ಎಚ್ಡಿ ಕೋಟೆ ಬಳಿ ವಿದ್ಯುತ್ ತಂತಿ ತಗುಲಿ ಸಲಗ ಸಾವು
ಎಚ್.ಡಿ.ಕೋಟೆ, ಮೇ 20 : ಬಂಡಿಪುರ ರಾಷ್ಟ್ರೀಯ ಉದ್ಯಾನಕ್ಕೆ ಸೇರಿದ ನುಗು ವಲಯಾರಣ್ಯದ ಹಾದನೂರು ಗ್ರಾಮದ ಜಮೀನೊಂದರಲ್ಲಿ ಗಂಡಾನೆಯೊಂದು ವಿದ್ಯುತ್ ತಂತಿಗೆ ಸಿಲುಕಿ ಮೃತಪಟ್ಟಿರುವ ಘಟನೆ ಗುರುವಾರ ರಾತ್ರಿ ನಡೆದಿದೆ.
ಹೆಡಿಯಾಲ ವಲಯದ ಕೊತ್ತನಹಳ್ಳಿ ಅರಣ್ಯದಿಂದ ಆಹಾರ ಅರಸಿ ಸುಮಾರು 40 ವರ್ಷದ ಗಂಡಾನೆಯೊಂದು ಬಳ್ಳೂರುಹುಂಡಿ ಗ್ರಾಮದ ಮಾರ್ಗವಾಗಿ ಹಾದನೂರಿನ ಗ್ರಾಮದ ಜಮೀನುಗಳಲ್ಲಿ ದಾಂಧಲೆ ನಡೆಸಿದೆ. ನುಗು ಅರಣ್ಯ ವಲಯಕ್ಕೆ ಪಲಾಯನ ಮಾಡುವ ಸಂದರ್ಭದಲ್ಲಿ ಕಂದಕವನ್ನು ದಾಟಲಾಗದೆ ಹಿಂತಿರುಗುವ ವೇಳೆ ವಣಕಾರಮ್ಮ ಎಂಬುವರ ಜಮೀನಿನಲ್ಲಿದ್ದ ವಿದ್ಯುತ್ ತಂತಿಗೆ ಸಿಲುಕಿ ಸಾವನ್ನಪ್ಪಿದೆ.
ಗುರುವಾರ ರಾತ್ರಿ ಹಾದನೂರು ಗ್ರಾಮದ ನಾಗಯ್ಯ ಹಾಗೂ ಕರಿಪುಟ್ಟಯ್ಯ ಎಂಬವರ ಜಮೀನಿಗೆ ನುಗ್ಗಿ ದಾಂಧಲೆ ಮಾಡಿದ ಕಾಡಾನೆ ಜಮೀನಿನಲ್ಲಿದ್ದ ಟೊಮ್ಯಾಟೋ ಹಾಗೂ ಹತ್ತಿಯನ್ನು ತಿಂದು ತುಳಿದು ನಾಶ ಮಾಡಿದೆ. ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರಿಂದ ಸಿಬ್ಬಂದಿ ಸ್ಥಳಕ್ಕೆ ಬಂದು ಕಾಡಾನೆಯನ್ನು ಕಾಡಿಗೆ ಅಟ್ಟುವ ಪ್ರಯತ್ನ ಮಾಡಿದ್ದಾರೆ. [ದುಬಾರೆ ಅರಣ್ಯ ಪ್ರವಾಸಿಗರಿಗೆ ಸ್ವರ್ಗ, ಗಿರಿಜನರಿಗೆ ನರಕ]
ಅರಣ್ಯ ಇಲಾಖೆ ಸಿಬ್ಬಂದಿ ಗ್ರಾಮಸ್ಥರ ಸಹಕಾರದಲ್ಲಿ ಆನೆಯನ್ನು ಕಾಡಿಗೆ ಓಡಿಸುತ್ತಿದ್ದ ವೇಳೆ ಆನೆ ಕಂದಕವನ್ನು ದಾಟಲು ಪ್ರಯತ್ನಿಸಿ ದಾಟಲಾಗದೆ ಹಿಂತಿರುಗಿ ಜನರತ್ತ ಬಂದಿದೆ. ರತ್ನಮ್ಮ ಅವರಿಗೆ ಸೇರಿದ ಜಮೀನಿನಲ್ಲಿದ್ದ ವಿದ್ಯುತ್ ಕಂಬವನ್ನು ಉರುಳಿಸಿ, ಕಂಬದ ಮೇಲೆ ಕಾಲಿಟ್ಟು ದಾಟುವಾಗ ವಿದ್ಯುತ್ ತಂತಿ ತಾಗಿ ಸ್ಥಳದಲ್ಲೇ ಸಾವನ್ನಪ್ಪಿದೆ. [ತಿಥಿ ಚಿತ್ರವಿಮರ್ಶೆ]
ಸ್ಥಳಕ್ಕೆ ಬಂದ ವೈದ್ಯ ಡಾ.ನಾಗರಾಜು ಮೃತ ಆನೆಯ ಮರಣೋತ್ತರ ಪರೀಕ್ಷೆ ನಡೆಸಿ ಬಳಿಕ ಆನೆಯ ಕಳೇಬರವನ್ನು ಜಮೀನಿನಲ್ಲಿ ಹೂಳಲಾಯಿತು. ಎಸಿಎಫ್ ಪೂವಯ್ಯ, ನುಗು ವಲಯದ ಆರ್ಎಫ್ಓ ಸುರೇಶ್ ಬಾಬು, ಹೆಡಿಯಾಲ ವಲಯದ ಸಂದೀಪ್, ಸರಗೂರು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸುರೇಶ್ ಹಾಗೂ ಸಿಬ್ಬಂದಿ ಸ್ಥಳದಲ್ಲಿ ಉಪಸ್ಥಿತರಿದ್ದರು. [ಕಾಡುಪ್ರಾಣಿಗಳ ಉಪಟಳದಿಂದ ನಗರ ಮಂದಿಗೆ ಮುಕ್ತಿ ಯಾವಾಗ?]