ಅದೆಲ್ಲ ಸರಿ, ಶ್ರೀನಿವಾಸ್ ಪ್ರಸಾದ್ ನಡೆ ಮಾತ್ರ ನಿಗೂಢ
ನಂಜನಗೂಡು ಉಪಚುನಾವಣೆ ಹೊಸ್ತಿಲಲ್ಲಿರುವಾಗ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ಪ್ರಸಾದ್ ನಿಗೂಢ ನಡೆಯ ಅರ್ಥವೇನು..? ಇಲ್ಲಿದೆ ಮಾಹಿತಿ.
ಮೈಸೂರು, ಮಾರ್ಚ್ 27 : ಬಹು ಪ್ರತಿಷ್ಠೆಯ ಕಣವಾದ ನಂಜನಗೂಡು ವಿಧಾನ ಸಭಾ ಕ್ಷೇತ್ರದ ಉಪಚುನಾವಣೆ ಏಪ್ರಿಲ್ 9 ಭಾನುವಾರದಂದು ನಡೆಯುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯ.
ಕಾಂಗ್ರೆಸ್ ಶಾಸಕರಾಗಿದ್ದ ಶ್ರೀನಿವಾಸ್ ಪ್ರಸಾದ್ ಅವರು ಬಿಜೆಪಿ ಸೇರಿದ್ದರಿಂದ ತೆರವಾಗಿರುವ ಸ್ಥಾನಕ್ಕೆ ನಡೆಯಲಿರುವ ಚುನಾವಣೆಗೆ ಈಗಾಗಲೇ ದಿನಗಣನೆ ಆರಂಭವಾಗಿದ್ದು, ಉಭಯ ರಾಷ್ಟ್ರೀಯ ಪಕ್ಷಗಳ ನಾಯಕರು ಇಡೀ ತಾಲೂಕಿನಾದ್ಯಂತ ಭರ್ಜರಿ ಪ್ರಚಾರ ನಡೆಸಿ, ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಲೇಬೇಕೆಂಬ ಪಣತೊಟ್ಟಿರುವಂತಿದೆ.[ಈ ಬಾರಿ ಯಾರಿಗೆ ಸಿಗಲಿದೆ ನಂಜುಂಡೇಶ್ವರ ಪ್ರಸಾದ ?]
ಆದರೆ ಕಮಲಪಾಳಯದ ನಾಯಕ, ಹಿರಿಯ ಮುತ್ಸದ್ದಿ ಶ್ರೀನಿವಾಸ್ ಪ್ರಸಾದ್ ಕೆಲವೇ ಕಾರ್ಯಕ್ರಮಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದಾರೆ. ಕೇವಲ ಮಾಧ್ಯಮಗಳಿಗೆ ಮಾತ್ರ ಕಾಣಸಿಗುತ್ತಿರುವ ಪ್ರಸಾದ್ ಗೆಲ್ಲುವ ಕಾರ್ಯತಂತ್ರವಾದರೂ ಏನು ಎಂಬುದು ಎಲ್ಲರ ಮನದಲ್ಲೂ ಕುತೂಹಲ ಹುಟ್ಟಿಸಿರುವ ಪ್ರಶ್ನೆ.
