ಕೆ.ಆರ್.ನಗರದಲ್ಲಿ ಸಾ.ರಾ.ಮಹೇಶ್ ಹ್ಯಾಟ್ರಿಕ್ ಗೆಲುವಿಗೆ ಕಡಿವಾಣ ಬೀಳುತ್ತಾ?
ಮೈಸೂರು, ಏಪ್ರಿಲ್ 17: ಕೆ.ಆರ್.ನಗರ ಕ್ಷೇತ್ರದಲ್ಲಿ ಶಾಸಕ ಸಾ.ರಾ.ಮಹೇಶ್ ಹ್ಯಾಟ್ರಿಕ್ ಗೆಲುವು ಪಡೆಯುತ್ತಾರಾ? ಹೀಗೊಂದು ಪ್ರಶ್ನೆ ಕ್ಷೇತ್ರದಾದ್ಯಂತ ಇರುವ ಮತದಾರರಲ್ಲಿ ಕುತೂಹಲ ಕೆರಳಿಸಿದೆ. ಅಷ್ಟೇ ಅಲ್ಲ ಅವರ ಹ್ಯಾಟ್ರಿಕ್ ಗೆಲುವಿಗೆ ಕಡಿವಾಣ ಹಾಕಲು ಕಾಂಗ್ರೆಸ್ ಮತ್ತು ಬಿಜೆಪಿ ಶತ ಪ್ರಯತ್ನ ಮಾಡುತ್ತಿವೆ.
ಕಳೆದೊಂದು ದಶಕದಿಂದ ಎರಡು ಅವಧಿಗೆ ಸಾ.ರಾ.ಮಹೇಶ್ ಅವರು ಗೆಲುವಿನ ಪತಾಕೆ ಹಾರಿಸುತ್ತಾ ಕ್ಷೇತ್ರದಲ್ಲಿ ಭದ್ರವಾಗಿ ನೆಲೆಯೂರಿದ್ದಾರೆ. ಜತೆಗೆ ಈ ಬಾರಿಯೂ ಹ್ಯಾಟ್ರಿಕ್ ಗೆಲುವಿಗಾಗಿ ಸತತ ಪ್ರಯತ್ನ ಮಾಡುತ್ತಿದ್ದಾರೆ.
ಮೈಸೂರಿನ ಕೆ.ಆರ್.ನಗರ: ಯಾರಿಗೆ ಒಲಿಯಲಿದ್ದಾನೆ ಮತದಾರ?
ಹಾಗೆ ನೋಡಿದರೆ ಈ ಸಲ ಸಾ.ರಾ.ಮಹೇಶ್ಗೆ ಗೆಲುವು ಸುಲಭ ಎಂದರೂ ತಪ್ಪಾಗಲಾರದು. ಅವರಿಗೆ ಒಂದು ಕಾಲದಲ್ಲಿ ಪ್ರಬಲ ಶತ್ರುವಾಗಿದ್ದ ಕಾಂಗ್ರೆಸ್ನ ಮಾಜಿ ಸಂಸದ ಎಚ್.ವಿಶ್ವನಾಥ್ ಅವರು ಈಗ ಜೆಡಿಎಸ್ಗೆ ಬಂದಿದ್ದಾರೆ. ಇದರಿಂದ ಅವರಿಗೆ ಮತ್ತಷ್ಟು ಬಲ ಬಂದಂತಾಗಿದೆ. ಅಷ್ಟಕ್ಕೆ ಗೆಲುವು ಸುಲಭ ಎನ್ನಲಾಗುವುದಿಲ್ಲ. ಪೈಪೋಟಿ ನೀಡಲು ಕಾಂಗ್ರೆಸ್ ಮತ್ತು ಬಿಜೆಪಿ ತಯಾರಾಗಿದೆ.
