ಸಮಾಜ ಸೇವೆಯಿಂದ ಕೊರತೆ ನಿರ್ಣಾಮ: ಲೀಲಾ ಅಪ್ಪಾಜಿ
ಮೈಸೂರು, ಜನವರಿ 30: ಸೇವೆ ಮಾಡಬೇಕೆಂಬ ಮನಸ್ಸು ಇರುವಲ್ಲಿ ಕೊರತೆಗಳು ಕಾಣಿಸುವುದಿಲ್ಲ. ಇಂದಿನ ಯುವಜನತೆ ಹೆಚ್ಚೆಚ್ಚು ಸೇವಾ ಮನೋಭಾವ ರೂಡಿಸಿಕೊಳ್ಳಬೇಕು ಎಂದು ನಿವೃತ್ತ ಪ್ರಾಚಾರ್ಯ ಡಾ.ಲೀಲಾ ಅಪ್ಪಾಜಿ ಹೇಳಿದರು.
ಮೈಸೂರಿನ ಮಹಾರಾಣಿ ಕಾಲೇಜಿನ ಒಳ ಆವರಣದಲ್ಲಿ ಕನ್ನಡ ವಿಭಾಗ ಹಾಗೂ ಸಾಂಸ್ಕೃತಿಕ ವೇದಿಕೆಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಸರ್ವೋದಯ ದಿನಾಚರಣೆ ಮತ್ತು ಗಾಂಧೀಜಿ ಜೀವನ ಪ್ರದರ್ಶನ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಪಾಲ್ಗೊಂಡು ಮಾತನಾಡಿದರು.[ಮಹಾತ್ಮ ಗಾಂಧೀಜಿ ಹತ್ತಿದ ಟ್ರೇನ್ನಲ್ಲಿ ಮೋದಿ ಸುತ್ತಾಟ]
ಗಾಂಧೀಜಿಯವರು ಸಮಾಜಸೇವೆಯನ್ನೇ ಮುಖ್ಯ ಗುರಿಯನ್ನಾಗಿಟ್ಟುಕೊಂಡಿದ್ದರು. ಅವರಿಗೆ ಏನೇ ತೊಂದರೆಗಳು ಎದುರಾದರೂ ಸಮಾಜಸೇವೆಯನ್ನು ಮಾತ್ರ ಅವರು ಎಂದಿಗೂ ಮರೆತಿರಲಿಲ್ಲ. ಯಾರಲ್ಲಿ ಸಮಾಜ ಸೇವೆಯನ್ನು ಮಾಡುವ ಮನಸ್ಸು ಇರುತ್ತದೆಯೋ ಅವರಲ್ಲಿ ಕೊರತೆಗಳು ಕಾಣಲಾರವು ಎಂದು ಹೇಳುತ್ತಿದ್ದುದನ್ನು ಸ್ಮರಿಸಿದರು.
ಧರ್ಮವನ್ನು ದೇವರು ಮಾಡಲಿಲ್ಲ. ಆದರೆ ಆತ ಮನುಷ್ಯನನ್ನು ಸೃಷ್ಠಿಸಿದ. ಕಾಲಚಕ್ರ ಉರುಳಿದಂತೆ ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಏನು ಬೇಕಾದರು ಮಾಡಲು ಮುಂದಾಗಿರುವುದು ಅತ್ಯಂತ ಶೋಚನೀಯ ಸಂಗತಿ ಎಂದರು. ಗಾಂಧೀಜಿ ಅವರ ಕುರಿತ 500ಕ್ಕೂ ಹೆಚ್ಚು ಛಾಯಾಚಿತ್ರಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.