ಮೈಸೂರಲ್ಲಿ ವ್ಯಾನಿಟಿ ಬ್ಯಾಗ್, ಚಿನ್ನ ಎಗರಿಸುತ್ತಿದ್ದ ಖತರ್ನಾಕ್ ಕಳ್ಳಿಯರು ಸಿಕ್ಕಿಬಿದ್ದರು
ಮೈಸೂರು, ನವೆಂಬರ್. 02: ಹೆಣ್ಮಕ್ಕಳ ವ್ಯಾನಿಟಿ ಬ್ಯಾಗ್ ಹಾಗೂ ಚಿನ್ನಾಭರಣ ಎಗರಿಸಲೆಂದೇ ತಮಿಳುನಾಡಿನಿಂದ ಬಂದಿದ್ದ ಇಬ್ಬರು ಕಳ್ಳಿಯರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ಅವರಿಂದ 244 ಗ್ರಾಂ ಚಿನ್ನಾಭರಣ ಮತ್ತು 45 ಸಾವಿರ ನಗದನ್ನು ವಶಪಡಿಸಿಕೊಳ್ಳಲಾಗಿದೆ.
ತಮಿಳುನಾಡಿನ ವೆಲ್ಲೂರು ಜಿಲ್ಲೆಯ ಜೋಲಾರ್ ಪೇಟೆ ತಾಲೂಕಿನ ಬಾಬು ನಗರ ನಿವಾಸಿ ಕುಮರೇಶನ್ ಎಂಬಾತನ ಪತ್ನಿ ಉಷಾರಾಣಿ(40) ಮತ್ತು ಜೋಲಾರ್ ಪೇಟೆ ತಾಲೂಕಿನ ಅಶೋಕನಗರ್ ನಿವಾಸಿ ವೆಟ್ರಿವೇಲ್ ಎಂಬಾತನ ಪತ್ನಿ ರೂಪ (24) ಎಂಬಿಬ್ಬರೇ ಸಿಕ್ಕಿ ಬಿದ್ದ ಕಳ್ಳಿಯರು.
ಮೈಸೂರಿನಲ್ಲಿ ಟ್ರಯಲ್ ನೋಡುವುದಾಗಿ ಹೇಳಿ ಕಾರಿನೊಂದಿಗೆ ಪರಾರಿಯಾದ ಖದೀಮ
ದಸರಾ ಸಮಯದಲ್ಲಿ ಮೈಸೂರಿನಲ್ಲಿ ಹೆಚ್ಚಿನ ಪ್ರವಾಸಿಗರು ಆಗಮಿಸುವುದಲ್ಲದೆ, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿರುವ ಕಾರಣ ಅವರ ನಡುವೆ ಪ್ರವಾಸಿಗರಂತೆ ಫೋಸ್ ಕೊಡುತ್ತಾ ಸಮಯ ಸಾಧಿಸಿ ಮಹಿಳೆಯರ ಚಿನ್ನಾಭರಣ ಮತ್ತು ವ್ಯಾನಿಟಿ ಬ್ಯಾಗ್ಗಳನ್ನು ಎಗರಿಸುತ್ತಿದ್ದರು.
ಮೈಸೂರು ದಸರಾಕ್ಕೆ ಚಿನ್ನಾಭರಣ ಎಗರಿಸಲೆಂದೇ ಹೆಚ್ಚಿನವರು ಬರುತ್ತಾರೆ ಎಂಬುದು ಗೊತ್ತಿದ್ದ ಹಿನ್ನಲೆಯಲ್ಲಿ ನಗರದ ಪೊಲೀಸ್ ಆಯುಕ್ತರಾದ ಡಾ.ಸುಬ್ರಹ್ಮಣ್ಯೇಶ್ವರರಾವ್ ಅವರ ಸೂಚನೆ ಮೇರೆಗೆ ಮೈಸೂರು ನಗರದ ಅಪರಾಧ ವಿಭಾಗದ ಡಿ.ಸಿ.ಪಿ. ಡಾ. ವಿಕ್ರಂ ವಿ ಅಮಟೆರವರ ಮಾರ್ಗದರ್ಶನದಲ್ಲಿ ಸಿ.ಸಿ.ಬಿ. ಘಟಕದ ಎ.ಸಿ.ಪಿ. ಬಿ.ಆರ್. ಲಿಂಗಪ್ಪ ರವರ ನೇತೃತ್ವದಲ್ಲಿ ಸಿ.ಸಿ.ಬಿ.ಯ ಪೊಲೀಸ್ ಇನ್ಸ್ಪೆಕ್ಟರ್ ಜಗದೀಶ್ ಮತ್ತು ಸಿಬ್ಬಂದಿಯನ್ನೊಳಗೊಂಡ ತಂಡವನ್ನು ರಚಿಸಲಾಗಿತ್ತು.
