ಇನ್ನೂ ಬೇಸಿಗೆ ದೂರವಿದೆ, ಕಾಡಿನಲ್ಲಿ ನೀರಿಲ್ಲ, ಪ್ರಾಣಿಗಳಿಗೆ ಮೇವಿಲ್ಲ
ಮೈಸೂರು, ನವೆಂಬರ್ 2: ವನ್ಯ ಪ್ರಾಣಿಗಳು ನಾಡಿಗೆ ಬಂದು ರೈತರಿಗೆ ಉಪಟಳ ನೀಡುತ್ತಿರುವ ಆರೋಪ ಇಂದು, ನಿನ್ನೆಯದಲ್ಲ. ಹಲವು ವರ್ಷಗಳಿಂದ ಕೇಳುತ್ತಲೇ ಇದೆ. ವನ್ಯಪ್ರಾಣಿಗಳ ಹಾವಳಿಗೆ ಬೆಳೆ ಕಳೆದುಕೊಂಡು ನಷ್ಟ ಮಾಡಿಕೊಂಡ ರೈತರ ಉದಾಹರಣೆಗಳೂ ಇವೆ. ಇಷ್ಟಕ್ಕೂ ಅರಣ್ಯದಿಂದ ಕಾಡಾನೆಗಳು ಸೇರಿದಂತೆ ಚಿರತೆ, ಹುಲಿ, ಕಾಡುಹಂದಿಗಳು ನಾಡಿನತ್ತ ಏಕೆ ಬರುತ್ತವೆ ಎಂಬುವುದಕ್ಕೆ ಮೇವಿನ ಕೊರತೆ ಎಂಬ ಉತ್ತರವೇ ಪ್ರಮುಖವಾಗಿ ಕೇಳಿಬರುತ್ತದೆ.
ಹಲಸು, ಅರಳಿ ಮೊದಲಾದ ಕಾಡುಮರಗಳು ಇಲ್ಲದಿರುವುದು, ಬಿದಿರು ಹೂ ಬಂದು ನಾಶವಾಗಿರುವುದು. ಇ ಎಲ್ಲವೂ ಕಾಡುಪ್ರಾಣಿಗಳು ನಾಡಿಗೆ ಬರಲು ಕಾರಣವಾಗಿವೆ. ಈ ನಡುವೆ ಮತ್ತೊಂದು ಬೆಚ್ಚಿಬೀಳಿಸುವ ಸಂಗತಿ ಏನೆಂದರೆ, ಅರಣ್ಯದಲ್ಲಿ ನೀರಿನ ಕೊರತೆಯೂ ಪ್ರಾಣಿಗಳನ್ನು ಅರಣ್ಯ ಬಿಡುವಂತೆ ಮಾಡುತ್ತಿದೆ.[ಚಿಕ್ಕಬಳ್ಳಾಪುರದಲ್ಲಿ ರಾಜೇಂದರ್ ಸಿಂಗ್ 'ನೀರಿನ ದೀಪಾವಳಿ']
ಕೆಲ ವರ್ಷಗಳಿಂದ ಮಳೆಯ ಪ್ರಮಾಣ ಕ್ಷೀಣಿಸುತ್ತಿದೆ. ಪರಿಣಾಮ ಅರಣ್ಯದ ನಡುವೆ ಇರುವ ಕೆರೆ-ಕಟ್ಟೆಗಳು ತುಂಬುತ್ತಿಲ್ಲ. ಆದ್ದರಿಂದ ನೀರು, ಮೇವನ್ನು ಹುಡುಕಿಕೊಂಡು ಹೋಗುವುದು ಪ್ರಾಣಿಗಳಿಗೆ ಅನಿವಾರ್ಯವಾಗಿದೆ. ಈ ವರ್ಷ ಮುಂಗಾರು ಮಳೆ ಸುರಿಯಲೇ ಇಲ್ಲ. ಪರಿಣಾಮ ಅರಣ್ಯದ ನಡುವೆ ಇರುವ ಕೆರೆ-ಕಟ್ಟೆಗಳು ತುಂಬಿಲ್ಲ. ಇರುವ ನೀರು ಬೇಸಿಗೆ ಬರುವ ಮುನ್ನವೇ ಬತ್ತುತ್ತಿದೆ.
ಅದರಲ್ಲೂ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿರುವ ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿರುವ ಕೆಲವು ಕೆರೆಗಳಲ್ಲಿ ದಿನದಿಂದ ದಿನಕ್ಕೆ ನೀರಿನ ಪ್ರಮಾಣ ಕಡಿಮೆ ಆಗುತ್ತಿದೆ. ನೀರಿನ ಸೆಲೆ ಹುಡುಕಿ ಬರುವ ಕಾಡಾನೆಗಳು ಬತ್ತಿರುವ ಕೆರೆಗಳನ್ನೇ ನೋಡುವಂತಾಗಿದೆ.[ನೀರಿಗಾಗಿ ಕಾಲಿಗೆ ಬಿದ್ದರೂ ಸಮಸ್ಯೆ ಪತ್ರಕರ್ತರಿಂದ ಅಂತಾರೆ ಸಚಿವರು]
ಬಿಸಿಲಿನ ಧಗೆಗೆ ನೀರಿನಲ್ಲಿ ಹೊರಳಾಡಿ, ಮೈ ತಂಪು ಮಾಡಿಕೊಳ್ಳಲು ಕೊಳಗಳ ಬಳಿ ಬರುವ ಕಾಡಾನೆಗಳ ಹಿಂಡು ಹಾಗೇ ಹಿಂತಿರುಗುತ್ತಿವೆ. ಈಗಲೇ ಹೀಗಾದರೆ ಮುಂದಿನ ಬೇಸಿಗೆಯಲ್ಲಿ ಈ ಪ್ರಾಣಿಗಳ ಸ್ಥಿತಿ ಏನಾಗಬಹುದೋ ಎಂಬ ಆತಂಕ ಎಲ್ಲರನ್ನೂ ಕಾಡುತ್ತಿದೆ. ಮನುಷ್ಯ ತನಗೆ ಬೇಕಾದುದನ್ನು ಹೋರಾಡಿ ಪಡೆಯುತ್ತಾನೆ. ಆದರೆ ಮೂಕ ಪ್ರಾಣಿಗಳು ತಾನೆ ಏನು ಮಾಡಲು ಸಾಧ್ಯ?[ಬೆಂಗಳೂರಿನಲ್ಲಿ ವೇಸ್ಟ್ ಆಗ್ತಿದೆ ಶೇ 50ರಷ್ಟು ಕಾವೇರಿ ನೀರು]
ಈಗಿನಿಂದಲೇ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳದೆ ಹೋದರೆ ಅರಣ್ಯದಲ್ಲಿರುವ ಪ್ರಾಣಿಗಳು ಕುಡಿಯಲು ನೀರು ಸಿಗದೆ ಸಾಯುವ ಪರಿಸ್ಥಿತಿ ಬರಬಹುದು. ಅದಕ್ಕೂ ಮುನ್ನ ಎಚ್ಚೆತ್ತುಕೊಳ್ಳಬೇಕಾಗಿದೆ.