ವಿಷಪ್ರಸಾದ ಆರೋಪಿಗಳಿಂದ ಜಾಮೀನು ಪಡೆದುಕೊಳ್ಳಲು ಪ್ರಯತ್ನ
ಮೈಸೂರು, ಡಿಸೆಂಬರ್ 30: ಸುಳ್ವಾಡಿ ವಿಷ ಪ್ರಸಾದ ದುರಂತ ಪ್ರಕರಣ ಸಂಬಂಧ ನ್ಯಾಯಾಂಗ ಬಂಧನದಲ್ಲಿರುವ ನಾಲ್ವರು ಆರೋಪಿಗಳಿಗೆ ಜಾಮೀನು ಪಡೆಯುವುದಕ್ಕೆ ಮೈಸೂರಿನ ಮಹದೇವಸ್ವಾಮಿ ಎಂಬ ವಕೀಲರು ಇಲ್ಲಿನ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದಲ್ಲಿ ಮುಂಗಡ ಅರ್ಜಿ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹನೂರು ತಾಲ್ಲೂಕಿನ ರಾಮಾಪುರ ಪೊಲೀಸ್ ಠಾಣೆಯಲ್ಲಿ ಡಿ.19ರಂದು ಆರೋಪಿಗಳಾದ ಇಮ್ಮಡಿ ಮಹಾದೇವಸ್ವಾಮಿ, ಅಂಬಿಕಾ, ಮಾದೇಶ ಮತ್ತು ದೊಡ್ಡಯ್ಯ ಅವರ ವಿರುದ್ಧ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದ ದೂರು, ಎಫ್ಐಆರ್ ಮತ್ತು ಮಹಜರಿಗೆ ಸಂಬಂಧಿಸಿದ ದಾಖಲೆಗಳನ್ನು ವಕೀಲರು ಪಡೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.
ಈಗ 'ಮಾರಮ್ಮನೇ' ಹೇಳಿದ್ದಾಳೆ; ಆರೋಪಿಗಳು ಇನ್ನೂ ಆರು ಮಂದಿ ಇದ್ದಾರಂತೆ!
ಜಾಮೀನು ಅರ್ಜಿ ಸಲ್ಲಿಸಲು ನ್ಯಾಯಾಂಗ ಬಂಧನದಲ್ಲಿರುವ ಆರೋಪಿಗಳ ಸಹಿ ಅಗತ್ಯವಿದೆ. ಆದರೆ, ವಕೀಲರಿಗೆ ಇನ್ನೂ ಸಹಿ ಪಡೆಯಲು ಸಾಧ್ಯವಾಗಿಲ್ಲ. ಜನವರಿ 3ಕ್ಕೆ ಆರೋಪಿಗಳ ನ್ಯಾಯಾಂಗ ಬಂಧನದ ಅವಧಿ ಪೂರ್ಣಗೊಳ್ಳಲಿದ್ದು, ಅಂದು ನ್ಯಾಯಾಲಯಕ್ಕೆ ಹಾಜರುಪಡಿಸುವ ವೇಳೆ ವಕೀಲರು ಅವರಿಂದ ಸಹಿ ಪಡೆದು ಅರ್ಜಿ ಹಾಕುವ ಸಲ್ಲಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.
ವಿಷಪ್ರಸಾದ ಆರೋಪಿ ಅಂಬಿಕಾ ಚಾಮರಾಜನಗರದಲ್ಲಿ ಉಳಿಯೋದು ಡೌಟು?
ಆರೋಪಿಗಳ ವಿಚಾರಣೆ ಮತ್ತು ಸ್ಥಳ ಮಹಜರು ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಪೊಲೀಸರು ನಾಲ್ವರನ್ನೂ ಡಿ.21ರ ತಡರಾತ್ರಿ ಕೊಳ್ಳೇಗಾಲದ ಪ್ರಧಾನ ಸಿವಿಲ್ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು. ಅವರು ಜನವರಿ 3ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಸದ್ಯ ಆರೋಪಿಗಳನ್ನು ಮೈಸೂರು ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿದೆ.
ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ
ಪ್ರಕರಣದ ರೂವಾರಿ ಇಮ್ಮಡಿ ಮಹದೇವಸ್ವಾಮಿ ಸೇರಿದಂತೆ ನಾಲ್ವರು ಆರೋಪಿಗಳನ್ನು ಬಳ್ಳಾರಿ ಅಥವಾ ಬೆಂಗಳೂರು ಪರಪ್ಪನ ಅಗ್ರಹಾರದ ಕಾರಾಗೃಹಕ್ಕೆ ಸ್ಥಳಾಂತರಿಸುವ ಪ್ರಯತ್ನ ಸದ್ದಿಲ್ಲದೆ ಸಾಗಿದೆ ಎನ್ನಲಾಗಿದೆ.
