ದಸರಾ ಓಪನ್ ಸ್ಟ್ರೀಟ್ ಫೆಸ್ಟಿವಲ್ ನಲ್ಲಿ ಪುಂಡರಿಂದ ಕಿರುಕುಳ: ಸಂತ್ರಸ್ತೆಯರು ಹೇಳಿದ್ದೇನು?
ಮೈಸೂರು, ಅಕ್ಟೋಬರ್ 15: ನಗರದಲ್ಲಿ ದಸರೆಯ ವೈಭವ ಒಂದೆಡೆ ಮನೆಮಾಡಿದರೆ, ಮತ್ತೊಂದೆಡೆ ಇದೇ ನೆಪ ಮಾಡಿಕೊಂಡು ಕೆಲ ಪುಂಡ ಪೋಕರಿಗಳು ತಮ್ಮ ಆಟ ಶುರುವಿಟ್ಟುಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಹೊಸ ವರ್ಷದ ಸಂದರ್ಭದಲ್ಲಿ ಯುವತಿಯೊಬ್ಬಳಿಗೆ ನೀಡಲಾದ ಕಿರುಕುಳ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಈಗ ಅಂತದ್ದೇ ಕಿರುಕುಳ ಮೈಸೂರಿನಲ್ಲಿ ಕಳೆದೆರಡು ದಿನಗಳ ಕೆಳಗೆ ಓಪನ್ ಸ್ಟ್ರೀಟ್ ಫೆಸ್ಟಿವಲ್ ನಲ್ಲಿ ನಡೆದಿದೆ ಎನ್ನಲಾಗಿದೆ.
ಶನಿವಾರ ನಗರದ ಕೃಷ್ಣರಾಜ ಬುಲೇವಾರ್ಡ್ ರಸ್ತೆಯಲ್ಲಿ ಓಪನ್ ಸ್ಟ್ರೀಟ್ ಫೆಸ್ಟಿವಲ್ ನಲ್ಲಿ ನಡೆದ ಈ ಕಿರುಕುಳದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಯುವತಿಯೊಬ್ಬಳು ಹೇಳಿಕೊಂಡಿದ್ದಾಳೆ. ಅಷ್ಟೇ ಅಲ್ಲ, ಮುಂದೆ ಯಾರಿಗೂ ಈ ರೀತಿ ಆಗದಂತೆ ಎಚ್ಚರ ವಹಿಸುವಂತೆ ಜಿಲ್ಲಾಡಳಿತ ಹಾಗೂ ಪೊಲೀಸರಿಗೆ ಮನವಿ ಮಾಡಿದ್ದಾಳೆ.
ಓಪನ್ ಸ್ಟ್ರೀಟ್ ಫೆಸ್ಟಿವಲ್ ಗೆ ಈ ಬಾರಿ ನಿರೀಕ್ಷೆಗೂ ಮೀರಿ ಯುವಜನತೆಯಿಂದ ಸಖತ್ ರೆಸ್ಪಾನ್ಸ್ ಸಿಕ್ಕಿತ್ತು . ಆದರೆ ಅಷ್ಟೇ ಪ್ರಮಾಣದಲ್ಲಿ ಅನುಚಿತ ವರ್ತನೆಯ ಬಗ್ಗೆಯೂ ದೂರುಗಳು ಕೇಳಿ ಬಂದಿವೆ . ಸಂಸ್ಕೃತಿ, ವ್ಯಾಪಾರ, ಸಂಗೀತ ಮತ್ತು ಖುಷಿಗೆ ನಂಟು ಬೆಸೆದ ತೆರೆದ ಬೀದಿ ಉತ್ಸವದಲ್ಲಿ ಜನಸಾಗರವೇ ಹರಿದು ಬಂದಿತ್ತು .
