ನಂಜನಗೂಡು: ಕಾರು ಪಲ್ಟಿ, ಸ್ಥಳದಲ್ಲೇ ಇಬ್ಬರ ಸಾವು
ಮೈಸೂರು,ಫೆಬ್ರವರಿ,01: ಕಾರು ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ ಹೊಡೆದ ಪರಿಣಾಮ ರಸ್ತೆ ಬದಿಯಲ್ಲಿ ತೆರಳುತ್ತಿದ್ದ ಸೈಕಲ್ ಸವಾರ ಮತ್ತು ಪಾದಚಾರಿ ಸಾವನ್ನಪ್ಪಿದ ಘಟನೆ ನಂಜನಗೂಡಿನ ರಾಷ್ಟ್ರೀಯ ಹೆದ್ದಾರಿ 212ರ ಸಿಂಧುವಳ್ಳಿ ಬಳಿ ಭಾನುವಾರ ನಡೆದಿದೆ.
ಕಳಲೆ ಗ್ರಾಮದ ಸಿದ್ಧಯ್ಯ ಎಂಬುವರ ಪುತ್ರ ವೆಂಕಟೇಶ್(45), ಸಿಂಧುವಳ್ಳಿ ಗ್ರಾಮದ ಮಾದಪ್ಪ ಎಂಬುವರ ಪುತ್ರ ಮಹದೇವಪ್ಪ(60) ಮೃತಪಟ್ಟ ದುರ್ದೈವಿಗಳು. ಇದರಿಂದಾಗಿ ಮುಖ್ಯ ರಸ್ತೆಯಲ್ಲಿ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ವಾಹನಗಳ ಸಂಚಾರಕ್ಕೆ ತಡೆಯುಂಟಾಗಿತ್ತು.[ಶಿಂಷಾ ನದಿಗೆ ಬಿದ್ದ ಕೆಎಸ್ಆರ್ ಟಿಸಿ ಬಸ್, 1 ಸಾವು]
ಕೇರಳ ನೋಂದಣಿ ಸಂಖ್ಯೆಯ ಮಾರುತಿ ವ್ಯಾಗನಾರ್ ಕಾರು (ಕೆಎಲ್.ಎಫ್.7754) ಗುಂಡ್ಲುಪೇಟೆ ಮುಖ್ಯರಸ್ತೆಯಲ್ಲಿರುವ ಸಿಂಧುವಳ್ಳಿ ಸಮೀಪ ಬರುತ್ತಿತ್ತು. ಆಗ ತಕ್ಷಣ ಚಾಲಕನ ನಿಯಂತ್ರಣ ತಪ್ಪಿ ಸೈಕಲ್ ಸವಾರ ವೆಂಕಟೇಶ್ ಗೆ ಡಿಕ್ಕಿ ಹೊಡೆದು, ಅಲ್ಲೇ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹದೇವಪ್ಪ ಎಂಬುವರಿಗೂ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಥಳದಲ್ಲೇ ಇಬ್ಬರು ಮೃತಪಟ್ಟಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಸ್ಥಳೀಯ ಗ್ರಾಮಸ್ಥರು,'ಇತ್ತೀಚೆಗಷ್ಟೆ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ನಡೆದಿದ್ದು, ವೈಜ್ಞಾನಿಕವಾಗಿ ರಸ್ತೆ ಅಭಿವೃದ್ಧಿಯಾಗದ ಕಾರಣ ಮುಖ್ಯರಸ್ತೆಯಲ್ಲಿ ಪ್ರತಿನಿತ್ಯ ಅಪಘಾತಗಳಾಗುತ್ತಿವೆ ಎಂದು ಆಕ್ಷೇಪ ವ್ಯಕ್ತಪಡಿಸಿ ವಾಹನಗಳ ಸಂಚಾರಕ್ಕೆ ತಡೆಯೊಡ್ಡಿ ಪ್ರತಿಭಟಿಸಿದರು.[ಹೆದ್ದಾರಿ ಕಾಮಗಾರಿಗೆ ಚಾಲನೆ ನೀಡಿ ಅಂಬರೀಷ್ ಬೆನ್ನು ತಟ್ಟಿದ ಸಿಎಂ]
ಆ ನಂತರ ಬಂದ ವೃತ್ತ ನಿರೀಕ್ಷಕ ಎಂ.ಸಿ.ರವಿಕುಮಾರ್ ಹಾಗೂ ಸಂಚಾರಿ ಪೊಲೀಸ್ ಠಾಣೆಯ ಪಿಎಸ್ಐ ಧನರಾಜ್ ಉದ್ರಿಕ್ತ ಜನರನ್ನು ಸಂತೈಸಿ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೊಳಪಡಿಸಿ ವಾರಸುದಾರರಿಗೆ ಹಸ್ತಾಂತರಿಸಿದರು. ನಂಜನಗೂಡು ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.