ವಿಷ ಪ್ರಸಾದ ಪ್ರಕರಣ: ಊರಿಗೆ ಕಿಚ್ಚುಗುತ್ತಿ ಎಂಬ ಹೆಸರು ಬಂದಿದ್ದು ಹೇಗೆ?
ಮೈಸೂರು, ಡಿಸೆಂಬರ್ 17 : ವಿಷ ಪ್ರಸಾದ ದುರಂತದಿಂದ ರಾಜ್ಯದಾದ್ಯಂತ ಸುದ್ದಿಯಾಗಿರುವ ಸುಳ್ವಾಡಿ ಸಮೀಪದ ಕಿಚ್ಚುಗುತ್ತಿ ಮಾರಮ್ಮನ ದೇವಸ್ಥಾನದ ಹೆಸರಿನಲ್ಲಿ ಬರುವ ಕಿಚ್ಚುಗುತ್ತಿ ಎಂಬ ಪದ ವಿಚಿತ್ರವಾಗಿ ಕೇಳಿಸುತ್ತದೆ.
ಸ್ಥಳೀಯವಾಗಿ ಕಿಚ್ಚುಗುತ್ತಿ, ಕಿಚ್ಕುತ್ ಎಂಬೆಲ್ಲ ಹೆಸರಿನಿಂದ ಕರೆಯಲಾಗುತ್ತಿದೆ. ಈ ಹೆಸರಿನ ಹಿಂದೆಯೂ ಐತಿಹ್ಯವಿದೆ ಎಂದು ಹೇಳುತ್ತಾರೆ ಊರಿನ ಹಿರಿಯರು. ದೇವಸ್ಥಾನ ಅಭಿವೃದ್ಧಿ 20-30 ವರ್ಷಗಳ ಹಿಂದೆ ಆಗಿದ್ದರೂ ಸಣ್ಣ ಗುಡಿಯಲ್ಲಿದ್ದ ಮಾರಮ್ಮನನ್ನು ಸ್ಥಳೀಯರು ಅದಕ್ಕಿಂತ ಮೊದಲೇ ಹಲವು ದಶಕಗಳಿಂದ ಪೂಜಿಸುತ್ತಿದ್ದರು ಎಂದು ಹೇಳಲಾಗುತ್ತಿದೆ.
ವಿಷ ಪ್ರಸಾದ ಪ್ರಕರಣ : ಮೃತರ ಸಂಖ್ಯೆ 14, ನಾಲ್ವರು ಶಂಕಿತರು ವಶಕ್ಕೆ
ಗ್ರಾಮಗಳ ನಿವಾಸಿಗಳಿಗೆ ಯಾವುದಾದರೂ ಕಾಯಿಲೆ ಬಂದರೆ, ಮಾರಮ್ಮನ ಗುಡಿಗೆ ಬಂದು ಬಿದಿರಿನ ಅಥವಾ ಅಂಕೋಲೆ ಮರದ ಕಡ್ಡಿಗಳನ್ನು ಗುತ್ತಿ ಒಟ್ಟಾಗಿ ಮಾಡಿ ಅದಕ್ಕೆ ಬೆಂಕಿ ಹಚ್ಚಲಾಗುತ್ತಿತ್ತು. ಇದೊಂದು ರೀತಿಯಲ್ಲಿ ಪಂಜಿನ ಸೇವೆಯಂತೆ ಭಾಸವಾಗುತ್ತಿತ್ತು.
ಹಲವು ವರ್ಷಗಳಿಂದ ಈ ಪದ್ಧತಿ ಜಾರಿಯಲ್ಲಿತ್ತು. ಇದರಿಂದಾಗಿ ಮಾರಮ್ಮನಿಗೆ ಕಿಚ್ಚು ಗುತ್ತಿ, ಕಿಚ್ಚುಗುತ್ತು ಮಾರಮ್ಮ ಎಂಬ ವಿಶೇಷಣ ಸೇರ್ಪಡೆಯಾಯಿತು ಎಂದು ಹೇಳುತ್ತಾರೆ ಹಿರಿಯರು. ದೇವಸ್ಥಾನಕ್ಕೆ ಒಂದು ತಲೆಮಾರಿನ ಇತಿಹಾಸವಿದೆ.
