ಇಬ್ಬರ ಮಧ್ಯದ ಜಗಳ ಬಿಡಿಸಲು ಹೋಗಿ ಜಗತ್ತನ್ನೇ ಬಿಟ್ಟ ಝರೀನ್ ತಾಜ್
ಮೈಸೂರು, ಜೂನ್ 23 : ಕ್ಷುಲ್ಲಕ ಕಾರಣಕ್ಕೆ ಉದ್ಭವಿಸಿದ್ದ ಕೌಟುಂಬಿಕ ಕಲಹವನ್ನು ಬಿಡಿಸಲು ಹೋಗಿ, ಮಹಿಳೆ ಬಲಿಯಾದ ಘಟನೆ ಮೈಸೂರಿನಲ್ಲಿ ನಡೆದಿದೆ. ಗಾಯತ್ರಿಪುರಂನ ಐವತ್ತೈದು ವರ್ಷದ ಝರೀನ್ ತಾಜ್ ಮೃತ ಮಹಿಳೆ. ಕೌಟುಂಬಿಕ ಜಗಳದ ವೇಳೆ ಝರೀನ್ ತಾಜ್ ತಳ್ಳಿದ್ದಕ್ಕೆ ನೆಲಕ್ಕೆ ಕುಸಿದು ಬಿದ್ದಿದ್ದಾರೆ.
ಕೂಡಲೇ ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ. ಮೃತ ಝರೀನ್ ತಾಜ್ ರ ತಮ್ಮ ಮಹಮದ್ ರಫಿ ಎಂಬುವವರ ಮಗಳ ಅತ್ತೆ ಕುಟುಂಬಸ್ಥರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ರಫಿಯವರ ಮಗಳು ಮುಸ್ಕಾನ್ ರನ್ನ ಸಲ್ಮಾನ್ ಪಾಷಾ ಎಂಬುವವರಿಗೆ ವರ್ಷದ ಹಿಂದೆ ಮದುವೆ ಮಾಡಲಾಗಿತ್ತು.
ಎಣ್ಣೆ ಏಟಿನಲ್ಲಿ ಮಹಿಳಾ ಪೊಲೀಸ್ ಕೈ ಎಳೆದಾಡಿದವನಿಗೆ ಗೂಸಾ
ಮದುವೆ ಆದ ದಿನದಿಂದಲೂ ವರದಕ್ಷಿಣೆಗಾಗಿ ಮುಸ್ಕಾನ್ ಗೆ ಸಲ್ಮಾನ್ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಿದ್ದು, ಮಹಿಳಾ ಪೊಲೀಸ್ ಠಾಣೆಗೆ ಕರೆಸಿ ಬುದ್ಧಿ ಹೇಳಿ ಕಳುಹಿಸಲಾಗಿತ್ತು. ಆದರೆ ತಡರಾತ್ರಿ ಮತ್ತೆ ಮಹಮದ್ ರಫಿ ನಿವಾಸಕ್ಕೆ ಬಂದ ಸಲ್ಮಾನ್ ಮನೆಯವರು ಕ್ಯಾತೆ ತೆಗೆದಿದ್ದಾರೆ.
ಮಾತಿನ ಚಕಮಕಿ ತಾರಕಕ್ಕೇರಿ ಕೈಕೈ ಮಿಲಾಯಿಸಿದ್ದಾರೆ. ಝರೀನ್ ತಾಜ್ ಜಗಳ ಬಿಡಿಸಲು ಬಂದಿದ್ದು, ಅವರನ್ನು ತಳ್ಳಲಾಗಿದೆ. ಈ ವೇಳೆ ಗಂಭೀರ ಗಾಯಗೊಂಡು ಸಾವನ್ನಪ್ಪಿದ್ದಾರೆ. ನಜರಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.