ಠಿಕಾಣಿ ಹೂಡಿದ ಬಿಜೆಪಿ ಘಟನಾಘಟಿಗಳು
ಉಪಚುನಾವಣೆಯಲ್ಲಿ ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಲೇಬೇಕೆಂದು ಶತಾಯಗತಾಯ ಪಣತೊಟ್ಟಿರುವ ಕಮಲ ಪಾಳಯ ಬಿಜೆಪಿ ನಾಯಕ ಯಡಿಯೂರಪ್ಪರನ್ನೇ ಪ್ರಚಾರಕ್ಕಾಗಿ ನೇಮಕಗೊಳಿಸಿದೆ. ಮಾಜಿ ಶಾಸಕರು, ಮುಖಂಡರ ದಂಡು ಪ್ರಚಾರ ಕಾರ್ಯದಲ್ಲಿ ತೊಡಗಿದ್ದು, ಪ್ರಸಾದ್ ಮಾತ್ರ ಸುಮ್ಮನಿರುವುದು ಅಚ್ಚರಿ ಮೂಡಿಸಿದೆ. ಇಡೀ ರಾಜ್ಯದ ಗಮನಸೆಳೆದಿರುವ ಉಪಚುನಾವಣೆಯಲ್ಲಿ ಸ್ವಾಭಿಮಾನದ ಸವಾಲನ್ನು ಒಡ್ಡಿರುವ ಪ್ರಸಾದ್ ತಮ್ಮ ಎದುರಾಳಿಗಳ ಬ್ರಹ್ಮಾಸ್ತ್ರ ನೋಡುತ್ತಿದ್ದರೂ ಸುಮ್ಮನಿರುವುದು ಅಚ್ಚರಿತಂದಿದೆ.[ನಂಜನಗೂಡು ಗೆಲುವಿಗೆ ಬಿಜೆಪಿ-ಕಾಂಗ್ರೆಸ್ ನಿಂದ ಜಾತಿ ಲೆಕ್ಕಾಚಾರ]
ಕುಳಿತಲ್ಲಿಯೇ ಎಲ್ಲವನ್ನು ವೀಕ್ಷಿಸುತ್ತಿದ್ದಾರೆ!
ಹಲವರ ಪ್ರಕಾರ ಶ್ರೀನಿವಾಸ್ ಪ್ರಸಾದ್ ಇನ್ನೂ ಚುನಾವಣಾ ಕಣಕ್ಕಿಳಿದಿಲ್ಲ ಎಂಬ ಮಾತು ಕೇಳಿ ಬರುತ್ತಿದೆ, ಆದರೆ ಇದನ್ನು ನಿರಾಕರಿಸಿರುವ ಪ್ರಸಾದ್, ಸ್ವತಃ ತಾವೇ ನಂಜನಗೂಡಿಗೆ ದಿನನಿತ್ಯವೂ ಬೆಳಿಗ್ಗೆ 11 ಗಂಟೆ ಆಸುಪಾಸಿಗೆ ಬಂದು ಕ್ಷೇತ್ರದ ಕುರಿತು ಮಾಹಿತಿ ಪಡೆಯುತ್ತೇನೆ ಎಂದು ಒನ್ಇಂಡಿಯಾಕ್ಕೆ ತಿಳಿಸಿದ್ದಾರೆ. ಇನ್ನು ಪ್ರತಿನಿತ್ಯವೂ ಇಲ್ಲಿನ ಜನರ ಸಮಸ್ಯೆಗಳನ್ನು ಆಲಿಸಿ, ನನ್ನನ್ನು ಗೆಲ್ಲಿಸಿದಲ್ಲಿ ಅವೆಲ್ಲವನ್ನೂ ಬಗೆಹರಿಸುವ ಭರವಸೆ ನೀಡುತ್ತೇನೆ ಎಂದಿದ್ದಾರೆ.[ಲೂಟಿ ಹಣದಿಂದ ಓಟು ಕೇಳಿದರೆ ಸುಮ್ಮನಿರೋಲ್ಲ: ಬಿಎಸ್ ವೈ ನಂಜನಗೂ]
ಪ್ರತಿಪಕ್ಷದ ತಂತ್ರದೆಡೆಗೂ ಗಮನ
ನಾನು ಕೇವಲ ನಮ್ಮ ಪಕ್ಷದ ಪ್ರಚಾರದ ಕಡೆಯಷ್ಟೇ ಗಮನಕೊಡುವುದಿಲ್ಲ. ಬೇರಾವ ಪಕ್ಷ ಯಾವ ರೀತಿ ಪ್ರತಿತಂತ್ರಗಳನ್ನು ರೂಪಿಸುತ್ತದೆ ಎಂಬು ಮಾಹಿತಿ ಕಲೆಹಾಕುತ್ತೇನೆ. ನಮ್ಮ ಕಾರ್ಯಕರ್ತರಿಗೆ ಮತಯಾಚನೆಯ ಕುರಿತಾಗಿ ಸಲಹೆ ಸೂಚನೆಯನ್ನು ನೀಡುತ್ತೇನೆ. ನನ್ನ ಅನಾರೋಗ್ಯದ ಹಿನ್ನೆಲೆ ಪಟ್ಟಣಗಳಿಗೆ ಹೋಗಲಾಗದಿದ್ದೂರು ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತೇನೆ ಎನ್ನುತ್ತಾರೆ.[ಸಿಎಂ ವಿರುದ್ದ ಮಾನನಷ್ಟ ಮೊಕದ್ದಮೆ ಹೂಡುವೆ: ಬಿಎಸ್ ವೈ]
ಕೊನೆಯ ವಾರ ಭೇಟಿ?
