ನಿಮಗೆ ಸ್ವಲ್ಪವಾದರು ಕಾಮನ್ಸೆನ್ಸ್ ಇದೆಯೇ? ಉಗ್ರಪ್ಪ ತರಾಟೆ
ಮೈಸೂರು, ಫೆಬ್ರವರಿ 2 : ಏನ್ರಿ ಇದು? ಬಡವರ ಮಕ್ಕಳು ಎಂದರೆ ಎಲ್ಲೆಂದರಲ್ಲಿ ಬಿಸಾಡಬಹುದೆ? ಮನುಷ್ಯನ ಜೀವಕ್ಕೆ ಬೆಲೆಯೇ ಇಲ್ಲವೇ? ನಿಮಗೆ ಸ್ವಲ್ಪವಾದರು ಕಾಮನ್ಸೆನ್ಸ್ ಇದೆಯೇ? ಇಲ್ಲಿಯೇ ಈ ರೀತಿಯಾದರೆ ಬಡವರ ಗತಿಯೇನು... ಎಂದು ಮಹಿಳಾ ಮತ್ತು ಮಕ್ಕಳ ಮೇಲಿನ ಶೋಷಣೆ, ದೌರ್ಜನ್ಯ ತಡೆ ತಜ್ಞ ಸಮಿತಿ ಅಧ್ಯಕ್ಷ ವಿ.ಎಸ್. ಉಗ್ರಪ್ಪ ಮೈಸೂರಿನಲ್ಲಿ ವೈದ್ಯರು ಹಾಗು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಎಚ್.ಡಿ.ಕೋಟೆಯ ಹಾಡಿಯಲ್ಲಿ ಲೈಂಗಿಕ ದೌರ್ಜನ್ಯಕ್ಕೋಳಗಾಗಿದ್ದ ಮಗುವಿಗೆ ಸಾಂತ್ವನ ಹೇಳಲು ಗುರುವಾರ ಮೈಸೂರಿನ ಚೆಲುವಾಂಬ ಆಸ್ಪತ್ರೆಗೆ ಭೇಟಿ ನೀಡಿದ ಉಗ್ರಪ್ಪ ಅಲ್ಲಿನ ವ್ಯವಸ್ಥೆ ಕಂಡು ಕೆಂಡಾಮಂಡಲವಾದರು. ಸಂತ್ರಸ್ಥ ಮಗುವನ್ನು ವಿಶೇಷ ಘಟಕದ ಕೊಠಡಿಯಲ್ಲಿ ಇರಿಸದೆ ಸಾಮಾನ್ಯ ವಾರ್ಡ್ ನಲ್ಲಿ ಇರಿಸಿರುವುದನ್ನು ಕಂಡು ಕುಪಿತರಾಗಿ ಹೆಚ್ಚುವರಿ ಎಸ್ಪಿ ಕಲಾಕಷ್ಣಸ್ವಾಮಿ, ಇನ್ಸ್ ಪೆಕ್ಟರ್ ಹರೀಶ್ ಕುಮಾರ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.[ಫೇಸ್ ಬುಕ್ ನಲ್ಲಿ ವಿ.ಎಸ್ ಉಗ್ರಪ್ಪಗೆ ಜೀವ ಬೆದರಿಕೆ, ಇಬ್ಬರ ಬಂಧನ]
ಲೈಂಗಿಕ ದೌರ್ಜನ್ಯಕೆ ಒಳಗಾದವರಿಗೆ ಪೋಕ್ಸೊ ಕಾಯ್ದೆಯಡಿ ರಕ್ಷಣೆ ನೀಡಿ ಗೌಪ್ಯತೆ ಕಾಪಾಡುವುದು ನಮ್ಮ ಕರ್ತವ್ಯ. ಆದರೆ ಇಲ್ಲಿ ಯಾವುದನ್ನೂ ಮಾಡಿಲ್ಲ. ಬಡವರು, ಅನಕ್ಷರಸ್ಥರು, ಹರಕಲು ಬಟ್ಟೆ ಧರಿಸಿದ್ದಾರೆ ಎಂದು ಸಾಮಾನ್ಯವಾರ್ಡ್ ನಲ್ಲಿ ಇರಿಸಲಾಗಿದೆ. ಇದರ ಹಿಂದಿರುವ ಉದ್ದೇಶವಾದರೂ ಏನು? ನಿಮಗೆ ಪೋಕ್ಸೋ ಕಾಯ್ದೆಯ ನಿಯಮಗಳು ತಿಳಿದಿಲ್ಲವೆ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಕಲಾಕೃಷ್ಣಸ್ವಾಮಿ ದೌರ್ಜನ್ಯಕ್ಕೆ ಒಳಗಾದ ಮಗು ಸೋಮವಾರ ಸಂಜೆ ಆಸ್ಪತ್ರೆಗೆ ಬಂದಿದ್ದು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.
