40 ವರ್ಷ ಬಳಿಕ ಅರಮನೆಯಲ್ಲಿ ವಿವಾಹ ಸಂಭ್ರಮ!
ಮೈಸೂರು, ಜೂನ್ 25 : ಹಿರಿಯರು ಸುಮಾರು 40 ವರ್ಷಗಳ ಹಿಂದೆ ನಡೆದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಹಾಗೂ ಬೆಟ್ಟದಕೋಟೆ ಅರಸು ಮನತೆನದ ರಾಣಿ ಪ್ರಮೋದಾದೇವಿ ಅವರ ವಿವಾಹದ ಬಗ್ಗೆ ಹೇಳುವಾಗಲೆಲ್ಲಾ ಒಂದು ರೀತಿಯ ಕುತೂಹಲ ಕಾಡುತ್ತಿತ್ತು. ಇದೀಗ ಅಂತಹದ್ದೇ ರಾಜ ವೈಭೋಗದಲ್ಲಿ ನಡೆಯುವ ವಿವಾಹವನ್ನು ನೋಡುವ ಸೌಭಾಗ್ಯ ಮೈಸೂರಿಗರದ್ದಾಗಿದೆ. [ಯದುವೀರ ಒಡೆಯರ್ ಭಾವಿ ಪತ್ನಿ ರಾಜಸ್ಥಾನಿ ಕುವರಿ]
ಮೈಸೂರು ಅರಮನೆ ಹಲವು ಐತಿಹಾಸಿಕ ಘಟನೆಗಳಿಗೆ ಸಾಕ್ಷಿಯಾಗಿ ನಿಂತಿದೆ. ಇದೀಗ ರಾಜಮಾತೆ ಪ್ರಮೋದಾದೇವಿ ಅವರ ಸಮ್ಮುಖದಲ್ಲಿ ನಡೆಯುತ್ತಿರುವ ವಿವಾಹ ಇತಿಹಾಸದ ಪುಟಗಳಲ್ಲಿ ದಾಖಲಾಗಲಿದೆ. ಸುಮಾರು 40 ವರ್ಷಗಳ ಹಿಂದೆ ಅಂದರೆ 1976ರಲ್ಲಿ ನಡೆದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ವಿವಾಹದ ಬಳಿಕ ಅರಮನೆಯಲ್ಲಿ ಯಾವುದೇ ಶುಭ ಕಾರ್ಯಗಳು ನಡೆದಿರಲಿಲ್ಲ. ಇದೀಗ ವಿವಾಹ ನಡೆಯುತ್ತಿರುವುದು ಸಂಭ್ರಮಕ್ಕೆ ಕಾರಣವಾಗಿದೆ. [ಯದುವೀರ್ - ತ್ರಿಷಿಕಾ ಮದುವೆ ಚಿತ್ರಗಳು]
ಇದೀಗ ಆಧುನಿಕವಾಗಿ ಬಹಳಷ್ಟು ಬದಲಾವಣೆಗಳಾಗಿರಬಹುದು. ವಿವಾಹದ ಅದ್ಧೂರಿತನದಲ್ಲಿ ಬದಲಾವಣೆಗಳು ಇರಬಹುದು. ಆದರೆ ರಾಜಮನೆತನದಲ್ಲಿ ವಿವಾಹ ಮಹೋತ್ಸವ ಯಾವ ರೀತಿಯ ಸಂಪ್ರದಾಯದಲ್ಲಿ ನಡೆಯುತ್ತಿತ್ತೋ, ಅದೇ ರೀತಿಯಲ್ಲಿ ದತ್ತು ಪುತ್ರ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮತ್ತು ತ್ರಿಷಿಕಾ ಕುಮಾರಿ ಸಿಂಗ್ ಅವರ ವಿವಾಹವು ಅತ್ಯಂತ ವಿಜೃಂಭಣೆಯಿಂದ ನಡೆಯುತ್ತಿದೆ. ಈ ವಿವಾಹ ಮಹೋತ್ಸವಕ್ಕೆ ದೇಶವಿದೇಶಗಳಿಂದ ಬರಲಿರುವ ಗಣ್ಯರು ಸಾಕ್ಷಿಯಾಗಲಿದ್ದಾರೆ. [ಅರಮನೆಯಲ್ಲಿ ಯದುವೀರ್ ವಿವಾಹ ಸಂಭ್ರಮ ಆರಂಭ]
ಚಿನ್ನಲೇಪಿತ ಆಕರ್ಷಕ ಆಮಂತ್ರಣ ಪತ್ರ