ಮೈಸೂರಿನ ಲಾಡ್ಜ್ ಗಳಲ್ಲಿ ವಾಸ್ತವ್ಯ
ಈ ನಡುವೆ ದಸರಾ ಕಳೆದರೂ ತಮ್ಮ ಊರಿಗೆ ತೆರಳದೆ ಮೈಸೂರಿನ ಲಾಡ್ಜ್ ಗಳಲ್ಲಿ ವಾಸ್ತವ್ಯ ಹೂಡಿ ಮೈಸೂರು ನಗರ ಮತ್ತು ಗ್ರಾಮಾಂತರ ಬಸ್ ನಿಲ್ದಾಣಗಳಲ್ಲಿ ಅಡ್ಡಾಡುತ್ತಾ ಜನಸಂದಣಿಯಿರುವ ಜಾಗದಲ್ಲಿ ಬಸ್ ಹತ್ತುವಂತೆ ನಾಟಕವಾಡುತ್ತಾ ಮಹಿಳೆಯರ ಪರ್ಸ್, ಚಿನ್ನಾಭರಣ ಎಗರಿಸಿಕೊಂಡು ಒಂದಷ್ಟು ದೊಡ್ಡ ಗಂಟಿನೊಂದಿಗೆ ಊರಿಗೆ ಹಿಂತಿರುಗುವ ಆಲೋಚನೆ ಮಾಡಿ ತಮ್ಮ ಕೈಚಳಕವನ್ನು ಮುಂದುವರೆಸಿಕೊಂಡು ಹೋಗುತ್ತಿದ್ದರು.
ಕಾರ್ಯಾಚರಣೆ ಚುರುಕುಗೊಳಿಸಿತ್ತು
ಕಳ್ಳರ ಮೇಲೆ ನಿಗಾವಹಿಸಲೆಂದೇ ರಚಿಸಲಾಗಿದ್ದ ತಂಡವು ಮೈಸೂರು ನಗರದ ಕೆ.ಎಸ್.ಆರ್.ಟಿ.ಸಿ. ಸಿಟಿ ಬಸ್ ನಿಲ್ದಾಣದ ಬಳಿ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಸಂಶಯಾಸ್ಪದವಾಗಿ ಅಡ್ಡಾಡುತ್ತಿದ್ದ ಉಷಾರಾಣಿಯನ್ನು ಗಮನಿಸಿದ ತಂಡ ಕಾರ್ಯಾಚರಣೆಯನ್ನು ಚುರುಕುಗೊಳಿಸಿತ್ತಲ್ಲದೆ, ಆಕೆಯನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ತಾವು ಮಾಡುತ್ತಿರುವ ಕೃತ್ಯವನ್ನು ಬಾಯಿ ಬಿಟ್ಟಿದಲ್ಲದೆ, ತನ್ನೊಂದಿಗೆ ಇನ್ನೊಬ್ಬಳು ರೂಪ ಎಂಬಾಕೆ ಇರುವುದನ್ನು ತಿಳಿಸಿದ್ದಾಳೆ.
ಮೈಸೂರು ದಸರಾ ಸಮಯದಲ್ಲಿ ಕಿಲಾಡಿ ಕಳ್ಳರು ಕದ್ದಿದ್ದು ಅಷ್ಟಿಷ್ಟಲ್ಲ!
ನಗದು ಹಣ ವಶ
ಆಕೆಯ ಬೆನ್ನತ್ತಿ ಹೋದ ತಂಡವು ವಿಜಯನಗರ ಠಾಣಾ ವ್ಯಾಪ್ತಿಯ ವಿ.ಎಲ್.ಎಸ್. ಲಾಡ್ಜ್ ನಲ್ಲಿ ವಾಸ್ತವ್ಯ ಹೂಡಿರುವುದು ತಿಳಿದು ಬಂದ ಹಿನ್ನಲೆಯಲ್ಲಿ ಅಲ್ಲಿಯೇ ಬಂಧಿಸಿದ್ದಾರೆ. ಇಬ್ಬರು ಕಳ್ಳಿಯರಿಂದ ರೂ. 7,30,000 ಮೌಲ್ಯದ 244 ಗ್ರಾಂ ಚಿನ್ನಾಭರಣ, 45,050 ರೂ. ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ.
ಮತ್ತೊಮ್ಮೆ ಜೈಲಿಗೆ ಸೇರಿದ ಕಳ್ಳಿ
ಮೈಸೂರು ನಗರ ದೇವರಾಜ ಪೊಲೀಸ್ ಠಾಣೆ 2, ಲಷ್ಕರ್ ಠಾಣೆ 1 ಹಾಗೂ ಕುವೆಂಪುನಗರ ಠಾಣೆ ವ್ಯಾಪ್ತಿಯಲ್ಲಿ 1 ಪ್ರಕರಣಗಳಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ಒಂದನೇ ಆರೋಪಿ ಉಷಾರಾಣಿ ಕಳೆದ ಜುಲೈ ತಿಂಗಳಿನಲ್ಲಿ ಬೆಂಗಳೂರಿನ ಆರ್.ಎಂ.ಸಿ. ಯಾರ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ನಡೆಸಿ ಸಿಕ್ಕಿಬಿದ್ದಿದ್ದು ಜೈಲಿಗೆ ಹಾಕಲಾಗಿತ್ತು.
ಜಾಮೀನಿನ ಮೇಲೆ ಬಂದ ಆಕೆ ಮತ್ತೆ ಕಳ್ಳತನವನ್ನು ಮುಂದುವರೆಸಿ ಮತ್ತೊಮ್ಮೆ ಜೈಲಿಗೆ ಸೇರಿದ್ದಾಳೆ.