ದಾಖಲಾತಿ ಪುಸ್ತಕವನ್ನು ತರಿಸಿ ಮಾಹಿತಿಯನ್ನು ಪರಿಶೀಲಿಸಿದ ಉಗ್ರಪ್ಪ ಅವರು ಕಾನೂನು ಸಲಹೆಗಾರ್ತಿ ಮಧು ಅವರನ್ನು ಯಾವ ಕ್ರಮ ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿದರು. ಅದಕ್ಕೆ ಅವರು ದಾಖಲಾತಿ ಪುಸ್ತಕವನ್ನು ನೋಡಿಲ್ಲ ಎಂದರು. ಮಧು ಅವರ ಪ್ರತಿಕ್ರಿಯೆಗೆ ಕೆಂಡಾಮಂಡಲರಾದ ಉಗ್ರಪ್ಪ ಅವರು ದಾಖಲಾತಿ ಪುಸ್ತಕವನ್ನು ನೋಡುವ ಸೌಜನ್ಯವೂ ನಿಮಗೆ ಇಲ್ಲವೆಂದ ಮೇಲೆ ನೀವು ಯಾವ ರೀತಿ ಕೆಲಸ ಮಾಡುತ್ತಿದ್ದೀರಿ ಎಂಬುದು ತಿಳಿಯುತ್ತದೆ. ನಿಮ್ಮ ಸರ್ವಾಧಿಕಾರಿ ಧೋರಣೆಯನ್ನು ಬಿಟ್ಟು ಹೇಳಲಿ ಬಿಡಲಿ ಪ್ರತಿದಿನ ದಾಖಲಾತಿ ಪುಸ್ತಕಗಳನ್ನು ನೋಡಿ ಎಂದು ಸೂಚಿಸಿದರು.
ಹುಣಸೂರಿನ ಮಂಜುಳ ಎಂಬುವರು ತಮ್ಮ ಮಗುವನ್ನು ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಿಸಿದ್ದು ಔಷಧಿಗಳನ್ನು ಹೊರಗಡೆಯಿಂದ ತರಲಾಗುತ್ತಿದೆ. ಯಾವುದೇ ಔಷಧಿಗಳನ್ನು ಆಸ್ಪತ್ರೆ ವತಿಯಿಂದ ನೀಡುತ್ತಿಲ್ಲ. ಒಮ್ಮೆ ಕಿಡ್ನಿ ಸಮಸ್ಯೆ ಎಂದರೆ ಇನ್ನೊಮ್ಮೆ ಮೆದುಳಿನ ಸಮಸ್ಯೆ ಎಂದು ಹೇಳುತ್ತಾರೆ. ಮತ್ತೆ ಯಾವುದೇ ಸಮಸ್ಯೆ ಇಲ್ಲ ಎನ್ನುತ್ತಾರೆ. ಔಷಧಿಗಳನ್ನು ನಾವೇ ತರುವುದಾದರೆ ಸರ್ಕಾರಿ ಆಸ್ಪತ್ರೆಗೆ ಯಾಕೆ ಬರಬೇಕು ಎಂದರೆ ಇಷ್ಟವಿದ್ದರೆ ಇರಿ, ಇಲ್ಲದಿದ್ದರೆ ಮಗುವನ್ನು ಕರೆದುಕೊಂಡು ಹೋಗಿ ಎಂದು ಗದರುತ್ತಾರೆ. ವೈದ್ಯರ ಹೆಸರನ್ನು ಕೇಳಿದರೆ ಹೇಳುವುದಿಲ್ಲ. ಇಲ್ಲಿಯವರೆಗೆ ಸುಮಾರು 15 ಸಾವಿರಕ್ಕೂ ಹೆಚ್ಚು ಔಷಧಿಗಳನ್ನು ಹೊರಗಡೆಯಿಂದ ತರಲಾಗಿದೆ ಎಂದು ದೂರಿದರು.