ಮೈಸೂರು ದಸರಾ: ಪೊಲೀಸ್ ಬ್ಯಾಂಡ್, ಎಸ್ ಪಿಬಿ ಸಂಗೀತಕ್ಕೆ ತಲೆದೂಗಿದ ಶ್ರೋತೃಗಳು
ಅದರಲ್ಲಿ ಯುವ ಸಮೂಹ ಬೆಳಗ್ಗೆಯಿಂದ ರಾತ್ರಿಯವರೆಗೂ ಕುಣಿದು ಕುಪ್ಪಳಿಸಿತು . ಇದೇ ಸಂದರ್ಭವನ್ನು ಬಳಸಿಕೊಂಡ ಕೆಲ ಕೊಳಕು ಮನಸ್ಥಿತಿಯ ಯುವಕರು, ಪುರುಷರು ಸೇರಿ ಯುವತಿಯರು ಹಾಗೂ ಮಹಿಳೆಯರಿಗೆ ಕಿರುಕುಳ ನೀಡಿದ್ದಾರೆ . ಈ ಕುರಿತು ಯುವತಿಯರು ಟ್ವಿಟ್ಟರ್ ನಲ್ಲಿ ತಮ್ಮ ಸಂಕಷ್ಟವನ್ನು ತೋಡಿಕೊಂಡಿದ್ದಾರೆ. ಮುಂದೆ ಓದಿ...
ಟ್ವಿಟ್ಟರ್ ನಲ್ಲಿ ಅಳಲು ತೋಡಿಕೊಂಡ ಯುವತಿ
ಓಪನ್ ಸ್ಟ್ರೀಟ್ ಫೆಸ್ಟಿವಲ್ ನಲ್ಲಿ ನಾನು ಸಂತಸದಿಂದ ನಡೆದು ಹೋಗುತ್ತಿದ್ದಾಗ ಸಮೀಪಕ್ಕೆ ಬಂದ ಕೆಲವರು ನನ್ನನ್ನು ಸ್ಪರ್ಶಿಸಿದರು . ಅವರ ವರ್ತನೆ ತೀರಾ ಅನಾಗರಿಕ ಮತ್ತು ಅಸಭ್ಯವಾಗಿತ್ತು. ಈ ಕೆಟ್ಟ ಅನುಭವ ನನ್ನನ್ನು ಕಾಡುತ್ತಲೇ ಇದೆ.
ಹೀಗಾಗಿ ಇಂಥ ಕಾರ್ಯಕ್ರಮದಿಂದ ದೂರ ಉಳಿಯಲು ನಿರ್ಧರಿಸಿದ್ದೇನೆ. ಈ ಬಗ್ಗೆ ಹೆಚ್ಚು ಪ್ರಸ್ತಾಪಿಸಲು ಮುಜುಗರವಾಗುತ್ತದೆ ಎಂದು ಹೆಸರು ಹೇಳಲಿಚ್ಛಿಸದ ಯುವತಿಯೊಬ್ಬಳು ಟ್ವಿಟ್ಟರ್ ನಲ್ಲಿ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಯುವ ದಸರಾದಲ್ಲಿ ಅರ್ಮಾನ್ ಮಲ್ಲಿಕ್ ಹಾಡಿಗೆ ಹುಚ್ಚೆದ್ದು ಕುಣಿದ ಪಡ್ಡೆಹೈಕ್ಳು
ಮೀ ಟೂ ಎಂದು ಟ್ಯಾಗ್ ಮಾಡಿ
ತಮ್ಮನ್ನು ಬೇಕೆಂದೇ ಸ್ಪರ್ಶಿಸಿದ ಕಿಡಿಗೇಡಿಗಳು ಬಳಿಕ ಕ್ಷಮೆ ಯಾಚಿಸುವ ನಾಟಕ ಮಾಡುತ್ತಿದ್ದರು. ಇದು ನನ್ನೊಬ್ಬಳ ಅನುಭವವಲ್ಲ. ಸಾಕಷ್ಟು ಮಂದಿಗೆ ಇದೇ ರೀತಿಯ ಅನುಭವವಾಗಿದೆ ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.
