ಹಸಿರಿನಿಂದ ಕಂಗೊಳಿಸುತ್ತಿದೆ ಮೈಸೂರು ರೈಲ್ವೆ ನಿಲ್ದಾಣ!
ಬೆಂಗಳೂರು, ಏಪ್ರಿಲ್ 16 : ಜನರು ನಗರಗಳತ್ತ ವಾಲುತ್ತಿದ್ದಂತೆಯೇ ನಗರದಲ್ಲಿ ಕಾಂಕ್ರೀಟ್ ಕಾಡಿನಿಂದಾಗಿ ಜನರು ಮತ್ತೆ ತಮ್ಮ ಸುತ್ತ ಹಸಿರಿರಬೇಕು ಎಂದು ಬಯಸಲು ಪ್ರಾರಂಭಿಸಿದ್ದಾರೆ.
ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್
ಹೀಗಾಗಿ ಕಾಂಕ್ರೀಟ್ ಪರಿಸರದಲ್ಲೇ ಹಸಿರು ನಡೆಸುವಂತೆ ಮಾಡುವ ಹೊಸ ಮಾರ್ಗವೊಂದನ್ನು ಮೈಸೂರಿನಲ್ಲಿ ಅಳವಡಿಸಿಕೊಳ್ಳಲಾಗಿದೆ. ಮೈಸೂರಿನ ನಗರ ರೈಲ್ವೆ ನಿಲ್ದಾಣದಲ್ಲಿ ವರ್ಟಿಕಲ್ ಗಾರ್ಡನ್ ಗಳನ್ನು ನಿರ್ಮಿಸಲಾಗಿದ್ದು, ಮೈಸೂರು ರೈಲ್ವೆ ನಿಲ್ದಾಣಕ್ಕೆ ಬರುವ ಪ್ರಯಾಣಿಕರನ್ನು ಹಸಿರು ಕೈಬೀಸಿ ಕರೆಯುತ್ತಿದೆ.
ಇಂತಹ ವಿನೂತನ ಹಾಗೂ ಪ್ರಯೋಗಾತ್ಮಕ ವರ್ಟಿಕಲ್ ಗಾರ್ಡನ್ ಗಳನ್ನು ನೈಋತ್ಯ ರೈಲ್ವೆ ಅಳವಡಿಸಿಕೊಂಡಿದ್ದು, ಪ್ರಯಾಣಿಕರಿಂದ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಮೈಸೂರು ರೈಲು ನಿಲ್ದಾಣದ ಕಾಂಪೌಂಡ್ ವಾಲ್ ಗಳು ಹಾಗೂ ಮೈಸೂರು ನಿಲ್ದಾಣದ ಮುಖ್ಯ ಕಟ್ಟಡಗಳ ಗೋಡೆ ಮೇಲೆ ಉದ್ದಕ್ಕೂ ಹುಲ್ಲುಪ್ರಭೇದದ ಸಸ್ಯಗಳನ್ನು ಹಾಗೂ ಪುಷ್ಪಗಳನ್ನು ಬೆಳೆಸಲಾಗಿದ್ದು, ಆಕರ್ಷಕವಾಗಿ ಇಡೀ ರೈಲ್ವೆ ನಿಲ್ದಾಣ ಕಂಗೊಳಿಸುತ್ತಿದೆ.
ವರ್ಟಿಕಲ್ ಗಾರ್ಡನ್ ಗಳೆಂದರೆ ಯಾವುದೇ ಗೋಡೆ ಅಥವಾ ಕಾಂಪೌಂಡ್ ಮೇಲೆ ಉದ್ದಕ್ಕೂ ಹುಲ್ಲು ಪ್ರಬೇಧದ ಸಸಿ ಅಥವಾ ಅಲಂಕಾರದ ಹೂವುಗಳನ್ನು ಬೆಳೆಯಬಹುದು. ಇದರಿಂದ ಹೆಚ್ಚು ಸ್ಥಳಾವಕಾಶದ ಅಗತ್ಯ ಬರುವುದಿಲ್ಲ.
ನಿರ್ಮಿಸಲಾಗಿರುವ ಗೋಡೆ ಅಥವಾ ತಾರಸಿ ಮೇಲೆ ಇಂತಹ ಗಾರ್ಡನ್ ಗಳನ್ನು ನಿರ್ಮಿಸಲಾಗಿದ್ದು, ಇದರಿಂದ ಕಾಂಕ್ರೀಟ್ ನಿಂದ ಉಂಟಾಗಬಹುದಾದ ಕಟ್ಟಡದೊಳಗಿನ ಶಾಖವನ್ನು ಕೆಲ ಮಟ್ಟಿಗೆ ನಿಯಂತ್ರಿಸಬಹುದಾಗಿದೆ.
ಇತ್ತೀಚೆಗೆ ಮೈಸೂರಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದ ವೇಳೆ ಹಲವಾರು ಅಭಿವೃದ್ಧಿಗಳ ಉದ್ಘಾಟನೆ ಜತೆಗೆ ವರ್ಟಿಕಲ್ ಗಾರ್ಡನ್ ಕೂಡ ಉದ್ಘಾಟನೆಗೊಂಡಿದ್ದು, ಇದೀಗ ಮೈಸೂರು ನಿಲ್ದಾಣ ಪ್ರಯಾಣಿಕರ ಆಕರ್ಷಣೀಯ ಸ್ಥಳವಾಗಿ ಮಾರ್ಪಟ್ಟಿದೆ. ನೈಋತ್ಯ ರೈಲ್ವೆ ವಲಯ ಮೈಸೂರು ಮಾತ್ರವಲ್ಲದೆ ಇನ್ನಿತರೆ ಪ್ರಮುಖ ನಿಲ್ದಾಣಗಳಲ್ಲಿ ನಿರ್ಮಿಸಲು ಇದೀಗ ಚಿಂತನೆ ನಡೆಸಿದೆ.
ಮೈಸೂರು ರೈಲ್ವೆ ನಿಲ್ದಾಣದ ಕಟ್ಟಡಗಳ ಮೇಲೆ ಮೂರು ಮೀಟರ್ ಎತ್ತರ ಹಾಗೂ ಹತ್ತು ಮೀಟರ್ ಉದ್ದದ ವರ್ಟಿಕಲ್ ಗಾರ್ಡನ್ ನ್ನು ನೈಋತ್ಯ ರೈಲ್ವೆ ವಲಯ ಎಂಜಿನಿಯರಿಂಗ್ ವಿಭಾಗ ನಿರ್ಮಿಸಿದೆ.