ಕೆ.ಆರ್. ನಗರ : ಜೆಡಿಎಸ್- ಬಿಜೆಪಿ ನಡುವಿನ ಯುದ್ಧ
ಬಿಜೆಪಿ-ಕಾಂಗ್ರೆಸ್ ನಿಂದ ಭರ್ಜರಿ ಪ್ರಚಾರ
ಈಗಾಗಲೇ ಕಾಂಗ್ರೆಸ್ನಿಂದ ಡಿ. ರವಿಶಂಕರ್, ಬಿಜೆಪಿಯ ಹೊಸಹಳ್ಳಿ ವೆಂಕಟೇಶ್ ಅವರು ಕ್ಷೇತ್ರದಲ್ಲಿ ಗೆಲುವಿಗಾಗಿ ಕಾರ್ಯಕರ್ತರ ಸಭೆ ಮಾಡುತ್ತಾ ಮನೆ ಮನೆಗೆ ತೆರಳಿ ಮತಯಾಚಿಸುತ್ತಾ ಗೆಲುವಿಗಾಗಿ ಹೋರಾಟ ನಡೆಸುತ್ತಿದ್ದಾರೆ.
ಕಾಂಗ್ರೆಸ್ಗೆ ಈ ಬಾರಿ ಹೇಗಾದರೂ ಮಾಡಿ ಗೆಲ್ಲಲೇಬೇಕಾಗಿದೆ. ಕಾರಣ ಎಚ್.ವಿಶ್ವನಾಥ್ ಅವರು ಜೆಡಿಎಸ್ ಸೇರಿದ ಬಳಿಕ ನಡೆಯುತ್ತಿರುವ ಮೊದಲ ವಿಧಾನಸಭಾ ಚುನಾವಣೆ ಇದಾಗಿದೆ. ಹೀಗಾಗಿ ಮೈಸೂರು ಜಿಲ್ಲೆಯಲ್ಲಿ ಅದರಲ್ಲೂ ಕೆ.ಆರ್.ನಗರದಲ್ಲಿ ಜೆಡಿಎಸ್ ಗೆಲುವು ಸಾಧಿಸಿದರೆ ಅದರ ಕ್ರೆಡಿಟ್ ವಿಶ್ವನಾಥ್ ಅವರಿಗೆ ಸಿಗಲಿದೆ.
(ಚಿತ್ರ: ಸಾರಾ ಮಹೇಶ್, ಹೊಸಹಳ್ಳಿ ವೆಂಕಟೇಶ್)
ಸಾರಾ ಮಹೇಶ್-ವಿಶ್ವನಾಥ್ ಜುಗಲ್ಬಂದಿ
ಕೆ.ಆರ್.ನಗರದಲ್ಲಿ ಮೊದಲಿನಿಂದಲೂ ಸಾ.ರಾ.ಮಹೇಶ್ ಮತ್ತು ಎಚ್.ವಿಶ್ವನಾಥ್ ನಡುವೆ ಎಣ್ಣೆ ಸೀಗೆಕಾಯಿ ಸಂಬಂಧವಿತ್ತು. ಸಾ.ರಾ.ಮಹೇಶ್ ಅವರನ್ನು ವಿರೋಧಿಸುತ್ತಲೇ ಬಂದಿದ್ದ ವಿಶ್ವನಾಥ್ ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಜೆಡಿಎಸ್ನತ್ತ ಮುಖ ಮಾಡಿದ್ದರಿಂದ, ಒಂದು ಕಾಲದ ವಿರೋಧಿಗಳು ಇದೀಗ ಮಿತ್ರರಾಗಿ ರಣರಂಗಕ್ಕೆ ಇಳಿದಿದ್ದಾರೆ. ಇವರ ಎದುರು ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ಪೈಪೋಟಿ ನೀಡಿ ಗೆಲ್ಲಲು ತಂತ್ರ, ಪ್ರತಿತಂತ್ರಗಳನ್ನು ನಡೆಸಿದ್ದಾರೆ.
ಈ ನಡುವೆ ಶಾಸಕ ಸಾ.ರಾ.ಮಹೇಶ್ ಅವರು ಸರ್ಕಾರದ ಕಾರ್ಯಕ್ರಮಗಳ ಜತೆಗೆ ಪಕ್ಷದ ಸಭೆಗಳನ್ನು ನಡೆಸಿ ಕಾರ್ಯಕರ್ತರು ಮತ್ತು ಮುಖಂಡರುಗಳನ್ನು ಒಗ್ಗೂಡಿಸಿದ್ದಾರೆ. ಅಲ್ಲದೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಬೃಹತ್ ಕಾರ್ಯಕರ್ತರ ಸಮಾವೇಶವನ್ನು ಇತ್ತೀಚೆಗೆ ನಡೆಸಿ ಯಶಸ್ಸು ಕಂಡಿದ್ದಾರೆ. ತಮ್ಮ ಸ್ವಂತ ಬಲದಿಂದ ತಾಲೂಕಿನ ಅಭಿವೃದ್ಧಿಗೆ ಸಾವಿರಾರೂ ಕೋಟಿ ರೂ.ಗಳ ಅನುದಾನವನ್ನೂ ಅವರು ತಂದಿದ್ದಾರೆ.
