ಯುಪಿಎಸ್ಸಿಯಲ್ಲಿ 56ನೇ ಶ್ರೇಯಾಂಕ ಪಡೆದ ಮೈಸೂರಿನ ಹುಡುಗ
ಮೈಸೂರು, ಮೇ 12 : ಕೇಂದ್ರ ಲೋಕಸೇವಾ ಆಯೋಗ ನಡೆಸಿದ 2015ನೇ ಸಾಲಿನ ಪರೀಕ್ಷೆಯಲ್ಲಿ ಮೈಸೂರಿನ ಯುವಕ ಎಚ್.ಎಸ್. ಶ್ರೀಕಾಂತ್ 56ನೇ ಶ್ರೇಯಾಂಕ ಪಡೆಯುವ ಮೂಲಕ ರಾಜ್ಯಕ್ಕೆ ಹೆಮ್ಮೆ ತಂದಿದ್ದಾರೆ. ಕರ್ನಾಟಕದಲ್ಲಿ ಸೇವೆ ಸಲ್ಲಿಸಬೇಕೆಂಬ ಕನಸು ಅವರದು.
ಮೈಸೂರಿನ ರಾಮಕೃಷ್ಣನಗರದ ನಿವಾಸಿ, ತೋಟಗಾರಿಕೆ ಇಲಾಖೆ ಮಾಜಿ ಅಧಿಕಾರಿ ಎಂ. ಶಾಂತರಾಜು ಮತ್ತು ಸೌಭಾಗ್ಯ ದಂಪತಿ ಪುತ್ರರಾದ ಶ್ರೀಕಾಂತ್ ಅವರು ನಾಲ್ಕನೇ ಪ್ರಯತ್ನದಲ್ಲಿ ತೇರ್ಗಡೆಯಾದ್ದಕ್ಕೆ ತುಂಬಾ ಸಂತಸವಾಗಿದೆ ಎಂದು ಒನ್ಇಂಡಿಯಾ ಜೊತೆ ಅನಿಸಿಕೆ ಹಂಚಿಕೊಂಡರು. [ನಿಡ್ಡೋಡಿಯ ರೈತನ ಮಗಳು ಮಿಶಲ್ ಯುಪಿಎಸ್ಸಿ ಸಾಧಕಿ!]
ರಾಜ್ಯದಿಂದ ಪರೀಕ್ಷೆ ಬರೆದಿದ್ದ ಅಭ್ಯರ್ಥಿಗಳ ಪೈಕಿ ದರ್ಶನ್ ಎಂಬುವರು 48ನೇ ಸ್ಥಾನ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ತಂದುಕೊಟ್ಟಿದ್ದರೆ, ಶ್ರೀಕಾಂತ್ 56ನೇ ಸ್ಥಾನ ಪಡೆದು 2ನೇ ಸ್ಥಾನ ಗಿಟ್ಟಿಸಿ ಮೈಸೂರಿನ ಮಂದಿ ಹೆಮ್ಮೆ ಪಡುವ ಸಾಧನೆ ಮಾಡಿದ್ದಾರೆ.
ಮೂರು ಬಾರಿ ಯುಪಿಎಸ್ಸಿ ಪರೀಕ್ಷೆಯನ್ನು ಎದುರಿಸಿದ್ದ ಶ್ರೀಕಾಂತ್ ಅವರ ಕನಸು ಇದೀಗ ನಾಲ್ಕನೇ ಬಾರಿ ನನಸಾಗಿದೆ. ಕಳೆದ ಬಾರಿ ಸಂದರ್ಶನ ಎದುರಿಸಿದ್ದ ಅವರಿಗೆ ಕೂದಲೆಳೆ ಅಂತರದಲ್ಲಿ ಅವಕಾಶ ತಪ್ಪಿತ್ತು. ಇದೀಗ ಉತ್ತಮ ಅಂಕದೊಂದಿಗೆ ತೇರ್ಗಡೆಯಾಗಿದ್ದು, ಉತ್ತಮ ಅಧಿಕಾರಿಯಾಗಿ ಸೇವೆ ಸಲ್ಲಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. [ಯುಪಿಎಸ್ಸಿ ಫಲಿತಾಂಶ : ಕರ್ನಾಟಕದ ಗೌಡಗೆ 105ನೇ ಸ್ಥಾನ]
ತನ್ನ ಈ ಸಾಧನೆನ್ನು ಶ್ರೀಕಾಂತ್ ಅವರು ತಮ್ಮ ತಂದೆಗೆ ಅರ್ಪಿಸುತ್ತಾರೆ. ದೆಹಲಿ ಮತ್ತು ಬೆಂಗಳೂರಿನಲ್ಲಿ ತರಬೇತಿ ಪಡೆದಿರುವ ಅವರು, ಐಎಎಸ್ ಪರೀಕ್ಷೆ ಬರೆದು ಪಾಸ್ ಮಾಡಲು ಮೈಸೂರಿನ ಡೆಪ್ಯುಟಿ ಕಮಿಷನರ್ ಶಿಖಾ ಮತ್ತು ಮಾಜಿ ಉಪ ಆಯುಕ್ತ ಮಣಿವಣ್ಣನ್ ಅವರೇ ಸ್ಫೂರ್ತಿ ಎಂದು ಹೇಳಲು ಮರೆಯುವುದಿಲ್ಲ.
ಮೂಲತಃ ನಂಜನಗೂಡಿನವರಾದ ಶ್ರೀಕಾಂತ್ ಅವರು, ಕಾರ್ಮೆಲ್ ಆಂಗ್ಲ ಶಾಲೆಯಲ್ಲಿ ಪ್ರಾಥಮಿಕ ಅಧ್ಯಯನ ಪೂರೈಸಿದರು. ರಾಮಕೃಷ್ಣ ವಿದ್ಯಾಶಾಲೆಯಲ್ಲಿ ಹೈಸ್ಕೂಲ್ ಮತ್ತು ಪಿಯುಸಿ ಮಾಡಿದರು. ಎನ್ಐಇ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಮಾಡಿ, ಬೆಂಗಳೂರಿನ ಯುವಿಸಿಇನಲ್ಲಿ ಎಂಟೆಕ್ ಮಾಡಿದ್ದಾರೆ.