40 ವರುಷ ನಂಜನಗೂಡು ಕ್ಷೇತ್ರ ಪ್ರಸಾದ್ ಅವರನ್ನು ಬಲವಾಗಿ ಕೈ ಹಿಡಿದಿದೆ ಎಂಬ ವಿಶ್ವಾಸದಿಂದಲೇ ಅವರು ತಾಳ್ಮೆಯಿಂದಿದ್ದಾರೆ ಎನ್ನಲಾಗಿದೆ. ಮತದಾರರನ್ನು ಒಲಿಸಿಕೊಳ್ಳಲು ಹಗಲಿರುಳು ಸಿಎಂ ಸೇರಿದಂತೆ ಕಾಂಗ್ರೆಸ್ ಶ್ರಮಿಸುತ್ತಿದ್ದರೂ ಪ್ರಸಾದ್ ಮಾತ್ರ ಸುಮ್ಮನೆಯೇ ಇದ್ದಾರೆ. ಚುನಾವಣೆ ಒಂದು ವಾರ ಇರುವಾಗ ಪ್ರಸಾದ್ ಅವರು ಹಳ್ಳಿಗಳಿಗೆ ತೆರಳುವ ಯೋಜನೆಯಲ್ಲಿದ್ದಾರೆ ಎಂಬುದು ಬಲ್ಲ ಮೂಲಗಳ ಮಾಹಿತಿ.
ಜನರೊಂದಿಗೆ ಆತ್ಮೀಯ ಒಡನಾಟ
ಚಾಮರಾಜನಗರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ನಂಜನಗೂಡು ಕ್ಷೇತ್ರ ಪ್ರಸಾದ್ ಅವರಿಗೆ ಹೆಚ್ಚು ಒಡನಾಟ, ಆತ್ಮೀಯತೆಯುಳ್ಳ ಕ್ಷೇತ್ರವಾಗಿರುವುದೇ ಅವರು ಸ್ವಲ್ಪ ನಿರುಮ್ಮಳ ವಾಗಿರಲು ಕಾರಣ ಎಂದು ಅವರ ಹತ್ತಿರದ ಒಡನಾಡಿಗಳು ಹೇಳುತ್ತಾರೆ. ಕ್ಷೇತ್ರದ ಯಾವುದೇ ಊರು, ಕೇರಿಗಳಿಗೆ ಹೋದರೂ ಇಂಥವರೇ ಇವರು ಎನ್ನುವಂತೆ ಹೆಸರು ಹಿಡಿದು ಕೂಗಿ ಮಾತನಾಡುವಷ್ಟು ಬಲ್ಲವರು. ಯಾವ್ಯಾವ ಊರಿನಲ್ಲಿ ಎಷ್ಟು ಮತ ಬೀಳಲಿದೆ ಎಂಬ ಅರಿವು ಅವರಿಗಿರುವುದರಿಂದಲೇ ಅವರು ಪ್ರಶಾಂತವಾಗಿದ್ದಾರೆ ಎಂಬುದು ಬಲ್ಲವರ ಮಾತು.[ಗೂಟದ ಕಾರು ನೆನಪಾಗಿ ಗೀತಾ ಚುನಾವಣೆಗೆ:ಹೇಳಿಕೆ ಹಿಂಪಡೆದ ಪ್ರತಾಪ್ ಸಿಂಹ]
ವಿಜಯಮಾಲೆ ಧರಿಸುತ್ತಾರಾ?
ಒಟ್ಟಾರೆ ಏಪ್ರಿಲ್ 13, ಗುರುವಾರದಂದು ಹೊರಬೀಳಲಿರುವ ಫಲಿತಾಂಶದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕಳಲೆ ಕೇಶವಮೂರ್ತಿ ಅವರನ್ನು ಸೋಲಿಸಿ, ಶ್ರೀನಿವಾಸ್ ಪ್ರಸಾದ್ ವಿಜಯಮಾಲೆ ಧರಿಸುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.