ಮೈಸೂರಿನ ಬೇಕರಿಯೊಂದರ ಕೇಕ್ ನಲ್ಲಿ ಹುಳು
ಮೈಸೂರು, ಜುಲೈ 17: ಬೇಕರಿ ಅಂದರೆ ಸಾಕು, ಅಲ್ಲಿ ತರಹೇವಾರಿ ತಿಂಡಿಗಳದ್ದೇ ಕಾರುಬಾರು. ಅದರಲ್ಲೂ ಇಂತಹ ಬೇಕರಿಗಳಲ್ಲಿ ಸಿಗುವ ಕೇಕ್ ಅಂದರೆ ಯಾರಿಗೆ ತಾನೇ ಹಿಡಿಸೋಲ್ಲ ಹೇಳಿ? ಆದರೆ ಇನ್ನು ಮುಂದೆ ಬೇಕರಿಯ ಪದಾರ್ಥಗಳನ್ನು ತಿನ್ನೋದಕ್ಕೆ ಹೋಗೋಕೂ ಮೊದಲು ನಿಮ್ಮ ಆರೋಗ್ಯದ ಕುರಿತು ಎಚ್ಚರವಹಿಸಿ. ಯಾಕೆಂದರೆ ಹುಳು ಹುಪ್ಪಡಿಗಳಿರಬಹುದು ಎಚ್ಚರ. ಸರಸ್ವತಿಪುರಂನಲ್ಲಿರುವ ಬೇಕರಿಯೊಂದರ ಮಳಿಗೆಯಲ್ಲಿನ ಕೇಕೊಂದರಲ್ಲಿ ಹುಳುಹುಪ್ಪಡಿಗಳು ಪತ್ತೆಯಾಗಿವೆ.
ತುಂಬಾ ವರ್ಷಗಳಿಂದ ಸರಸ್ವತಿಪುರಂನಲ್ಲಿರುವ ಬೇಕರಿಯೊಂದರಲ್ಲಿ ಗ್ರಾಹಕರೊಬ್ಬರು ಕೇಕ್ ಖರೀದಿಗೆಂದು ಬಂದಿದ್ದರು. ಕೇಕ್ ನ್ನು ತೆರೆದು ನೋಡಲಾಗಿದೆ. ಅದರಲ್ಲಿ ಹುಳುಗಳು ಮೊಟ್ಟೆ ಇಟ್ಟಿದ್ದು, ಮರಿಗಳು ಹೊರಬರುತ್ತಿವೆ. ಇದರಿಂದ ಆಕ್ರೋಶಗೊಂಡ ಗ್ರಾಹಕರು ಜಿಲ್ಲಾಧಿಕಾರಿಗಳಿಗೆ, ಪೊಲೀಸ್ ರಿಗೆ, ಪಾಲಿಕೆಗೆ ದೂರು ನೀಡುವುದಾಗಿ ತಿಳಿಸಿದ್ದಾರೆ.
ಈಗಾಗಲೇ ಮೈಸೂರಿನಲ್ಲಿ ಅನಾರೋಗ್ಯ ಕಾಡುತ್ತಿದ್ದು ಈ ರೀತಿಯ ತಿಂಡಿ ತಿನಿಸುಗಳನ್ನು ತಿಂದಲ್ಲಿ ಮತ್ತಷ್ಟು ರೋಗ ಉಲ್ಬಣವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ ಎಂದು ತಿಳಿಸಿದ್ದಾರೆ