ಅವರೆಕಾಳು ಉಪ್ಪಿಟ್ಟು, ನುಚ್ಚಿನುಂಡೆಗೆ ಎಸ್ ಎನ್ ಆರ್ ಕ್ಯಾಂಟೀನ್ ಫೇಮಸ್
ಸಣ್ಣಗೆ ಬೀಳುತ್ತಿರುವ ಮಳೆಯಿರಲಿ, ಗಾಢ ಮೋಡವಿರಲಿ, ಚಳಿಯರಲಿ, ಬಿಸಿಲಿರಲಿ ಮೈಸೂರಿನ ಈ ಕ್ಯಾಂಟೀನ್ ಗೆ ಮಾತ್ರ ಜನರು ಮೊದಲೇ ಫೋನ್ ಮಾಡಿ, ಬರುವುದಾಗಿ ಹೇಳಿಟ್ಟಿರುತ್ತಾರೆ. ಈ ಪುಟ್ಟ ಕ್ಯಾಂಟೀನ್ ಮುಂದೆ ಆಹಾರಪ್ರಿಯರು ಗಿಜಿಗುಡುವ ಸದ್ದು ಕೇಳುತ್ತಲೇ ಇರುತ್ತದೆ.
ಕ್ಯಾಂಟೀನ್ ಹೊರ ಭಾಗದಲ್ಲಿಯೇ ಆಯಾ ದಿನದ ಮೆನುವಿನ ವಿಶೇಷವೇನು ಎಂದು ಬೋರ್ಡ್ ತೂಗಿ ಹಾಕಿದಾಗಲೇ ಅರಿವಾಗುವುದು ಆ ದಿನ ಮಾಡಿರುವ ವಿಶೇಷ ಖಾದ್ಯಗಳು ಏನು ಎಂಬ ಸಂಗತಿ. ಮೈಸೂರಿನ ವಿವೇಕಾನಂದ ಬಸ್ ಡಿಪೋ ಬಳಿ ಇರುವ ಈ ಎಸ್.ಎನ್. ಆರ್ ಕ್ಯಾಂಟೀನ್ ನಿಜವಾಗಿಯೂ ತಿಂಡಿಪ್ರಿಯರ ನೆಚ್ಚಿನ ತಾಣ.
ಇಲ್ಲಿ ಸಿಗುವ ಬಹುತೇಕ ಖಾದ್ಯಗಳ ಬೆಲೆ 10, 20 ರುಪಾಯಿ. ಅಷ್ಟೇ ಅಲ್ಲದೇ ಶುಚಿ, ರುಚಿ ಜೊತೆಗೆ ಅಗ್ಗದ ಬೆಲೆಯ ಕಾರಣದಿಂದಾಗಿ ಭೋಜನಪ್ರಿಯರನ್ನು ಕೈ ಬೀಸಿ ಕರೆಯುತ್ತದೆ. ಈ ಕ್ಯಾಂಟೀನ್ ತೆರೆದಿರುವುದು ಪ್ರತಿ ದಿನ ಸಂಜೆ 5 ರಿಂದ ರಾತ್ರಿ 9ರ ವರೆಗೆ ಮಾತ್ರ.
ಮೈಸೂರಿನ ಈ ಹೋಟೆಲ್ ನಲ್ಲಿ ತಿಂಡಿ-ಊಟ ಏನೇ ಮಾಡಿದರೂ 10 ರುಪಾಯಿ ಮಾತ್ರ!
ಹಸಿ ಅವರೇಕಾಳನ್ನು ಆಗ ತಾನೇ ಬಿಡಿಸಿ, ಮಾಡಿದಂತಹ ಬಿಸಿ - ಬಿಸಿ ಉಪ್ಪಿಟ್ಟು. ಅದಕ್ಕೆ ಕಾಂಬಿನೇಷನ್ ಆಗಿ ಕಾಯಿ ಚಟ್ನಿ. ಅದೇ ರೀತಿ ಬದನೆಕಾಯಿಯೊಂದಿಗೆ ಪಕ್ಕಾ ಬ್ರಾಹ್ಮಣರ ಶೈಲಿಯ ವಾಂಗಿಬಾತ್ ಪುಡಿಯೊಂದಿಗಿನ ಬಾತ್, ತೊಗರಿಬೇಳೆ, ಸಬ್ಬಸಿಗೆ ಸೇರಿ ಹದವಾಗಿ ಖಾರ ಹಾಕಿ ಬೇಯಿಸಿದ ಹಳ್ಳಿ ಸೊಗಡಿನ ನುಚ್ಚಿನುಂಡೆ ರುಚಿ ನೋಡಬಹುದು.
