ಯಡಿಯೂರಪ್ಪ ನನ್ನ ಜಗಳ ಗಂಡ ಹೆಂಡತಿ ಜಗಳವಿದ್ದಂತೆ : ಈಶ್ವರಪ್ಪ
ಮೈಸೂರು, ಡಿಸೆಂಬರ್ 31 : ನನ್ನ ಮತ್ತು ಯಡಿಯೂರಪ್ಪನವರ ಜಗಳ ಗಂಡ ಹೆಂಡತಿ ಜಗಳವಿದ್ದಂತೆ. ಆ ಜಗಳ ಶಾಶ್ವತವಾಗಿ ಇರೋಲ್ಲ ಎಂದು ಬಿಜೆಪಿ ವಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಮೈಸೂರಿನಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಮೈಸೂರಿನ ವಿದ್ಯಾಶಂಕರ ಕಲ್ಯಾಣ ಮಂಟಪದಲ್ಲಿ ಶನಿವಾರ ಆಯೋಜಿಸಲಾದ ಸಂಗೊಳ್ಳಿ ರಾಯಣ್ಣ ಬ್ರೀಗೇಡ್ ನ ಪೂರ್ವ ಸಭೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕೆ.ಎಸ್. ಈಶ್ವರಪ್ಪ ಮಾತನಾಡಿದರು.
ಸಿದ್ದರಾಮಯ್ಯ ನವರಿಗೆ ಅಲ್ಪಸಂಖ್ಯಾತರೆಲ್ಲ ಬೀಗರ ರೀತಿ ಆಗಿದ್ದು, ಅವರ ಕಲ್ಯಾಣಕ್ಕೆ ಸಿದ್ದರಾಮಯ್ಯ ನವರೇ ದುಡಿಯುತ್ತಿದ್ದಾರೆಂದು ಮುಖ್ಯಮಂತ್ರಿಗಳ ಕುರಿತು ವ್ಯಂಗ್ಯವಾಡಿದರು. ಇನ್ನು ದಲಿತರು ಹಾಗೂ ಹಿಂದೂಳಿದವರನ್ನು ಅವರು ನಿರ್ಲಕ್ಷ್ಯಿಸಿದ್ದು, ಅದಕ್ಕಾಗಿ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಮೂಲಕ ನಾವು ಅವರ ಕಲ್ಯಾಣಕ್ಕೆ ಕೆಲಸ ಮಾಡುತ್ತಿದ್ದೇವೆ ಎಂದರು. ಇನ್ನು ಪಕ್ಷದ ಬೆಳವಣಿಗೆಗೂ ಇದು ಪೂರಕವಾಗಿದೆ ಎಂದು ತಿಳಿಸಿದರು.
ಹಿಂದ್ ಸಂಘಟನೆಯನ್ನು ರಾಜ್ಯದ ಜನ ಒಪ್ಪಿದ್ದರೂ ಯಡಿಯೂರಪ್ಪ ಒಬ್ಬರು ಒಪ್ಪಿರಲಿಲ್ಲ. ಈಗ ಅವರು ಸಹ ಒಪ್ಪಿದ್ದು ನಮ್ಮ ಜೊತೆಗೆ ಇರುತ್ತಾರೆ ಅನ್ನೋ ವಿಶ್ವಾಸ ಇದೆ. 6 ತಿಂಗಳಲ್ಲಿ ಎಲ್ಲವೂ ಸರಿಯಾಗಿ ನಾವು ಅಂದುಕೊಂಡಿರುವುದಕ್ಕಿಂತ ಹೆಚ್ಚಾಗಿ ರಾಯಣ್ಣ ಬ್ರೀಗೇಡ್ ಮುಂದೆ ಬರಲಿದೆ ಎಂದರು.
ಈ ಸಂದರ್ಭ ಬಿಜೆಪಿಯ ಸಿದ್ದರಾಜು, ಶ್ರೀವತ್ಸ, ಮೈ.ವಿ. ರವಿಶಂಕರ್, ನಗರಪಾಲಿಕೆ ಸದಸ್ಯರಾದ ಶಿವಕುಮಾರ್, ಶಂಕರ್, ಮಾಜಿ ಸದಸ್ಯ ಮಹೇಶ್, ಕಮಲಮ್ಮ, ಜಯರಾಮ್, ಜೋಗಿಮಂಜು, ರಮೇಶ್ ಮತ್ತಿತರರು ಉಪಸ್ಥಿತರಿದ್ದರು.