ಮಹೇಶ್ ಸೋಲಿಸಲು ಪಣತೊಟ್ಟ ರವಿಶಂಕರ್
ಇನ್ನು ಸಾ.ರಾ.ಮಹೇಶ್ ಅವರನ್ನು ಸೋಲಿಸಲೇಬೇಕೆಂದು ರಣತಂತ್ರ ಹೆಣೆದಿರುವ ಕಾಂಗ್ರೆಸ್ನ ಡಿ. ರವಿಶಂಕರ್ ಕಳೆದ ಆರು ತಿಂಗಳಿನಿಂದಲೇ ಪ್ರಚಾರ ನಡೆಸುತ್ತಿದ್ದಾರೆ. ಕಳೆದ ಅಕ್ಟೋಬರ್ 15 ರಂದು ಕೆ.ಆರ್.ನಗರದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಡಿ.ರವಿಶಂಕರ್ ಪಕ್ಷದ ಅಭ್ಯರ್ಥಿ ಎಂದು ಘೋಷಿಸಿದ್ದರು.
ಅವತ್ತಿನಿಂದಲೇ ಕಾರ್ಯಪ್ರವೃತ್ತರಾದ ಅವರು ಕ್ಷೇತ್ರದಲ್ಲಿ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡುತ್ತಲೇ ಬಂದಿದ್ದಾರೆ. ಇದೀಗ ಅಂದುಕೊಂಡಂತೆ ಅವರಿಗೆ ಟಿಕೆಟ್ ಸಿಕ್ಕಿದೆ. ಸಾ.ರಾ.ಮಹೇಶ್ ಅವರನ್ನು ಸೋಲಿಸಿ ಕಾಂಗ್ರೆಸ್ನ್ನು ಪ್ರತಿಷ್ಠಾಪಿಸುವ ಹುರುಪಿನಲ್ಲಿ ಅವರಿದ್ದಾರೆ. ಇಲ್ಲಿ ಬಿಜೆಪಿ ಮೂರನೇ ಸ್ಥಾನದಲ್ಲಿದೆ.
ತಂದೆ ಬಲದಲ್ಲಿ ಗೆಲುವಿನ ಕನಸು
ಕ್ಷೇತ್ರದಲ್ಲಿ ಕಾಂಗ್ರೆಸ್ನ ದೊಡ್ಡಸ್ವಾಮೇಗೌಡರಿಗೆ ಒಂದಷ್ಟು ಹೆಸರಿದೆ. ಕಳೆದ ಬಾರಿ ಕಣಕ್ಕಿಳಿದು ಸೋಲು ಕಂಡಿದ್ದರು. ಈ ಬಾರಿ ಅವರ ಪುತ್ರ ರವಿಶಂಕರ್ ಕಣಕ್ಕಿಳಿದಿದ್ದಾರೆ. ಒಂದಷ್ಟು ಅನುಕಂಪ ಮತ್ತೊಂದಷ್ಟು ಸಿದ್ದರಾಮಯ್ಯರವರ ಅಲೆ ಕೆಲಸ ಮಾಡಿದರೆ ಕಾಂಗ್ರೆಸ್ ಗೆಲುವು ಖಚಿತವಾಗಲಿದ್ದು ಆ ಮೂಲಕ ಸಾ.ರಾ.ಮಹೇಶ್ ಅವರ ಹ್ಯಾಟ್ರಿಕ್ ಗೆಲುವಿಗೆ ತಡೆಯೊಡ್ಡಬಹುದು ಎಂಬುದು ಕಾಂಗ್ರೆಸ್ಸಿಗರ ಲೆಕ್ಕಾಚಾರ.
ಆದರೆ ಮತದಾರರ ಏನು ಮಾಡುತ್ತಾನೆ ಎಂಬುದರ ಮೇಲೆ ಎಲ್ಲವೂ ನಿರ್ಧರಿತಗೊಳ್ಳಲಿದೆ.