ಬಳ್ಳಾರಿಗೆ ವರ್ಗಾಯಿಸುವುದು ಸೂಕ್ತ
ಚಾಮರಾಜನಗರ ಮೈಸೂರಿಗೆ ಹತ್ತಿರದಲ್ಲಿರುವ ಕಾರಣ ಭದ್ರತೆ ದೃಷ್ಟಿಯಲ್ಲಿ ಬೆಂಗಳೂರು ಅಥವಾ ಬಳ್ಳಾರಿ ಜೈಲಿಗೆ ಈ ಆರೋಪಿಗಳನ್ನು ವರ್ಗಾಯಿಸುವುದು ಸೂಕ್ತ ಎಂಬ ಆಲೋಚನೆ ಮೈಸೂರು ಕಾರಾಗೃಹ ಅಧಿಕಾರಿಗಳಿಗಿದ್ದು, ಇಲಾಖೆಯ ಎಡಿಜಿಪಿ ಜೊತೆ ಚರ್ಚಿಸಿ ಅವರ ಅನುಮತಿಯೊಂದಿಗೆ ಮುಂದಿನ ಕ್ರಮ ಜರುಗಿಸಲಾಗುತ್ತದೆ ಎನ್ನಲಾಗಿದೆ.
ಪ್ರಸಾದಕ್ಕೆ ವಿಷ ಬೆರೆಸಿದ ಆರೋಪಿಗಳನ್ನು ಪೊಲೀಸರು ಹಿಡಿದ ರೋಚಕ ಕತೆ
ಸ್ಥಳಾಂತರಿಸುವ ಲೆಕ್ಕಾಚಾರ
ನ್ಯಾಯಾಲಯ ಮತ್ತು ಜೈಲುಗಳಲ್ಲಿ ವಿಡಿಯೋ ಕಾನ್ಫರೆನ್ಸ್ ವ್ಯವಸ್ಥೆ ಇರುವುದರಿಂದ ಆರೋಪಿಗಳನ್ನು ಎಷ್ಟೇ ದೂರದ ಜೈಲಿಗೆ ವರ್ಗಾಯಿಸಿದರೂ ವಿಚಾರಣೆಗೆ ತೊಂದರೆಯಾಗುವುದಿಲ್ಲ ಎಂಬ ಕಾರಣಕ್ಕೆ ಸ್ಥಳಾಂತರಿಸುವ ಲೆಕ್ಕಾಚಾರದಲ್ಲಿದ್ದಾರೆ.
ವಿಡಿಯೋ ಕಾನ್ಫೆರೆನ್ಸ್ ಮುಖಾಂತರ ವಿಚಾರಣೆ
ದೂರದಿಂದ ಭದ್ರತೆ ಒದಗಿಸಿಕೊಂಡು ಆರೋಪಿಗಳನ್ನು ಕರೆತರುವುದು ಈ ಮುಂಚೆ ದೊಡ್ಡ ಸಮಸ್ಯೆ ಹಾಗೂ ತಲೆನೋವಾಗಿತ್ತು. ಈ ಕಾರಣಕ್ಕೆ ಆರೋಪಿಗಳನ್ನು ಅವರಿರುವ ಜೈಲು ಸ್ಥಳದಿಂದ ವಿಡಿಯೋ ಕಾನ್ಫೆರೆನ್ಸ್ ಮುಖಾಂತರ ವಿಚಾರಣೆ ಮಾಡುವ ವ್ಯವಸ್ಥೆಯನ್ನು ರಾಜ್ಯದ ಬಹುತೇಕ ಎಲ್ಲಾ ನ್ಯಾಯಾಲಯ ಮತ್ತು ಕಾರಾಗೃಹಗಳಲ್ಲಿ ಕಲ್ಪಿಸಲಾಗಿದೆ.
ಈ ಆರೋಪಿಗಳನ್ನು ಯಾವುದೇ ಜೈಲಿಗೆ ಸ್ಥಳಾಂತರಿಸಿದರೂ ಕೊಳ್ಳೇಗಾಲ ಜೆಎಂಎಫ್ ಸಿ ನ್ಯಾಯಾಲಯದಲ್ಲೇ ವಿಚಾರಣೆ ಮಾಡಬೇಕಿದೆ. ಇಲ್ಲಿ ತೀರ್ಪು ಹೊರಬಿದ್ದ ಮೇಲಷ್ಟೇ ಬೇರೆ ನ್ಯಾಯಾಲಯಕ್ಕೆ ಈ ಪ್ರಕರಣ ವರ್ಗಾವಣೆಗೊಳ್ಳುತ್ತದೆ.