ವರುಣಾ ಕ್ಷೇತ್ರದಲ್ಲಿ ಯತೀಂದ್ರ ಹವಾ, ಗೆಲುವಿಗಾಗಿ ನೆಲ ಹದ!
ಮೈಸೂರು, ನವೆಂಬರ್ 28: ಕಳೆದೊಂದು ವರ್ಷದಿಂದ ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಗ ಯತೀಂದ್ರ ವರುಣಾ ಕ್ಷೇತ್ರದಲ್ಲಿ ಸಂಚರಿಸುತ್ತಾ ಗ್ರಾಮಸ್ಥರಿಗೆ ಹತ್ತಿರವಾಗುತ್ತಿರುವುದು ಕಂಡು ಬರುತ್ತಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಇದೇ ಕ್ಷೇತ್ರದಿಂದ ಸ್ಪರ್ಧಿಸಿ ಸಿದ್ದರಾಮಯ್ಯ ಅವರು ಗೆಲುವು ಪಡೆಯುವುದರೊಂದಿಗೆ ರಾಜ್ಯದ ಮುಖ್ಯಮಂತ್ರಿಯೂ ಆದರು. ಆದರೆ ಮಗನನ್ನು ರಾಜಕೀಯಕ್ಕೆ ಕರೆತಂದಿರುವ ಸಿದ್ದರಾಮಯ್ಯ ತಾನು ಸ್ಪರ್ಧಿಸಿದ ಕ್ಷೇತ್ರವನ್ನು ಮಗನಿಗೆ ಬಿಟ್ಟುಕೊಟ್ಟು, ಚಾಮುಂಡೇಶ್ವರಿ ಕ್ಷೇತ್ರದತ್ತ ಮುಖ ಮಾಡಿದ್ದಾರೆ.
Recommended Video
ಶ್ರೀರಂಗಪಟ್ಟಣದಲ್ಲಿ ಕಾಂಗ್ರೆಸ್ ಟಿಕೆಟ್ಗೆ ಮೂವರು ಆಕಾಂಕ್ಷಿಗಳು!
ವರುಣಾದಲ್ಲಿ ಸಿದ್ದರಾಮಯ್ಯ ಬಗ್ಗೆ ಮತದಾರರು ಹೆಚ್ಚಿನ ಒಲವನ್ನು ಹೊಂದಿದ್ದಾರೆ. ಹೀಗಾಗಿ ಇಲ್ಲಿ ಸುಲಭ ಗೆಲುವು ಖಚಿತ ಎಂಬುದು ಅವರ ಅರಿವಿಗೆ ಬಂದಿದ್ದು, ಅಲ್ಲಿಂದ ಕಣಕ್ಕಿಳಿಸಿದರೆ ಮಗನ ರಾಜಕೀಯ ಭವಿಷ್ಯವನ್ನು ಗಟ್ಟಿ ಮಾಡಲು ಸಾಧ್ಯ ಎನ್ನುವುದು ಅವರ ಲೆಕ್ಕಾಚಾರ. ಹೀಗಾಗಿಯೇ ಮಗ ಯತೀಂದ್ರನಿಗೆ ವರುಣಾ ವಸತಿ ಜಾಗೃತಿ ಸಮಿತಿ ಅಧ್ಯಕ್ಷ ಎಂಬ ಹುದ್ದೆಯನ್ನು ನೀಡಿ, ಸಂಘಟನೆ ಮಾಡುವಂತೆ ಸೂಚಿಸಿದ್ದಾರೆ.
ಚುನಾವಣೆಗೆ ಸ್ಪರ್ಧೆ : ಅಂಬರೀಶ್ ನೀಡಿದ ಸ್ಪಷ್ಟನೆಗಳು
ಈಗಾಗಲೇ ಕ್ಷೇತ್ರದ ಹಲವು ಗ್ರಾಮಗಳಿಗೆ ಭೇಟಿ ನೀಡುವ ಮೂಲಕ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಯೋಜನೆ ರೂಪಿಸಿ, ಭೂಮಿ ಪೂಜೆ ನೆರವೇರಿಸಿದ್ದಾರೆ. ರಸ್ತೆ, ಚರಂಡಿ, ಸಮುದಾಯ ಭವನ ಹೀಗೆ ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡುವುದಾಗಿ ಗ್ರಾಮಸ್ಥರಿಗೆ ಭರವಸೆ ನೀಡಿದ್ದಾರೆ.
