ಚಾಮರಾಜನಗರದಲ್ಲಿ ಕಾಡು ಪ್ರಾಣಿಗಳು ಸಾವನ್ನಪ್ಪಲು ಕಾರಣವೇನು?
ಮೈಸೂರು, ಡಿಸೆಂಬರ್,05: ಚಾಮರಾಜನಗರ ವ್ಯಾಪ್ತಿಯ ಬಂಡೀಪುರ ರಾಷ್ಟ್ರೀಯ ಉದ್ಯಾನವನ ಹಾಗೂ ಹುಲಿ ಯೋಜನೆ ವ್ಯಾಪ್ತಿಯಲ್ಲಿ ಕಾಡಾನೆ, ಹುಲಿ, ಜಿಂಕೆ ಮುಂತಾದ ಪ್ರಾಣಿಗಳ ಸರಣಿ ಸಾವು ಇತ್ತೀಚೆಗೆ ಹೆಚ್ಚಾಗುತ್ತಿದ್ದು ಇದಕ್ಕೆ ಕಾರಣ ಏನು ಎಂಬ ಪ್ರಶ್ನೆಗೆ ಉತ್ತರ ನಿಗೂಢವಾಗಿ ಉಳಿದು ಹೋಗುತ್ತಿದೆ.
ಬಂಡೀಪುರ ರಾಷ್ಟೀಯ ಉದ್ಯಾನವನ ವ್ಯಾಪ್ತಿಯಲ್ಲಿ ಪ್ರಾಣಿಗಳ ಸಾವಿನ ಸುದ್ದಿಗಳು ಆಗಾಗ್ಗೆ ಕೇಳಿ ಬರುತ್ತಲೇ ಇದೆ. ಇದೀಗ ಇದೇ ವ್ಯಾಪ್ತಿಯ ಮೂಲೆಹೊಳೆ ವಲಯದ ರಾಂಪುರ ಬೀಟ್ ನಲ್ಲಿ ಚಿರತೆ ಸಾವನ್ನಪ್ಪಿದೆ. ಇದು ಕಾಡುಹಂದಿ ದಾಳಿಗೆ ಸಿಲುಕಿ ಸಾವನ್ನಪ್ಪಿದೆ ಎಂದು ಅರಣ್ಯ ಇಲಾಖೆ ಮೂಲಗಳು ಹೇಳುತ್ತಿವೆ.[ಚಿತ್ರಗಳು : ಎಚ್.ಡಿ.ಕೋಟೆಯಲ್ಲಿ ವ್ಯಾಘ್ರ ಗುಂಡೇಟಿಗೆ ಬಲಿ]
ಅರಣ್ಯದಲ್ಲಿ ಪ್ರಾಣಿಗಳಿಗೆ ರಕ್ಷಣೆ ಇಲ್ಲವೆ ಎನ್ನುವ ಸಂದೇಹ ಮೂಡುತ್ತಿದೆ. ಸ್ವಯಂ ಸೇವಾ ಸಂಸ್ಥೆಗಳು ಅರಣ್ಯದಲ್ಲಿನ ಪ್ರಾಣಿ ಸಂಕುಲಗಳನ್ನು ಸಂರಕ್ಷಿಸುವ ಸಲುವಾಗಿ ಕೆಲಸ ಕಾರ್ಯ ಮಾಡುತ್ತಿವೆ. ಇಷ್ಟಕ್ಕೂ ಕಾಡಿನಲ್ಲಿರುವ ಪ್ರಾಣಿಗಳನ್ನು ರಕ್ಷಿಸಲು ಸೇವಾ ಸಂಸ್ಥೆ ಬೇಕಾ? ಅರಣ್ಯದಲ್ಲಿ ಪ್ರಾಣಿಗಳು ಬದುಕಲು ಒಳ್ಳೆಯ ವಾತಾವರಣ ನಿರ್ಮಿಸಿ ಕೊಟ್ಟರೆ ಸಾಕಲ್ಲವೆ? ಎಂದು ಜನ ಕೇಳುತ್ತಿದ್ದಾರೆ.
ಪ್ರಾಣಿಗಳ ಚರ್ಮ, ಉಗುರು, ಮೂಳೆ ಹೀಗೆ ಪ್ರಾಣಿಗಳ ಪ್ರತಿ ಅಂಗಾಗಕ್ಕೂ ಬೇಡಿಕೆ ಇರುವುದರಿಂದ ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವರು ಅರಣ್ಯ ಸ್ವಯಂ ಸೇವಾ ಕಾರ್ಯಕರ್ತರು ಎಂಬ ವೇಷದಲ್ಲಿ ಅಕ್ರಮ ಚಟುವಟಿಕೆ ನಡೆಸುತ್ತಿದ್ದಾರಾ? ಎಂಬ ಸಂಶಯ ಮೂಡುತ್ತಿದ್ದು ಇದನ್ನು ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲದಂತಾಗಿದೆ.[ಭಾರತದಲ್ಲಿ ಅಳಿವಿನ ಅಂಚಿನಲ್ಲಿದೆಯಾ ಹುಲಿ ಸಂತತಿ?]
ಕಳೆದ ತಿಂಗಳಷ್ಟೇ ಚಾಮರಾಜನಗರ ತಾಲೂಕಿನ ಬಿಳಿಗಿರಿ ರಂಗನ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯಲ್ಲಿ ರಸ್ತೆಯಲ್ಲೇ ಹೆಣ್ಣು ಹುಲಿ ಸಾವನ್ನಪ್ಪಿತ್ತು. ಕಳೆದೊಂದು ವರ್ಷದಲ್ಲಿ ಜಿಲ್ಲೆಯಲ್ಲಿ ಹಲವು ಕಾಡುಪ್ರಾಣಿಗಳ ಜೀವಹೋಗಿವೆ. ಹೀಗಾಗಿ ಸ್ವಯಂ ಸೇವಾ ಸಂಸ್ಥೆಗಳ ಹೆಸರು ಹೇಳಿಕೊಂಡು ಅರಣ್ಯದೊಳಗೆ ಕಾಲಿಡುವ ಕೆಲವು ಕಾರ್ಯಕರ್ತರ ಮೇಲೆ ನಿಗಾ ವಹಿಸುವ ಅಗತ್ಯವಿದೆ. ಅಷ್ಟೇ ಅಲ್ಲದೆ ಪ್ರಾಣಿಗಳ ಸಾವಿನ ಹಿಂದೆ ಅಡಗಿರುವ ನಿಗೂಢತೆಯನ್ನು ಸಂಬಂಧಿಸಿದ ಅಧಿಕಾರಿಗಳು ಬಯಲಿಗೆ ಎಳೆಯಬೇಕಾಗಿದೆ.