಅವರು, ಸಿಎಂ ಸಿದ್ದು ಯಾವುದೇ ಕಾಮಗಾರಿಯನ್ನು ಮನ ಬಂದ ರೀತಿಯಲ್ಲಿ ಯೋಜಿಸಿ ಸರ್ಕಾರದ ಖಜಾನೆಯನ್ನು ಲೂಟಿ ಮಾಡಿ ಸರ್ವನಾಶ ಮಾಡುತ್ತಿದ್ದಾರೆ. ಆರೋಪ ಸುಳ್ಳು ಎಂದಾದರೆ ಚಾಮರಾಜನಗರ ಜಿಲ್ಲೆಯ ಎಸ್ಟಿಮೇಟ್ ತೆಗೆದು ನೋಡಿ ಎಂದರು.
'ಸಿಎಂಗೆ ನಾಚಿಕೆ ಮಾನ ಮರ್ಯಾದೆ ಇದ್ರೆ, ಜಾರ್ಜ್ ರಾಜೀನಾಮೆ ಪಡೆಯಲಿ'
ಮುಖ್ಯಮಂತ್ರಿಗಳು ಜನಹಿತವನ್ನು ಮರೆತಿದ್ದಾರೆ. ದೇವರು ಕ್ಷಮಿಸಿದರೂ ಭ್ರಷ್ಟ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಜನತೆ ಕ್ಷಮಿಸಬಾರದು.ಅಧಿಕಾರದ ಮದ, ಹಣದ ಮದ, ಜಾತಿಯ ವಿಷಬೀಜ ಬಿತ್ತಿ ಚುನಾವಣೆ ಗೆಲ್ಲಬಹುದು ಎಂದುಕೊಂಡ ನಿಮಗೆ ಜನತೆ ತಕ್ಕ ಪಾಠ ಕಲಿಸಲಿದ್ದಾರೆ. ಮೂರೂವರೆ ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ರಾಜ್ಯದ ಮುಖ್ಯಮಂತ್ರಿ ರೈತರ ಪಾಲಿಗೆ ಸತ್ತಿದ್ದೀರೋ ಬದುಕಿದ್ದೀರೋ ಎಂದು ಪ್ರಶ್ನಿಸಿದರಲ್ಲದೇ ಬಡವರಿಗೆ ನೀಡಿದ ಅಕ್ಕಿ ಗೋಧಿ ಕೊಳೆಯುತ್ತಿದೆಯಲ್ಲ. ಸಾವಿರಾರು ಕೋ.ರೂ.ಅಕ್ಕಿ ಗೋಧಿ ಕೊಳೆಯುತ್ತಿದೆ. ಜನಹಿತ ಮರೆತು ತುಘಲಕ್ ದರ್ಬಾರ್ ಮಾಡುತ್ತಿರುವ ಸಿಎಂ ಗೆ ಪಾಠ ಕಲಿಸಬೇಕಿದೆ ಎಂದು ತಿಳಿಸಿದರು. ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ರೈತರಿಗೆ ಸಾವಯವ ಕೃಷಿಯ ಮಹತ್ವ ತಿಳಿಸಿದ್ದನ್ನು ಸ್ಮರಿಸಿಕೊಂಡ ಯಡಿಯೂರಪ್ಪ ರೈತರು ಸಾವಯವ ಕೃಷಿಯನ್ನು ಮಾಡಿ ಭೂಮಿಯ ಫಲವತ್ತತೆಯನ್ನು ಕಾಯ್ದುಕೊಂಡು ಹೋಗಬೇಕು ಎಂದರು.
ಡೋಂಗಿ ಸಿಎಂ!
