ಯು.ಆರ್.ಅನಂತಮೂರ್ತಿ ಪುತ್ರ ಮೈಸೂರು ವಿವಿ ಉಪಕುಲಪತಿ?
ಮೈಸೂರು, ಜುಲೈ 8: ಮೈಸೂರು ವಿಶ್ವವಿದ್ಯಾನಿಲಯದ ಉಪಕುಲಪತಿ ನೇಮಕಾತಿ ಸಂಬಂಧ ಮತ್ತೆ ಲಾಬಿ ಶುರುವಿಟ್ಟುಕೊಂಡಿದೆ. ಕಳೆದ ಜನವರಿಯಲ್ಲಿ ಪ್ರೊ. ಕೆ.ಎಸ್. ರಂಗಪ್ಪ ನಿವೃತ್ತಿಯಾದ ಬಳಿಕ ಮೈಸೂರು ವಿಶ್ವವಿದ್ಯಾಲಯ ಉಪಕುಲಪತಿ ಸ್ಥಾನದ ಆಯ್ಕೆಯ ಕಸರತ್ತು ರಾಜ್ಯ ಪಾಲರ ಶೋಧನಾ ಸಮಿತಿಯ ಅಂಗಳಕ್ಕೆ ಬಂದು ಬಿದ್ದಿದೆ.
ಇದೇ ಬೆನ್ನಲ್ಲೇ ನೂತನ ಉಪಕುಲಪತಿ ಆಯ್ಕೆ ಸಂಬಂಧ ಶೋಧನ ಸಮಿತಿ, ಬೆಂಗಳೂರು ವಿವಿಯ ಮೂರು ಮಂದಿ ಪ್ರಾಧ್ಯಾಪಕರ ಹೆಸರನ್ನು ಶಿಫಾರಸ್ಸು ಮಾಡಿ ರಾಜ್ಯ ಸರಕಾರಕ್ಕೆ ಕಳುಹಿಸಿದೆ. ಬೆಂಗಳೂರು ವಿಶ್ವವಿದ್ಯಾಲಯದ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕ ಪ್ರೊ. ಎನ್.ಎಸ್.ಅಶೋಕ್ ಕುಮಾರ್, ಪರಿಸರ ವಿಜ್ಞಾನ ವಿಭಾಗದ ಮುಖ್ಯಸ್ಥ ಆರ್.ಕೆ. ಸೋಮಶೇಖರ್, ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಶರತ್ ಅನಂತಮೂರ್ತಿ ಅವರ ಹೆಸರನ್ನು ಶಿಫಾರಸು ಮಾಡಿದೆ ಎಂದು ಮೂಲಗಳು ಖಚಿತಪಡಿಸಿದೆ.
ಮೈಸೂರು ವಿವಿ ಉಪಕುಲಸಚಿವರ ಕಚೇರಿಗೆ ಬೀಗ!
ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಉಪಕುಲಪತಿ ಡಾ.ಎಚ್.ಪಿ.ಖಿಂಚಾ ಅಧ್ಯಕ್ಷತೆಯಲ್ಲಿ ವಿಶ್ರಾಂತ ಕುಲಪತಿಗಳಾದ ಪ್ರೊ.ವಿ.ಬಿ.ಕುಟಿನ್ಹೋ, ಕರ್ನಾಟಕ ಕೇಂದ್ರೀಯ ವಿವಿ ಉಪಕುಲಪತಿ ಪ್ರೊ.ಎಂ.ಎಚ್.ಮಹೇಶ್ವರಯ್ಯ, ಯುಜಿಸಿ ಪ್ರತಿನಿಧಿ ವಿರೇಂದ್ರ ಚೌಹ್ಹಾಣ್ ನೇತೃತ್ವದಲ್ಲಿ ಶೋಧನಾ ಸಮಿತಿ ರಚಿಸಲಾಗಿತ್ತು. ಈ ಸಮಿತಿ ಗುರುವಾರ ಸಭೆ ಸೇರಿ ಅಂತಿಮವಾಗಿ ಮೂರು ಮಂದಿಯ ಹೆಸರನ್ನು ಶಿಫಾರಸ್ಸು ಮಾಡಿದ್ದು, ಮುಚ್ಚಿದ ಲಕೋಟೆಯಲ್ಲಿ ರಾಜ್ಯ ಸರಕಾರಕ್ಕೆ ಹೆಸರುಗಳನ್ನು ಕಳುಹಿಸಿದೆ.
ಈ ಸಂಬಂಧ 'ಒನ್ ಇಂಡಿಯಾ'ಗೆ ಲಭಿಸಿದ ಮಾಹಿತಿ ಪ್ರಕಾರ, ಬೆಂಗಳೂರು ವಿವಿಯ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕ ಪ್ರೊ.ಎನ್.ಎಸ್.ಅಶೋಕ್ ಕುಮಾರ್ , ಪರಿಸರ ವಿಜ್ಞಾನ ವಿಭಾಗದ ಮುಖ್ಯಸ್ಥ ಆರ್.ಕೆ.ಸೋಮಶೇಖರ್ ಹಾಗೂ ಭೌತ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಶರತ್ ಅನಂತಮೂರ್ತಿ ಆಯ್ಕೆ ಸಮಿತಿ ಶಿಫಾರಸ್ಸು ಮಾಡಿದ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ ಎನ್ನಲಾಗಿದೆ.
ಈ ಪೈಕಿ ಖ್ಯಾತ ಹಿರಿಯ ಸಾಹಿತಿ, ಪ್ರಗತಿಪರ ಚಿಂತಕ ಪ್ರೊ. ಯು.ಆರ್.ಅನಂತಮೂರ್ತಿ ಅವರ ಪುತ್ರ, ಭೌತ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಶರತ್ ಅನಂತಮೂರ್ತಿ ಅವರೇ ಮೈಸೂರು ವಿವಿ ನೂತನ ಉಪಕುಲಪತಿಯಾಗಿ ಆಯ್ಕೆಗೊಳ್ಳುವುದು ಬಹುತೇಕ ಖಚಿತ ಎನ್ನಲಾಗಿದೆ.
ಶೋಧನಾ ಸಮಿತಿ ಶಿಫಾರಸ್ಸು ಮಾಡಿರುವ ಮೂರು ಮಂದಿ ಪೈಕಿ ಯಾವುದೇ ವಿವಾದ ಹಾಗೂ ಹಗರಣಗಳನ್ನು ಮೈಮೇಲೆ ಎಳೆದುಕೊಳ್ಳದೆ ಮಿಸ್ಟರ್ ಕ್ಲೀನ್ ಎಂಬ ಹಣೆಪಟ್ಟಿ ಹೊಂದಿರುವವರು ಶರತ್ ಅನಂತಮೂರ್ತಿ ಒಬ್ಬರೇ. ಈ ಹಿನ್ನೆಲೆಯಲ್ಲಿ ಹಾಗೂ ಯು.ಆರ್.ಅನಂತಮೂರ್ತಿ ಹಾಗೂ ಸಿದ್ದರಾಮಯ್ಯ ಅವರ ಆತ್ಮೀಯ ಗೆಳೆತನದ ಸಲುವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಶರತ್ ಅನಂತಮೂರ್ತಿ ಪರ ಒಲವನ್ನು ಹೊಂದಿದ್ದಾರೆ ಎನ್ನಲಾಗುತ್ತಿದೆ.