ಸಿದ್ದಗಂಗಾ ಶ್ರೀಗಳ ಭೇಟಿ ಮಾಡಿದ ಮೈಸೂರು ರಾಜವಂಶಸ್ಥ ಯದುವೀರ್
ಮೈಸೂರು, ಜನವರಿ 16 : ತುಮಕೂರು ಸಿದ್ದಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದ ಪರಿಣಾಮ ಬುಧವಾರ ಬೆಳಗ್ಗೆ ಅವರನ್ನು ಮಠಕ್ಕೆ ಸ್ಥಳಾಂತರ ಮಾಡಲಾಗಿದೆ. ಈ ವಿಚಾರವನ್ನು ತಿಳಿದ ಮೈಸೂರು ರಾಜವಂಶಸ್ಥ ಯದುವೀರ್ ಒಡೆಯರ್ ಅವರು ಶ್ರೀಗಳನ್ನು ಭೇಟಿ ಮಾಡಿ, ಆರೋಗ್ಯ ವಿಚಾರಿಸಿದ್ದಾರೆ.
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಯದುವೀರ್ ಒಡೆಯರ್, ನಾನು ಮೈಸೂರಿನಿಂದ ಬೆಂಗಳೂರಿಗೆ ಬರುತ್ತಿದ್ದೆ. ಬರುವ ಹಾದಿಯಲ್ಲಿ ಶ್ರೀಗಳನ್ನು ನೋಡಲು ಬಂದಿದ್ದೇನೆ. ಶ್ರೀಗಳು ಆರೋಗ್ಯವಾಗಿದ್ದಾರೆ. ಅವರು ಬೇಗ ಚೇತರಿಸಿಕೊಳ್ಳಲಿ ಎಂದು ಚಾಮುಂಡೇಶ್ವರಿ ತಾಯಿಯಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದಿದ್ದಾರೆ.
ಸಿದ್ದಗಂಗಾ ಶ್ರೀಗಳ ಭೇಟಿ ಮಾಡಿದ ಮೈಸೂರು ರಾಜವಂಶಸ್ಥ ಯದುವೀರ್
ಶ್ರೀಗಳು ವಿಶ್ರಾಂತಿಯಲ್ಲಿದ್ದರಿಂದ ಅವರನ್ನು ಎಚ್ಚರಿಸಲು ಹೋಗಲಿಲ್ಲ. ಅವರ ಜೊತೆ ಮಾತನಾಡುವ ಅವಕಾಶ ಸಿಗಲಿಲ್ಲ. ಹಾಗಾಗಿ ನಾನು ಅವರ ಆಶೀರ್ವಾದ ಪಡೆದುಕೊಂಡು, ಅವರನ್ನು ನೋಡಿಕೊಂಡು ಬಂದೆ ಎಂದು ಹೇಳಿದ್ದಾರೆ.
ಸ್ವಾಮೀಜಿಯನ್ನು ಮಠಕ್ಕೆ ಕರೆತಂದ ಹಿನ್ನೆಲೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಮಠದ ಬಳಿ ಆಗಮಿಸುತ್ತಿದ್ದಾರೆ. ಮಠದ ಬಳಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಬ್ಯಾರಿಕೇಡ್ ಗಳನ್ನು ಅಳವಡಿಸಿ, ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.