ಅಡೆ ದೋಸೆ, ಹೆಸರು ಬೇಳೆ ಪಾಯಸಕ್ಕೆ ಫಿದಾ
ಇನ್ನು ಎಲ್ಲ ಬೇಳೆಗಳನ್ನು ಬೆರೆಸಿ ಮಾಡಿದ ಅಡೆ ದೋಸೆ, ಹೆಸರು ಬೇಳೆಯನ್ನು ಹದವಾಗಿ ತುಪ್ಪದಲ್ಲಿ ಹುರಿದು, ಬೆಲ್ಲ ಹಾಕಿ ಮನೆಯ ರುಚಿಯಂತೆ ನೀಡುವ ಹೆಸರುಬೇಳೆ ಪಾಯಸ ಎಲ್ಲವೂ ಜಿಹ್ವಾಪ್ರಿಯರನ್ನು ಇತ್ತ ಬಂದು ರುಚಿ ನೋಡುವಂತೆ ಮಾಡುತ್ತವೆ. ಪೊಲೀಸ್ ಆಗಿ ನಿವೃತ್ತಿ ಹೊಂದಿದ ನಾಗೇಂದ್ರ ರಾವ್ ಹಾಗೂ ಶಿಕ್ಷಕ ವೃತ್ತಿಯಿಂದ ನಿವೃತ್ತಿ ಹೊಂದಿದ ಅವರ ಪತ್ನಿ ಮಾಲತಿ ಸದ್ಯ ಈ ಕ್ಯಾಂಟೀನ್ ನಡೆಸುತ್ತಿದ್ದಾರೆ. ನನಗೆ ಕ್ಯಾಂಟೀನ್ ನಡೆಸಬೇಕೆಂಬ ಆಸೆ ಮೊದಲಿನಿಂದಲೂ ಇತ್ತು. ಅದು ನಿವೃತ್ತಿ ಹೊಂದಿದ ಮೇಲೆ ನೆರವೇರಿದೆ ಎನ್ನುತ್ತಾರೆ.
ಗ್ರಾಹಕರ ಜತೆಗೆ ಸ್ನೇಹಿತರಂತೆ ವರ್ತನೆ
ಹಲವೆಡೆ ಊಟ - ತಿಂಡಿಯನ್ನು ಸವಿದಿದ್ದೇನೆ. ಆದರೆ ನನಗೆ ತೃಪ್ತಿ ಎನಿಸಲಿಲ್ಲ. ಹಾಗಾಗಿ ನಾನೇ ಒಂದು ಕ್ಯಾಂಟೀನ್ ತೆರಯಬೇಕೆಂದು ಯೋಚಿಸಿದೆ. ಅದು ದೊಡ್ಡಮಟ್ಟದಲ್ಲಿ ಅಲ್ಲ. ಸೇವೆಗಾಗಿಯೂ ನೀಡಬೇಕೆಂಬ ಹಂಬಲವಿತ್ತು. ಹಾಗಾಗಿ ಈ ಕ್ಯಾಂಟೀನ್ ಆರಂಭಿಸಿದೆ ಎನ್ನುತ್ತಾರೆ ನಾಗೇಂದ್ರ ರಾವ್. ನಮ್ಮ ಕ್ಯಾಂಟೀನ್ ಗೆ ಬರುವವರಲ್ಲಿ ವೃದ್ಧರೇ ಹೆಚ್ಚಿನ ಸಂಖ್ಯೆಯವರು. ಅವರು ನಮ್ಮ ಬಳಿ ತಿಂದು, ನಾಳೆಯೂ ಬರುತ್ತಾರೆ. ಆ ಕಾರಣಕ್ಕೆ ನಮ್ಮ ಕ್ಯಾಂಟೀನ್ ನಲ್ಲಿ ಮನೆಯಂತಹ ಭಾವನೆಯಿದೆ. ನಾವು ಗ್ರಾಹಕರೊಂದಿಗೆ ವ್ಯಾಪಾರಿಗಳಂತೆ ವರ್ತಿಸದೇ ಸ್ನೇಹಿತರಂತೆ ವರ್ತಿಸುತ್ತೇವೆ ಎಂದು ಹೇಳುತ್ತಾರೆ.
