ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ವಿರೋಧಿಸಿ ಟಿ ನರಸೀಪುರದಲ್ಲಿ ಪ್ರತಿಭಟನೆ
ಮೈಸೂರು, ಆಗಸ್ಟ್ 17 : ವೀರಶೈವ ಲಿಂಗಾಯತ ಸಮುದಾಯಕ್ಕೆ ಪ್ರತ್ಯೇಕ ಧರ್ಮಕ್ಕೆ ವಿರೋಧಿಸಿ ಟಿ.ನರಸೀಪುರದಲ್ಲಿ ಗುರುವಾರ ವೀರಶೈವ ಲಿಂಗಾಯತರು ಬೃಹತ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಬಿರುಗಾಳಿ ಎಬ್ಬಿಸಲಿವೆಯೆ ಲಿಂಗಾಯತ ಮಹಾಸಭೆಯ ಈ 5 ನಿರ್ಣಯಗಳು?
ವೀರಶೈವ ಲಿಂಗಾಯತ ಸಮುದಾಯಕ್ಕೆ ಪ್ರತ್ಯೇಕ ಧರ್ಮಕ್ಕೆ ಮಾನ್ಯತೆ ವಿಚಾರವನ್ನು ಮುಂದಿಟ್ಟುಕೊಂಡು ರಾಜ್ಯದಲ್ಲಿ ಸಮುದಾಯವನ್ನು ಒಡೆಯಲು ವ್ಯವಸ್ಥಿತವಾಗಿ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿ ತಿ.ನರಸೀಪುರದಲ್ಲಿ ವಿದ್ಯೋದಯ ಕಾಲೇಜು ವೃತ್ತದಲ್ಲಿ ತಾಲೂಕಿನ ವೀರಶೈವ ಲಿಂಗಾಯತ ಸಮಾನ ಮನಸ್ಕರ ವೇದಿಕೆ, ವೀರಶೈವ ಮಹಾಸಭಾದ ನೂರಾರು ಸದಸ್ಯರು ಪ್ರತಿಭಟನೆ ನಡೆಸಿದರು.
ಮೆರವಣಿಗೆಯುದ್ದಕ್ಕೂ ವೀರಶೈವ ಲಿಂಗಾಯತರನ್ನು ಒಡೆಯುವ ಕುತಂತ್ರಿಗಳ ವಿರುದ್ಧ ಧಿಕ್ಕಾರ ಘೋಷಣೆಗಳನ್ನು ಕೂಗಿ ಕಾಲೇಜು ಜೋಡಿ ರಸ್ತೆ, ಲಿಂಕ್ ರಸ್ತೆ ಹಾಗೂ ಪುರಸಭೆ ರಸ್ತೆಗಳ ಮೂಲಕ ತಾಲೂಕು ಕಚೇರಿಗೆ ತೆರಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶಿರಸ್ತೇದಾರ್ ಪ್ರಭುರಾಜ್ ಅವರ ಮೂಲಕ ಮನವಿ ಪತ್ರ ಸಲ್ಲಿಸಿದರು.
ಬಳಿಕ ವಿವಿಧ ವೃತ್ತಗಳಲ್ಲಿ ಪಟಾಕಿಯನ್ನು ಸಿಡಿಸಿ ವೀರಶೈವರಿಗೆ ಪ್ರತ್ಯೇಕ ಧರ್ಮದ ಅವಶ್ಯಕತೆಯಿಲ್ಲ. ನಾವೆಲ್ಲರೂ ಒಂದೇ ಎಂಬ ಸಂದೇಶದೊಂದಿಗೆ ಬಲ ಪ್ರದರ್ಶನ ಮಾಡಿದರು.