ಹುಣಸೂರು ತಾಲೂಕಿನ ಗ್ರಾಮಸ್ಥರ ನಿದ್ದೆಕೆಡಿಸಿದ್ದ ಚಿರತೆ ಸೆರೆ
ಮೈಸೂರು, ಜುಲೈ 28 : ಹುಣಸೂರು ತಾಲೂಕಿನ ಆಸ್ವಾಳ್ ಗ್ರಾಮದಲ್ಲಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಚಿರತೆಯೊಂದು ಬಿದ್ದಿದೆ. ಒಂದೇ ವಾರದಲ್ಲಿ ಒಟ್ಟು ಎರಡು ಚಿರತೆಗಳು ಸೆರೆ ಸಿಕ್ಕಂತಾಗಿವೆ.
ಕಳೆದ ವಾರವಷ್ಟೇ ತಾಲೂಕಿನ ಕೊತ್ತೇಗಾಲ ಗ್ರಾಮ ಪಂಚಾಯತ್ ವ್ಯಾಪ್ತಿಯ ನಾಗನಹಳ್ಳಿ ಗ್ರಾಮದಲ್ಲಿ ಅರಣ್ಯ ಇಲಾಖೆ ಬೋನಿಟ್ಟು ಚಿರತೆಯನ್ನು ಸೆರೆ ಹಿಡಿದು ಅರಣ್ಯಕ್ಕೆ ಬಿಟ್ಟಿದ್ದರು. ಇದೀಗ ಆಸ್ವಾಳ್ ಗ್ರಾಮದಲ್ಲಿ ಮತ್ತೊಂದು ಚಿರತೆಯನ್ನು ಸೆರೆಹಿಡಿಯಲಾಗಿದೆ. [ಜಾನುವಾರುಗಳಿಗೆ ಕಂಟಕವಾಗಿದ್ದ ಗಂಡು ಚಿರತೆ ಸೆರೆ]
ಚಿರತೆಗಳು ಅರಣ್ಯದಿಂದ ನಾಡಿನತ್ತ ಬರುತ್ತಿದ್ದು, ಪೊದೆಗಳಲ್ಲಿ ವಾಸ್ತವ್ಯ ಹೂಡುತ್ತಾ ಸಾಕು ಪ್ರಾಣಿಗಳನ್ನು ಹಿಡಿದು ತಿನ್ನುವುದು ಮಾಮೂಲಿಯಾಗಿದೆ. ಈ ವ್ಯಾಪ್ತಿಯಲ್ಲಿ ಇನ್ನೆಷ್ಟು ಚಿರತೆ ಇವೆಯೋ ಎಂಬ ಆತಂಕ ಜನರನ್ನು ಕಾಡುತ್ತಿದೆ.
ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ ಮೇಕೆ, ಕುರಿ, ಹಸುಗಳ ಮೇಲೆ ದಾಳಿ ಮಾಡಿ ಕೊಂದು ತಿನ್ನುತ್ತಿರುವ ಪ್ರಕರಣಗಳು ಮೇಲಿಂದ ಮೇಲೆ ಕಂಡುಬರುತ್ತಿದ್ದು, ಅರಣ್ಯ ಇಲಾಖೆ ಚಿರತೆಯನ್ನು ಹಿಡಿದು ಅರಣ್ಯಕ್ಕೆ ಬಿಟ್ಟರೂ ಸಮಸ್ಯೆ ಪರಿಹಾರವಾಗುತ್ತಿಲ್ಲ. ಕಾರಣ ಮತ್ತೊಂದು ಚಿರತೆ ನಾಡಿನತ್ತ ಮುಖ ಮಾಡಿರುತ್ತದೆ. [ಕುಂದನಹಳ್ಳಿಯಲ್ಲಿ ಕುರಿ ಕೋಳಿ ತಿಂದು ತೇಗಿದ ಚಿರತೆ]
ಮೈಸೂರು ಜಿಲ್ಲೆಯ ಕಾಡಂಚಿನ ಗ್ರಾಮೀಣ ಪ್ರದೇಶಗಳಲ್ಲಿಯೇ ಚಿರತೆ ಹಾವಳಿ ಹೆಚ್ಚಾಗಿದೆ. ಬಹಳಷ್ಟು ಚಿರತೆಗಳು ಅರಣ್ಯ ಇಲಾಖೆ ಇಟ್ಟಿರುವ ಬೋನಿಗೆ ಬೀಳದೆ, ಚಳ್ಳೆ ಹಣ್ಣು ತಿನ್ನಿಸುತ್ತಾ ಆರಾಮವಾಗಿ ಅಡ್ಡಾಡಿಕೊಂಡಿವೆ. ಗ್ರಾಮದಲ್ಲಿ ಓಡಾಡಿರುವುದಕ್ಕೆ ಸಾಕ್ಷಿ ಎಂಬಂತೆ ಚಿರತೆಯ ಹೆಜ್ಜೆ ಗುರುತುಗಳು ಕಂಡುಬಂದಿವೆ. ಇದೇ ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.
ಚಿರತೆ ಹಾವಳಿಯಿಂದ ಬೇಸತ್ತ ಗ್ರಾಮಸ್ಥರು ಅರಣ್ಯ ಇಲಾಖೆಗೆ ದೂರು ನೀಡಿದ್ದರು. ಗ್ರಾಮಸ್ಥರ ದೂರಿನ ಮೇರೆಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಆಸ್ವಾಳ್ ನಿವಾಸಿ ಶಾಂತರಾಜು ಎಂಬುವರ ಜಮೀನಿನಲ್ಲಿ ಬೋನನ್ನು ಇಟ್ಟಿದ್ದರು. ಆಹಾರ ಅರಸಿಕೊಂಡು ಬಂದ ಚಿರತೆ ಬೋನಿಗೆ ಬಿದ್ದಿದೆ. [ಬೋನಿಟ್ಟರೂ ಬೀಳದ ಚಾಲಾಕಿ ಚಿರತೆ, ಗ್ರಾಮಸ್ಥರ ಚಿಂತೆ]
ಇದು ಗಂಡು ಚಿರತೆಯಾಗಿದ್ದು 5 ವರ್ಷ ಪ್ರಾಯ ಇರಬಹುದೆಂದು ಅಂದಾಜಿಸಲಾಗಿದೆ. ಚಿರತೆ ಸೆರೆ ಸಿಕ್ಕಿರುವ ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಎಸಿಎಫ್ ಪ್ರಸನ್ನಕುಮಾರ್, ಆರ್ಎಫ್ಒ ಗಿರೀಶ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರಿಜ್ವಾನ್ಅಹಮದ್, ಉಪವಲಯ ಅರಣ್ಯ ಅಧಿಕಾರಿ ಸುರೇಶ್, ದೇವಯ್ಯ, ಪ್ಯಾರೇಜಾನ್ ಮೊದಲಾದವರು ಚಿರತೆಯನ್ನು ಬೋನ್ ಸಹಿತ ಕೊಡೊಯ್ದು ನಾಗರಹೊಳೆ ರಾಷ್ಟ್ರೀಯ ಉದ್ಯಾನಕ್ಕೆ ಬಿಟ್ಟರು.