ಬೆಲೆ 30ರಿಂದ 40 ರುಪಾಯಿ ಮಾತ್ರ
ನಮ್ಮಲ್ಲಿ ದಿನಕ್ಕೆ ಕೇವಲ 2 ಕೆ.ಜಿಯಷ್ಟು ದೋಸೆ ಹಾಗೂ ಇಡ್ಲಿ ಅಷ್ಟೇ ಮಾಡುವುದು. ಎಷ್ಟು ಪ್ಲೇಟ್ ಎಂದು ಲೆಕ್ಕ ಹಾಕುವುದಿಲ್ಲ. ಕೇವಲ 30 - 40 ರುಪಾಯಿ ಇದ್ದರೆ ಸಾಕು. ಬಂದವರು ಹೊಟ್ಟೆ ತುಂಬಾ ತಿಂದು ಹೋಗುತ್ತಾರೆ. ನನಗೆ ಅದೇ ಖುಷಿ ಎನ್ನುತ್ತಾರೆ ಮಾಲೀಕರು. ಮೂರೂವರೆ ವರ್ಷಗಳ ಹಿಂದೆ ಆರಂಭವಾದ ಈ ಎಸ್.ಎನ್.ಆರ್ ತಿಂಡಿ ಮನೆ ಎಂಬ ಹೆಸರಿನ ಕ್ಯಾಂಟೀನ್ ಸದ್ಯಕ್ಕೆ ಮೈಸೂರಿನ ಜನಾಕರ್ಷಣೀಯ ಕೇಂದ್ರ. ಕೆಲವೊಮ್ಮೆ ರಾತ್ರಿ 7 ಗಂಟೆಗೆ ಈ ಕ್ಯಾಂಟೀನ್ ಗೆ ಹೋದರೂ ಸಾಕು ಎಲ್ಲವೂ ಖಾಲಿ ಎಂದು ಹೇಳಿ ಕಳುಹಿಸುವುದುಂಟು.
ಸೋಡಾ ಬಳಸದೆ ಅಡುಗೆ ಮಾಡ್ತಾರೆ
ಈ ಕ್ಯಾಂಟೀನ್ ಆರಂಭದ ದಿನದಿಂದಲೂ ನಾಗೇಂದ್ರ ರಾವ್ ಅವರ ಸ್ನೇಹಿತರಾಗಿರುವ ಉಮಾಶಂಕರ್ ಇವರೊಟ್ಟಿಗೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಲ್ಲಿ ಮಾಡುವ ತಿಂಡಿಗಳ ಕುರಿತಾಗಿ ಜನರು ಸಂತಸದಿಂದಲೇ ಉತ್ತರಿಸುತ್ತಾರೆ. "ನನಗೆ ಇಲ್ಲಿ ಸೋಡಾ ಬಳಸದೆ ಮಾಡುವ ಬಾತ್ ತುಂಬ ಇಷ್ಟ. ನಾನು 3 ವರ್ಷದಿಂದಲೂ ಇಲ್ಲಿಗೆ ದಿನವೂ ಬರುತ್ತಿದ್ದೇನೆ. ಯಾವುದೇ ತೊಂದರೆಯಾಗಿಲ್ಲ ಎಂದು ನಗುತ್ತಲೇ ಉತ್ತರಿಸುತ್ತಾರೆ 85 ವರ್ಷದ ದಾಸಪ್ಪನವರು. ಒಟ್ಟಾರೆಯಾಗಿ ಈ ಕ್ಯಾಂಟೀನ್ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿಬರುತ್ತವೆ.