ರಾಜಮಾತೆ ಪ್ರಮೋದಾದೇವಿ ಅವರು ಮಗನ ವಿವಾಹದ ಹಿನ್ನೆಲೆಯಲ್ಲಿ ಸಂಬಂಧಿಕರು ಮತ್ತು ಆಪ್ತರನ್ನು ಆತ್ಮೀಯವಾಗಿ ಆಹ್ವಾನಿಸಲಾಗಿದ್ದು, ಆಪ್ತರಿಗಾಗಿ ಅತ್ಯಂತ ಆಕರ್ಷಕವಾದ ಚಿನ್ನದ ಲೇಪನದ ವಿವಾಹದ ಕರೆಯೋಲೆಯನ್ನು ಮುದ್ರಿಸಲಾಗಿದೆ. ಯದುವಶಂದ ಹೆಗ್ಗುರುತಾದ ಗಂಡಭೇರುಂಡದ ಲಾಂಛನ ಮತ್ತು ಮೈಸೂರು ಅರಮನೆ ಚಿತ್ರವನ್ನು ಮುದ್ರಿಸಲಾಗಿದೆ.[ಬೆಟ್ಟದ ಕೋಟೆ ಮನೆತನ ಯುವರಾಜ ಯದುವೀರ್ ಪರಿಚಯ]
ಉಯ್ಯಾಲೆಯ ಮೇಲೆ ಉರುತ್ತನೆ ಕಾರ್ಯಕ್ರಮ
ಆಮಂತ್ರಣ ಪತ್ರಿಕೆಯಲ್ಲಿ ಜೂ.27 ಬೆ.9.05ರಿಂದ 9.35ರೊಳಗೆ ಶುಭ ಮುಹೂರ್ತದಲ್ಲಿ ಅರಮನೆ ಕಲ್ಯಾಣ ಮಂಟಪದೊಳಗೆ ವಿವಾಹ ನಡೆಯುವ ಬಗ್ಗೆ ನಮೂದಿಸಲಾಗಿದೆ. ಅಂದು ದಿನ ರಾತ್ರಿ ಉಯ್ಯಾಲೆಯ ಮೇಲೆ ಉರುತ್ತನೆ ಕಾರ್ಯಕ್ರಮವಿದೆ. ರಾತ್ರಿ 7.30ಕ್ಕೆ ಅರಮನೆಯ ದರ್ಬಾರ್ ಹಾಲ್ ನಲ್ಲಿ ಕಾರ್ಯಕ್ರಮ ನಡೆಯಲಿದೆ. ಜೂ.28ರಂದು ರಾತ್ರಿ 7.30ಕ್ಕೆ ಆರತಕ್ಷತೆ ಕಾರ್ಯಕ್ರಮ ನಡೆಯಲಿದ್ದು, ಆಗಮಿಸುವವರು 7.15ಕ್ಕೆ ದರ್ಬಾರ್ ಹಾಲ್ಗೆ ಹಾಜರಾಗುವಂತೆಯೂ ತಿಳಿಸಲಾಗಿದೆ.
ಮದುವೆ ಕಾರ್ಯಕ್ರಮಗಳು
ಜೂ.24ರಿಂದ ಆರಂಭಗೊಂಡಿರುವ ವಿವಾಹದ ಸಂಪ್ರದಾಯಗಳು ಜೂ.25ಕ್ಕೂ ಮುಂದುವರೆದಿದೆ. ಮುಂಜಾನೆಯೇ ಚಪ್ಪರಪೂಜೆ ನಡೆದಿದ್ದು, ಬಳಿಕ ಅರಮನೆಗೆ ಆಗಮಿಸಿದ ರಾಜಗುರುಗಳಾದ ಪರಕಾಲ ಸ್ವಾಮೀಜಿ ಅವರ ಪಾದಪೂಜೆಯೂ ಸಾಂಗವಾಗಿ ಜರುಗಿದೆ.
ಸ್ತಂಭ ಮುಹೂರ್ತ ಮತ್ತು ಶಕುನಶಾಸ್ತ್ರ
ಇದಾದ ಬಳಿಕ ಕಲ್ಯಾಣ ಮಂಟಪದಲ್ಲಿ ಸ್ತಂಭ ಮುಹೂರ್ತ ಮತ್ತು ಶಕುನಶಾಸ್ತ್ರ, ಕನ್ನಡಿ ತೊಟ್ಟಿಯಲ್ಲಿ ಗಣಪತಿ ಪೂಜೆ ಉದ್ದುಕಲ್ಲು ಶಾಸ್ತ್ರ, ಗೋಧಿಕಲ್ಲು ಶಾಸ್ತ್ರ(ಗೋಧಿ ಬೀಸುವುದು), ಮಾತೃಕಾ ಪೂಜೆ, ದೇವಕಂಕಣ ಪೂಜೆ, ನಂದಿ ನವಗ್ರಹಪೂಜೆ, ನವಗ್ರಹ ಹೋಮ ನಡೆಯುತ್ತದೆ.
ಕಂಕಣಧಾರಣೆ ಕಾರ್ಯಕ್ರಮ
ಸಂಜೆ 6 ಗಂಟೆ ನಂತರ ಉದುಕಶಾಂತಿ ಪಾರಾಯಣ, ಅಂಕುರಾರ್ಪಣೆ, ಹರಿಸೇವೆ, ಲಿಂಗಧೀರ, ಕನ್ನಕನ್ನಡಿ ಪೂಜಾ ಕೈಂಕರ್ಯ ನಡೆಯಲಿದೆ, ಇದಾದ ಬಳಿಕ ಕೋಡಿ ಮಹೇಶ್ವರ ದೇವಸ್ಥಾನದಿಂದ ದೇವರನ್ನು ತರುವ ಕಾರ್ಯ ಮತ್ತು ಕಂಕಣಧಾರಣೆ ನಡೆಯಲಿದ್ದು ಅಲ್ಲಿಗೆ ಇಂದಿನ ವಿವಾಹ ಕುರಿತ ಕಾರ್ಯಕ್ರಮಗಳು ಸಮಾಪ್ತಿಗೊಳ್ಳಲಿದೆ.