ಉಳಿದ ಪಕ್ಷಗಳು ಮೌನ
ಸರಕಾರದ ಸಾಧನೆಗಳನ್ನು ಜನರಿಗೆ ತಲುಪಿಸುವ ಕಾರ್ಯದೊಂದಿಗೆ ಇತರೆ ಪಕ್ಷದ ಕಾರ್ಯಕರ್ತರನ್ನು ಕಾಂಗ್ರೆಸ್ ನತ್ತ ಸೆಳೆದುಕೊಳ್ಳುವ ತಂತ್ರವನ್ನು ಮಾಡಿದ್ದಾರೆ. ಈ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರಿಗೆ ವಿರುದ್ಧವಾಗಿ ಕೆಜೆಪಿಯ ಕಾಪು ಸಿದ್ದಲಿಂಗಸ್ವಾಮಿ ಸ್ಪರ್ಧಿಸಿ ಸೋತಿದ್ದರು. ಯಡಿಯೂರಪ್ಪ ಅವರಿಗೆ ಆಪ್ತರಾಗಿರುವ 'ಕಾಪುಸಿ' ಸದ್ಯ ಬಿಜೆಪಿಯಲ್ಲಿದ್ದರೂ ಈ ಕ್ಷೇತ್ರದಲ್ಲಿ ಅವರು ತಟಸ್ಥರಾಗಿದ್ದಾರೆ. ಜೆಡಿಎಸ್ ಕೂಡ ಇಲ್ಲಿ ಮೌನವಾಗಿದೆ.
ರಾಜಕೀಯ ತಂತ್ರ ಮಾಡಿರುವ ಯತೀಂದ್ರ
ವರುಣಾ ಕ್ಷೇತ್ರದಿಂದ ಸ್ಪರ್ಧಿಸುವ ಆಕಾಂಕ್ಷೆ ಇರುವವರು ಚುನಾವಣೆ ಹತ್ತಿರ ಬರುವ ವೇಳೆಗೆ ಕ್ಷೇತ್ರಕ್ಕೆ ಬಂದು ಪ್ರಚಾರದಲ್ಲಿ ತೊಡಗಿಸಿಕೊಳ್ಳಲಿದ್ದು, ಅದಕ್ಕಿಂತ ಮೊದಲೇ ಯತೀಂದ್ರ ಅವರು ತಾನೇನು ರಾಜಕೀಯವಾಗಿ ತಂತ್ರ ಮಾಡಬೇಕೋ ಎಲ್ಲವನ್ನೂ ಮಾಡಿಯಾಗಿದೆ. ಹೀಗಾಗಿ ವರುಣಾ ಕ್ಷೇತ್ರ ಅವರಿಗೆ ಗಟ್ಟಿಯಾಗುವ ಲಕ್ಷಣಗಳು ಕಂಡು ಬರುತ್ತಿವೆ.
ವೀರಶೈವ ಮುಖಂಡರು ಕಾಂಗ್ರೆಸ್ ಗೆ
ವರುಣಾ ಕ್ಷೇತ್ರ ವ್ಯಾಪ್ತಿಯ ವೀರಶೈವ ಮುಖಂಡರನ್ನು ಸೆಳೆದು ಕಾಂಗ್ರೆಸ್ ಗೆ ಸೇರುವಂತೆ ಮಾಡುವಲ್ಲಿಯೂ ಅವರು ಯಶಸ್ವಿಯಾಗಿದ್ದಾರೆ. ಶತಮಾನಗಳ ಕಾಲದಿಂದಲೂ ಕಾಣದಂತಹ ಅಭಿವೃದ್ಧಿ ಕಾರ್ಯವನ್ನು ಯತೀಂದ್ರ ಮಾಡಿ ಕೊಟ್ಟಿದ್ದಾರೆ. ಅವರ ಈ ಕಾರ್ಯವನ್ನು ನೋಡಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದೇವೆ ಎನ್ನುವುದು ವೀರಶೈವ ಮುಖಂಡರ ಸ್ಪಷ್ಟನೆಯಾಗಿದೆ.
ಜೆಡಿಎಸ್, ಬಿಜೆಪಿ ನಾಯಕರು ಅತ್ತ ಸುಳಿಯುತ್ತಿಲ್ಲ
ಅದು ಏನೇ ಇರಲಿ, ಸದ್ಯ ಜನರ ಮಧ್ಯೆ ಪಳಗುತ್ತಿರುವ ಯತೀಂದ್ರ ಅವರು ವರುಣಾ ಕ್ಷೇತ್ರದಿಂದಲೇ ರಾಜಕೀಯ ಜೀವನವನ್ನು ಆರಂಭಿಸಲು ಮುಂದಾಗಿದ್ದು, ಗೆಲುವು ನಮ್ಮದೇ ಎಂಬ ಆತ್ಮವಿಶ್ವಾಸದಲ್ಲಿದ್ದಾರೆ. ಆದರೆ ಅದ್ಯಾಕೋ ಜೆಡಿಎಸ್ ಮತ್ತು ಬಿಜೆಪಿ ನಾಯಕರು ಅತ್ತ ಸುಳಿಯುವ ಯತ್ನವನ್ನೇ ಮಾಡಿದಂತೆ ಕಂಡುಬರುತ್ತಿಲ್ಲ.