ಭತ್ತ, ತಂಬಾಕು ಬೆಳೆ ನಷ್ಟ, ಇಬ್ಬರು ರೈತರ ಆತ್ಮಹತ್ಯೆ
ಮೈಸೂರು, ನವೆಂಬರ್, 23 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಲೇ ಸಾಗುತ್ತಿದ್ದು, ಸಾಲದ ಬಾಧೆಯಿಂದ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೆ.ಆರ್ ನಗರ ತಾಲೂಕಿನ ಚುಂಚನಕಟ್ಟೆ ಹೋಬಳಿಯ ಶ್ರೀರಾಂಪುರ ಮತ್ತು ಕೋಳೂರು ಗ್ರಾಮದಲ್ಲಿ ನಡೆದಿದೆ.
ಹೋಬಳಿಯ ಶ್ರೀರಾಂಪುರ ಗ್ರಾಮದ ರೈತ ಹೇಮಂತ್ ಕುಮಾರ್ (44) ಕ್ರಿಮಿನಾಶಕ ಸೇವಿಸಿ ನವೆಂಬರ್ 21 ರ ಶನಿವಾರ ರಾತ್ರಿ ಆತ್ಮಹತ್ಯೆಗೆ ಶರಣಾಗಿದ್ದು, ಈತನಿಗೆ ಓರ್ವ ಪುತ್ರಿ ಇದ್ದಾಳೆ. ಕಾವೇರಿ ಗ್ರಾಮೀಣ ಬ್ಯಾಂಕಿನಲ್ಲಿ 1ಲಕ್ಷ ರೂ. ಹಾಗೂ ಕೈಸಾಲ 2 ಲಕ್ಷಕ್ಕೂ ಅಧಿಕ ಮಾಡಿಕೊಂಡಿದ್ದರು ಎನ್ನಲಾಗಿದೆ.
ಹೇಮಂತ್ ತನ್ನ 2.5 ಎಕರೆ ಜಮೀನಿನಲ್ಲಿ ಬೆಳೆಯಲಾಗಿದ್ದ ಭತ್ತದ ಬೆಳೆಗೆ ಕುತ್ತಿಗೆ ರೋಗ ಬಾಧಿಸಿದ ಪರಿಣಾಮ ಬೆಳೆ ಸಂಪೂರ್ಣ ಹಾನಿಗೊಂಡಿತ್ತು. ಬೆಳೆಗಾಗಿ ಮಾಡಿದ ಸಾಲವನ್ನು ತೀರಿಸಲು ಬೇರೆ ದಾರಿ ಕಾಣದೆ ರೈತ ಹೇಮಂತ್ ಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.[ಧಾರವಾಡದ ಧೂಪನಟ್ಟಿ, ಕಿವುಡೆಬೈಲ ರೈತರ ಬೇಡಿಕೆಗಳೇನು?]
ಕೋಳೂರು ಗ್ರಾಮದ ರೈತ ನೇಣಿಗೆ ಶರಣು
ಕೋಳೂರು ಗ್ರಾಮದ ರೈತ ಕೆ.ಟಿ ಮಂಜುನಾಥ್ (36) ಶನಿವಾರ ರಾತ್ರಿ ನೇಣುಬಿಗಿದು ಆತ್ಮಹತ್ಯೆಗೆ ಶರಣಾಗಿದ್ದು ಈತನಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಕಾವೇರಿ ಗ್ರಾಮೀಣ ಬ್ಯಾಂಕಿನಲ್ಲಿ 3 ಲಕ್ಷ ಕೈಸಾಲ, 3 ಲಕ್ಷಕ್ಕೂ ಅಧಿಕ ಸಾಲವನ್ನು ಮಾಡಿಕೊಂಡಿದ್ದರು.
ಈತ ತನ್ನ 3 ಎಕರೆ ಜಮೀನಿನಲ್ಲಿ ತಂಬಾಕು ಬೆಳೆ ಬೆಳೆದಿದ್ದನು. ಬೆಳೆ ಸಮರ್ಪಕವಾಗಿ ಬಾರದೆ ಇಳುವರಿ ಕುಂಠಿತಗೊಂಡಿರುವುದರ ಪರಿಣಾಮ ಬ್ಯಾಂಕಿನ ಸಾಲ ತೀರಿಸಲಾಗದೆ, ಕೈಸಾಲದ ಹೊರೆ ಹೆಚ್ಚಾದ ಪರಿಣಾಮ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ.[ಒಣಗುವ ಬೆಳೆಗಳಿಗೆ ಕಾಯಕಲ್ಪ ಕಲ್ಪಿಸಿದ ಕೃಷಿ ಭಾಗ್ಯ]
ಘಟನೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಕೆ.ಆರ್.ನಗರ ತಹಶೀಲ್ದಾರ್ ಜಿ.ಹೆಚ್.ನಾಗರಾಜು, ಉಪ ತಹಶೀಲ್ದಾರ್ ತಿಮ್ಮಯ್ಯ, ಆರ್.ಐ. ಸಾಲಿಗ್ರಾಮ ಕೋಟೇಗೌಡ, ಮೃತ ರೈತರ ಅಂತಿಮ ದರ್ಶನವನ್ನು ಪಡೆದು ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿ ಸರ್ಕಾರದಿಂದ ದೊರೆಯುವ ಸವಲತ್ತುಗಳನ್ನು ಒದಗಿಸಿ ಕೊಡುವುದಾಗಿ ಭರವಸೆ ನೀಡಿದ್ದಾರೆ.