ಮಗದೊಬ್ಬರು ನಿಜವಾಗಲೂ ಇದೊಂದು ಕೆಟ್ಟ ದಿನ. ಇಬ್ಬರು ಹುಡುಗಿಯರನ್ನು ಮನೆಯವರೆಗೂ ಹಿಂಬಾಲಿಸಿಕೊಂಡು ಹೋಗಿದ್ದಾರೆ. ಯುವತಿ ಮತ್ತು ಆಕೆಯ ತಂದೆಯನ್ನು ಸಾರ್ವಜನಿಕವಾಗಿ ಅವಹೇಳನ ಮಾಡಿದ್ದಾರೆ . ಯುವತಿಯನ್ನು ದೈಹಿಕ ಹಿಂಸೆಗೂ ಗುರಿಪಡಿಸಿರುವ ಬಗ್ಗೆ ದೂರು ಕೇಳಿ ಬಂದಿದ್ದು ಅಶ್ಲೀಲವಾಗಿ ನಿಂದಿಸಿದ್ದಾರೆ.
ತೆರೆದ ಬೀದಿ ಉತ್ಸವದಲ್ಲಿ ಇಂಥ ಸಂದರ್ಭವನ್ನು ನೀವು ಎದುರಿಸಿದ್ದರೆ ಮೀ ಟೂ ಎಂದು ಟ್ಯಾಗ್ ಮಾಡುವಂತೆ ಸಂತ್ರಸ್ತೆ ಮನವಿ ಮಾಡಿದ್ದಾರೆ .
ದೌರ್ಜನ್ಯದ ಕುರಿತು ದೂರು ದಾಖಲಾಗಿಲ್ಲ
ಇನ್ನು ಈ ಕುರಿತು ಹೇಳಿಕೆ ನೀಡಿರುವ ನಗರ ಪೊಲೀಸ್ ಆಯುಕ್ತ ಸುಬ್ರಹ್ಮಣ್ಯೇಶ್ವರ ರಾವ್ , ನಗರದ ಓಪನ್ ಸ್ಟ್ರೀಟ್ ಫೆಸ್ಟಿವಲ್ ನಲ್ಲಿ ಕೆಲವೆಡೆ ಹೆಣ್ಣುಮಕ್ಕಳಿಗೆ ತೊಂದರೆಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ . ತೊಂದರೆ ನೀಡಿದವರ ಸುಳಿವು ಸಿಕ್ಕಿದ್ದು , ಶೋಧ ಕಾರ್ಯ ನಡೆಸಲಾಗುತ್ತಿದೆ . ದೌರ್ಜನ್ಯ ಕುರಿತು ಇದುವರೆಗೆ ಯಾರೂ ಕೂಡ ದೂರು ನೀಡಿಲ್ಲ ಎಂದು ತಿಳಿಸಿದ್ದಾರೆ
ಜಾಗೃತಿ ವಹಿಸಬೇಕಾಗಿತ್ತು
ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳಾ ಮಾನಸ ಈ ಕುರಿತು ಪ್ರತಿಕ್ರಿಯಿಸಿ, ಓಪನ್ ಸ್ಟ್ರೀಟ್ ಫೆಸ್ಟಿವಲ್ ಒಂದು ರೀತಿ ಖುಷಿ ತಂದರೆ , ಮತ್ತೊಂದು ಮಗ್ಗುಲಲ್ಲಿ ದೌರ್ಜನ್ಯವೂ ಅಡಗಿತ್ತು. ಕೆಲ ಹುಡುಗರು ಬೇಕೆಂತಲೇ ಹೆಣ್ಮಕ್ಕಳ ಮೇಲೆ ಬೀಳುತ್ತಿದ್ದರು. ಡಾನ್ಸ್ ಮಾಡುವ ನೆಪದಲ್ಲಿ ಮೈ ಮುಟ್ಟುತ್ತಿದ್ದರು . ಉತ್ಸವದಲ್ಲಿ ಸಭ್ಯತೆ ಇರಲಿಲ್ಲ .
ಜಿಲ್ಲಾಡಳಿತ ಒಳ್ಳೆಯ ಉದ್ದೇಶದಿಂದಲೇ ಆಯೋಜಿಸಿರಬಹುದು . ಆದರೆ ಜಾಗೃತಿ ವಹಿಸಬೇಕಾಗಿತ್ತು . ಇಲ್ಲೂ ಮೀ ಟೂ ಹೆಸರು ಕೇಳಿ ಬರುತ್ತಿರುವುದು ಬೇಸರದ ಸಂಗತಿ ಎಂದಿದ್ದಾರೆ.