ಹನ್ನೊಂದು ಬಲಿಗೆ ಜಮೀನು ವಿವಾದವೇ ಕಾರಣವಾಯಿತೆ?
ಹಲವು ವರ್ಷಗಳ ಹಿಂದೆ ಇಲ್ಲಿ ಸಣ್ಣ ಗುಡಿ ಇತ್ತು. ಕಾಲ ಕ್ರಮೇಣ ಮಾರಮ್ಮನ ಕಾರಣಿಕ ಹೆಚ್ಚುತ್ತಾ ಹೋಯಿತು. ಹೆಚ್ಚು ಹೆಚ್ಚು ಭಕ್ತರು ಬರಲು ಆರಂಭಿಸಿದರು. ಇಲ್ಲಿಗೆ ಹರಕೆ ಹೊತ್ತು ಯಾವುದೇ ಕಾರ್ಯವನ್ನು ನೆನೆಸಿಕೊಂಡರೆ ಅದು ಈಡೇರುತ್ತದೆ ಎಂಬ ಬಲವಾದ ನಂಬಿಕೆ ಭಕ್ತರಲ್ಲಿದೆ ಎನ್ನುತ್ತಾರೆ ಸ್ಥಳೀಯ ಹಿರಿಯರು.
ಇಷ್ಟಾರ್ಥ ನೆರವೇರಿಸುವಂತೆ ಹರಕೆ ಹೊತ್ತು ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಅಲ್ಲದೆ, ಮೈಸೂರು, ಬೆಂಗಳೂರು ಜಿಲ್ಲೆಗಳಿಂದ ಅಲ್ಲದೆ, ತಮಿಳುನಾಡು ಭಾಗಗಳಿಂದಲೂ ಭಕ್ತರು ಬರುತ್ತಾರೆ. ಶಕ್ತಿ ದೇವತೆಯಾಗಿರುವ ಮಾರಮ್ಮನಿಗೆ ಭಕ್ತರು ಆಡುಗಳ ಬಲಿ ಕೊಟ್ಟು ಕೃತಾರ್ಥರಾಗುತ್ತಾರೆ. ಇತ್ತ ಡಿಸೆಂಬರ್ 14ರಂದು ಘಟನೆ ನಡೆದ ಬಳಿಕ ದೇವಸ್ಥಾನಕ್ಕೆ ಬೀಗ ಹಾಕಲಾಗಿದ್ದು, ಪೂಜೆಗಳು ನಡೆಯುತ್ತಿಲ್ಲ. ದೇವಾಲಯಕ್ಕೆ ಬರುವ ಭಕ್ತರು ಹೊರಗಿನಿಂದಲೇ ಕೈಮುಗಿದು ಹೋಗುತ್ತಿದ್ದಾರೆ.
ಕಿಚ್ಚುಗುತ್ತಿ ಮಾರಮ್ಮ ದೇಗುಲದ ಅಭಿವೃದ್ಧಿಯೇ ಭಕ್ತರ ಜೀವಕ್ಕೆ ಕುತ್ತಾಯಿತಾ?
ಈ ಹಿಂದೆ ದೇವಾಲಯದಲ್ಲಿ ಕಳ್ಳತನ ಪ್ರಕರಣಗಳು ನಡೆದಿದ್ದುದರಿಂದ, ಭದ್ರತೆಯ ದೃಷ್ಟಿಯಿಂದ ದೇವಾಲಯದ ಆವರಣದಲ್ಲಿ ನಾಲ್ಕು ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಆದರೆ, ಕೆಲವು ತಿಂಗಳುಗಳ ಹಿಂದೆ ಇವು ಕೆಟ್ಟು ಹೋಗಿದ್ದವು. ಅವುಗಳನ್ನು ದುರಸ್ತಿ ಮಾಡಿರಲಿಲ್ಲ. ಹೀಗಾಗಿ ಘಟನೆ ನಡೆದ ದಿನ ಏನಾಗಿರಬಹುದು ಎಂಬುದನ್ನು ಸುಲಭವಾಗಿ ಪತ್ತೆ ಮಾಡಬಹುದಾದ ಅವಕಾಶ ತಪ್ಪಿದೆ ಎಂದು ಹೇಳಲಾಗುತ್ತಿದೆ.