ಸಿಎಂ ಸಿದ್ದರಾಮಯ್ಯನಲ್ಲಿ ಅಹಂಕಾರ ತುಂಬಿ ತುಳುಕುತ್ತಿದೆ. ಇವರಂಥ ಡೋಂಗಿ ಮುಖ್ಯಮಂತ್ರಿಯನ್ನ ರಾಜಕೀಯ ಜೀವನದಲ್ಲೇ ನೋಡಿಲ್ಲ ಎಂದು ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ವಾಗ್ದಾಳಿ ನಡೆಸಿದರು. ನಾನು ರಾಷ್ಟ್ರ ಮಟ್ಟದಲ್ಲಿ ಹಾಗೂ ರಾಜ್ಯ ಮಟ್ಟದಲ್ಲಿ ಹಲವಾರು ಮುಖ್ಯಮಂತ್ರಿಗಳನ್ನ ನೋಡಿದ್ದೇನೆ. ಆದ್ರೆ ಸಿದ್ದರಾಮಯ್ಯನಂಥ ಡೊಂಗಿ ಮುಖ್ಯಮಂತ್ರಿಯನ್ನ ನೋಡಿರ್ಲಿಲ್ಲ. ರಾಜ್ಯದಲ್ಲಿ ಹಣಕಾಸು ಮಂತ್ರಿಯಾಗಿ ಹೆಚ್ಚು ಬಜೆಟ್ ಮಂಡನೆ ಮಾಡಿರೋ ಹಣಕಾಸಿನ ಶೂರಸ್ವಯಂ ಘೋಷಿತ ಮುಖ್ಯಮಂತ್ರಿಯಾಗುತ್ತಿದ್ದಾರೆ ಎಂದು ಕಿಡಿಕಾರಿದರು.
ಸದ್ಯ, ಅಂಬಾರಿ ಹೊರುತ್ತೀನಿ ಅಂದಿಲ್ಲವಲ್ಲ!
ರಾಜ್ಯದ ಯಾವುದೇ ಮೂಲೆಗೆ ಹೋದ್ರೂ ನಾನೇ ಮುಂದಿನ ಮುಖ್ಯಮಂತ್ರಿಯಾಗೊದು ಅಂತಾರೆ. ಅದೇ ರೀತಿ ಯಾವುದೇ ಕಾರ್ಯಕ್ರಮಗಳನ್ನು ನಾನೇ ಮುಂದೆ ನಿಂತು ಮಾಡ್ತೀನಿ ಅಂತಾರೆ. ಸಿದ್ದರಾಮಯ್ಯರಿಗೆ ಅಹಂಕಾರ ತುಂಬಿತುಳುಕುತ್ತಿದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಿನ ಬಾರಿಯೂ ನಾನೇ ದಸರಾ ಉದ್ಘಾಟಿಸುತ್ತೇನೆ, ನಾನೇ ನಂದಿ ಪೂಜೆ ಮಾಡುತ್ತೇನೆ ಅಂತ ಹೇಳುತ್ತಿದ್ದಾರೆ. ಮುಂದಿನ ಬಾರಿ ಅಂಬಾರಿಯನ್ನು ಹೊರುತ್ತೇನೆ ಎಂದು ಹೇಳಿಲ್ಲ ಅಷ್ಟೆ ಎಂದು ಶ್ರೀನಿವಾಸ್ ಪ್ರಸಾದ್ ವ್ಯಂಗ್ಯವಾಡಿದರು.
ವಿಜಯ್ ಶಂಕರ್ ಗೈರು
ಈಗಾಗಲೇ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಳ್ಳಲು ನಿರ್ಧರಿಸಿರುವ ಸಿ.ಎಚ್. ವಿಜಯಶಂಕರ್ ಅ.26 ರಂದು ಮೈಸೂರಿನಲ್ಲಿ ನಡೆದ ಬಿಜೆಪಿ ಬೃಹತ್ ರೈತ ಸಮಾವೇಶಕ್ಕೆ ಗೈರಾಗಿದ್ದರು.
ಉಪಸ್ಥಿತರಿದ್ದ ನಾಯಕರು
ಸಮಾವೇಶದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಮಾಜಿ ಸಚಿವ ವಿ. ಶ್ರೀನಿವಾಸಪ್ರಸಾದ್, ಎಸ್. ರಾಮದಾಸ್, ಎಂ. ಶಿವಣ್ಣ, ಸಂಸದರಾದ ಪ್ರತಾಪ್ ಸಿಂಹ, ಶ್ರೀರಾಮುಲು ಭಾಗಿಯಾಗಿದ್ದಾರೆ. ರೈತ ಸಮಾವೇಶಕ್ಕೆ ಬಿಜೆಪಿ ರೈತ ಮೋರ್ಚಾದ ರಾಜ್ಯಾಧ್ಯಕ್ಷ. ಸಿ.ಎಚ್. ವಿಜಯಶಂಕರ್ ಗೈರಾಗಿದ್ದು, ಈ ಮೂಲಕ ಪಕ್ಷ ಬಿಡುವುದನ್ನು ಖಚಿತಪಡಿಸಿದ ಖಚಿತಪಡಿಸಿದ್ದಾರೆ.