ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಲಾಬಿ ಪ್ರಶ್ನೆಯೇ ಇಲ್ಲ: ಎಚ್. ವಿಶ್ವನಾಥ್
ಮೈಸೂರು, ಜುಲೈ.23: ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಲಾಬಿ ಪ್ರಶ್ನೆಯೇ ಇಲ್ಲ. ವರಿಷ್ಠ ದೇವೇಗೌಡರು ಸ್ಥಾನ ವಹಿಸಿಕೊಳ್ಳಲೇಬೇಕು ಎಂದರೆ ವಹಿಸಿಕೊಳ್ಳುವೆ ಎಂದು ಹುಣಸೂರು ಶಾಸಕ ಎಚ್.ವಿಶ್ವನಾಥ್ ಪ್ರತಿಕ್ರಿಯೆ ನೀಡಿದ್ದಾರೆ.
ಜೆಡಿಎಸ್ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಮಾತನಾಡಿದ ಅವರು, ನನ್ನ ಆರೋಗ್ಯ ಸಮಸ್ಯೆ ಹುದ್ದೆ ನಿಭಾಯಿಸಲು ತೊಡಕಾಗಬಹುದು. ಅಧ್ಯಕ್ಷ ಸ್ಥಾನ ವಹಿಸಿಕೊಂಡ ಮೇಲೆ ರಾಜ್ಯ ಸುತ್ತಿ ಪಕ್ಷ ಸಂಘಟನೆ ಮಾಡಬೇಕಾಗುತ್ತದೆ.
ನಾನ್ಯಾಕೆ ನನ್ನ ಇಲಾಖೆ ಬಿಟ್ಟು ಬೇರೆ ಇಲಾಖೆಗಳಲ್ಲಿ ತಲೆ ಹಾಕಲಿ: ರೇವಣ್ಣ
ಈ ವಿಚಾರವನ್ನು ನಾನು ಕೇವಲ ಮಾಧ್ಯಮಗಳಿಂದ ತಿಳಿದಿದ್ದೇನೆ. ಆದರೆ ಯಾವೊಬ್ಬ ವರಿಷ್ಠರೂ ನನ್ನ ಬಳಿ ಚರ್ಚೆ ನಡೆಸಿಲ್ಲ. ನನಗೆ ಸಿಎಂ ಕುಮಾರಸ್ವಾಮಿ ಜೊತೆಗಿದ್ದು, ಅವರ ಒತ್ತಡ ಕಡಿಮೆ ಮಾಡಬೇಕು ಎಂಬ ಆಸೆ.
ಅಧ್ಯಕ್ಷ ಸ್ಥಾನಕ್ಕಾಗಿ ನಾನಾಗಲಿ, ಮಧು ಬಂಗಾರಪ್ಪ ಆಗಲಿ ಇತರ ಯಾರೂ ಪೈಪೋಟಿ ನಡೆಸಿಲ್ಲ. ನಾನು ಸಚಿವ ಸ್ಥಾನಕ್ಕಾಗಿ ಕೂಡ ಯಾರ ಬಳಿಯೂ ದುಂಬಾಲು ಬಿದ್ದವನಲ್ಲ.ಅವಕಾಶ ಕೊಟ್ಟರೆ ವಿಭಿನ್ನವಾಗಿ ಅದನ್ನು ನಿಭಾಯಿಸುವೆ ಎಂದು ಸ್ಪಷ್ಟಪಡಿಸಿದ್ದಾರೆ.
"ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿರುವುದರಿಂದ ರಾಜ್ಯಾಧ್ಯಕ್ಷರಾಗಿ ಪಕ್ಷ ಸಂಘಟನೆ ಮಾಡುವುದು ಕಷ್ಟವಾಗುತ್ತದೆ. ಈ ಹಿನ್ನೆಲೆಯಲ್ಲಿ ಪಕ್ಷಕ್ಕೆ ನೂತನ ರಾಜ್ಯಾಧ್ಯಕ್ಷರನ್ನು ನೇಮಿಸುವ ಕುರಿತು ಚಿಂತನೆ ನಡೆಸಲಾಗುತ್ತಿದೆ" ಎಂದು ಪಕ್ಷದ ವರಿಷ್ಠ ಎಚ್.ಡಿ. ದೇವೆಗೌಡ ಎರಡು ದಿನಗಳ ಹಿಂದೆ ಮಾಧ್ಯಮಗಳಿಗೆ ತಿಳಿಸಿದ್ದರು.