ನಾಲ್ವಡಿ ಕೃಷ್ಣರಾಜರನ್ನು ನೆನೆದ ಯದುವೀರ್ ಕೃಷ್ಣರಾಜ ಒಡೆಯರ್
ಮೈಸೂರು, ಜೂನ್ 4 : ನಾಲ್ವಡಿ ಕೃಷ್ಣರಾಜ ಒಡೆಯರ್ ನವ ಕರ್ನಾಟಕದ ನಿರ್ಮಾತೃ. ನಮ್ಮ ನಾಡಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕೊಡುಗೆ ಅಪಾರವಾಗಿದೆ ಎಂದು ರಾಜವಂಶ್ತ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಬಣ್ಣಿಸಿದರು.
ಮೈಸೂರು ಅರಮನೆ ಆವರಣದಲ್ಲಿಂದು ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಆಚರಣೆ ವೇಳೆ ಒಡೆಯರ್ ಪುತ್ಥಳಿಗೆ ಪುಷ್ಪಾರ್ಚನೆಗೈದು ಗೌರವ ಸಮರ್ಪಿಸಿದರು. ಬಳಿಕ ಮಾತನಾಡಿದ ಅವರು, ನಾಲ್ವಡಿ ಕೃಷ್ಣರಾಜ ಒಡೆಯರ್ ಆ ಕಾಲದಲ್ಲೇ ಯುವಕರಿಗೆ ಸ್ಪೂರ್ತಿಯಾಗುವಂತಹ ಆಡಳಿತ ಕೊಟ್ಟಿದ್ದಾರೆ.
ಆ ಕಾಲದಲ್ಲಿ ಅವರು ಕೊಟ್ಟ ಕೊಡುಗೆಯನ್ನು ಇವತ್ತಿಗೂ ನಾವು ನೋಡುತ್ತಿದ್ದೇವೆ. ಇಂದು ಪಾಲಿಕೆ ವತಿಯಿಂದ ನಾಲ್ವಡಿ ಒಡೆಯರ್ ಜಯಂತಿ ಆಚರಿಸುತ್ತಿದ್ದಾರೆ. ಮುಂದೆ ಇದು ದೊಡ್ಡ ಮಟ್ಟದಲ್ಲಿ ಆಗಬೇಕಾಗಿದೆ ಎಂದರು .
ಶಾಲಾ ಮಕ್ಕಳಿಂದಲೂ ಒಡೆಯರ್ ಸ್ಮರಣೆ : ಇನ್ನು ಆಧುನಿಕ ಮೈಸೂರಿನ ನಿರ್ಮಾತೃ ರಾಜಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 134ನೇ ಜಯಂತಿ ಮತ್ತು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಅಗ್ರಹಾರದ ಕೃಷ್ಣರಾಜ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿವಿಧ ಜಾತಿಯ ಫಲ ಕೊಡುವ ಸಸಿ ನೆಡುವ ಮೂಲಕ ವಿಶೇಷವಾಗಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮಾಜಿ ಮಹಾನಗರ ಪಾಲಿಕೆ ಸದಸ್ಯ ಪಾರ್ಥಸಾರಥಿ ಮಾತನಾಡಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಆಧುನಿಕ ಮೈಸೂರಿನ ನಿರ್ಮಾಣದಲ್ಲಿ ವಿವಿಧ ಅಭಿವೃದ್ಧಿಗಳಾದ ರಸ್ತೆ, ಆಸ್ಪತ್ರೆ ನೀರಾವರಿ, ಶಿಕ್ಷಣ ಸಂಸ್ಥೆ, ಧಾರ್ಮಿಕ ಸಂಸ್ಥೆಗಳು, ಸಂಶೋಧನಾ ಕೇಂದ್ರ, ವಿದ್ಯುತ್ ಉತ್ಪಾದನೆ, ಕಾರ್ಖಾನೆಗಳನ್ನು ಸ್ಥಾಪಿಸಿ ಮೈಸೂರಿನ ಹೆಸರನ್ನು ವಿಶ್ವ ಭೂಪಟದಲ್ಲಿ ಗುರುತಿಸುವಂತೆ ಮಾಡಿದ್ದಾರೆ ಅವರ ಯೋಜನೆಗಳನ್ನು ಶಾಲಾ ಮಕ್ಕಳಿಗೆ ಪಾಠವಾಗಿಸಬೇಕು ಎಂದು ಒತ್ತಾಯಿಸಿದರು.