'ಸಮನ್ವಯ ಸಮಿತಿಗೆ ನನ್ನನ್ನು ಬರಬೇಡಿ ಎನ್ನಲು ಸಿದ್ದರಾಮಯ್ಯ ಯಾರು?'
Recommended Video
ಮೈಸೂರು, ಆಗಸ್ಟ್ 27 : "ಸಮನ್ವಯ ಸಮಿತಿ ಸಭೆಗೆ ನನ್ನನ್ನು ಬರಬೇಡಿ ಎನ್ನಲು ಯಾರಿಂದಲೂ ಸಾಧ್ಯವಿಲ್ಲ. ನನ್ನನ್ನು ಬರಬೇಡಿ ಎನ್ನಲು ಅವರ್ಯಾರು?" ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಚಾಟಿ ಬೀಸಿದ್ದಾರೆ.
ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮ್ಮಿಶ್ರ ಸರಕಾರದಲ್ಲಿ ಅಭಿವೃದ್ಧಿ ಕಷ್ಟ. ಸಮ್ಮಿಶ್ರ ಸರಕಾರ ಎಂದ ಮೇಲೆ ವ್ಯತ್ಯಾಸ ಇದ್ದೇ ಇರುತ್ತದೆ. ಸಮನ್ವಯ ಸಮಿತಿ ಸಭೆಗೆ ನನ್ನನ್ನು ಬರಬೇಡಿ ಎನ್ನಲು ಯಾರಿಂದಲೂ ಸಾಧ್ಯವಿಲ್ಲ. ಈ ಕೂಡಲೇ ಸಮನ್ವಯ ಸಮಿತಿ ಸಭೆ ಕರೆಯಬೇಕು. ಕೊಡಗು ಪ್ರವಾಹದ ಬಗ್ಗೆ ಚರ್ಚಿಸಬೇಕು ಎಂದು ಆಗ್ರಹಿಸಿದರು.
ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ಗೆ ತಂದವರು ಯಾರು? ಅವರೇ ಹೇಳಿದ್ದಾರೆ ನೋಡಿ
ಒಂದು ಜೆಡಿಎಸ್, ಮತ್ತೊಂದು ಕಾಂಗ್ರೆಸ್. ಎರಡೂ ಪಕ್ಷಗಳ ಸಾಮಾನ್ಯ ಕಾರ್ಯಕ್ರಮಗಳನ್ನು ಸಮನ್ವಯ ಮಾಡುವ ಸಲುವಾಗಿಯೇ ಸಮಿತಿ ರಚನೆಯಾಗಿದೆ. ಈ ಸಭೆಗೆ ಎರಡೂ ಪಕ್ಷಗಳ ರಾಜ್ಯಾಧ್ಯಕ್ಷರು ಇರಲೇಬೇಕು. ಸಭೆಯಲ್ಲಿ ಪ್ರಮುಖವಾಗಿ ನಾನು ಹಾಗೂ ಗುಂಡೂರಾವ್ ಇದ್ದರೆ ಮಾತ್ರ ಸಮನ್ವಯ ಸಮಿತಿ ಪೂರ್ಣವಾಗುವುದು. ನನ್ನನ್ನು ಸಮಿತಿಗೆ ಬರಬೇಡಿ ಎನ್ನುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ ಎಂದು ತಿಳಿಸಿದರು.
ಬಿಜೆಪಿ, ಜೆಡಿಎಸ್ ಅಧಿಕಾರಾವಧಿಯಲ್ಲಿ ಮೈಸೂರು ಅಭಿವೃದ್ದಿಯಾಗಿಲ್ಲ ಎಂದು ಹೇಳಿಕೆ ನೀಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯಗೆ ತಿರುಗೇಟು ನೀಡಿದ ಅವರು, ಸಾಗಿ ಬಂದ ದಾರಿಯನ್ನು ಅವರು ಮರೆಯಬಾರದು. ಈಗಾಗಲೇ ಕಾಂಗ್ರೆಸ್ ಹಾಗೂ ಜೆಡಿಎಸ್ ಮದುವೆ ಆಗಿದೆ. ಹೀಗಾಗಿ ಅವರ ಹೇಳಿಕೆಗಳ ಬಗ್ಗೆ ಹೆಚ್ಚಾಗಿ ಮಾತನಾಡಲು ಆಗುವುದಿಲ್ಲ ಎಂದರು.
ಈ ಮೊದಲು ಮಹಾನಗರ ಪಾಲಿಕೆಯಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿಯೊಂದಿಗೆ ಅಧಿಕಾರ ನಡೆಸಿದ್ದವು. ಆದರೆ ನಿರೀಕ್ಷೆಗೆ ಮೀರಿದ ಯಾವುದೇ ಕೆಲಸಗಳು ಮೈತ್ರಿ ಕೂಟದಿಂದ ನೆರವೇರಲಿಲ್ಲ. ಮುಂದಿನ ಚುನಾವಣೆಯಲ್ಲಿ ಮೈಸೂರಿನಲ್ಲಿ ಜೆಡಿಎಸ್ ಮಹಾನಗರದ ಚುಕ್ಕಾಣಿಯನ್ನು ಹಿಡಿದೇ ಹಿಡಿಯುತ್ತದೆ. ಆಗ ಮೈಸೂರಿನ ಅಭಿವೃದ್ಧಿಯನ್ನು ಮಾಡಿ ತೋರಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.